Vitla: ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ ಕಳ್ಳತನ; ಕೋಟ್ಯಾಂತರ ರೂ. ನಗ- ನಗದು ಕಳವು
Team Udayavani, Feb 8, 2024, 12:45 PM IST
ವಿಟ್ಲ: ಕರ್ಣಾಟಕ ಬ್ಯಾಂಕಿನ ಅಡ್ಯನಡ್ಕ ಶಾಖೆಯಲ್ಲಿ ಗುರುವಾರ ಭಾರೀ ಕಳ್ಳತನ ನಡೆದಿದ್ದು, ಕೋಟ್ಯಾಂತರ ರೂ. ಮೌಲ್ಯದ ನಗ- ನಗದನ್ನು ದೋಚಿದ ಘಟನೆ ನಡೆದಿದೆ.
ಸುಮಾರು 2 -3 ಕೋಟಿ ರೂ. ನಗದು ಮತ್ತು ಬಂಗಾರ ಕಳ್ಳರ ಪಾಲಾಗಿದೆ. ಕೃತ್ಯವು ಫೆ. 7ರ ಬುಧವಾರ ರಾತ್ರಿ 2.30 ರಿಂದ ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಕರ್ಣಾಟಕ ಬ್ಯಾಂಕಿನ ಅಡ್ಯನಡ್ಕ ಶಾಖೆಯು ಕಲ್ಲಡ್ಕ ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯ ಅಂಚಿನಲ್ಲಿದೆ. ಒಂದು ಕಿಮೀ ದೂರದಲ್ಲಿ ಸಾರಡ್ಕ ಚೆಕ್ ಪೋಸ್ಟ್ ಇದೆ. ಬ್ಯಾಂಕಿನ ಹಿಂಬಾಗಿಲಿನ ಕಿಟಕಿ ಮುರಿದು ಒಳ ನುಗ್ಗಿದ್ದ ಕಳ್ಳರು ಗ್ಯಾಸ್ ಕಟ್ಟರ್ ಬಳಸಿ ಸೇಫ್ ಲಾಕರ್ ನ ಬಾಗಿಲು ತುಂಡರಿಸಿ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಆದರೆ ಕಳ್ಳತನದ ವೇಳೆ ಬ್ಯಾಂಕಿಗೆ ಅಳವಡಿಸಿದ ಸೆಕ್ಯೂರಿಟಿ ಅಲಾರಂ ಸೈರನ್ ಮಾಡದಿರುವುದು ಕುತೂಹಲ ಮೂಡಿಸಿದೆ. ಬ್ಯಾಂಕಿನ ಹಿಂಬದಿಯಲ್ಲಿರುವ ಅಂಗಳದಲ್ಲಿ ವಾಹನ ನಿಲ್ಲಿಸಿ, ಕೃತ್ಯ ಎಸಗಿ, ಬಳಿಕ ನಗ ನಗದು ಕಳವುಗೈದಿರಬಹುದು ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.
ಗುರುವಾರ ಬೆಳಗ್ಗೆ 9.30 ರ ಸುಮಾರಿಗೆ ಬ್ಯಾಂಕ್ ಸಿಬಂದಿಗಳು ಬ್ಯಾಂಕ್ ಗೆ ಬಂದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಸುಮಾರು 11 ಗಂಟೆ ಸುಮಾರಿಗೆ ವಿಟ್ಲ ಠಾಣಾಧಿಕಾರಿ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಬ್ಯಾಂಕ್ ಆವರಣವನ್ನು ಪೊಲೀಸರು ಸೀಲ್ ಮಾಡಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಘಟನಾ ಸ್ಥಳಕ್ಕೆ ಬರಬೇಕಿದೆ.
ಬ್ಯಾಂಕ್ ಒಳಗಡೆಯ ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗಿದೆಯೇ ಎಂಬ ಮಾಹಿತಿ ಲಭಿಸಿಲ್ಲ. ಈಗಾಗಲೇ ಪೊಲೀಸರು ಅದನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಬ್ಯಾಂಕ್ ಮುಂಭಾಗ ಹಾಗೂ ಹಿಂಭಾಗ ಅಥವಾ ಹೆದ್ದಾರಿಯಲ್ಲಿ ಯಾವುದೇ ಸಿಸಿಟಿವಿ ಅಳವಡಿಸಿದಿರುವುದು ತನಿಖೆಗೆ ತೊಡಕಾಗಿದೆ. ಅಕ್ಕಪಕ್ಕದ ಅಂಗಡಿಗಳಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ವಾಹನದ ಚಲನವಲನದ ದೃಶ್ಯಗಳು ಸೆರೆಯಾಗಿರುವ ಸಾಧ್ಯತೆಯಿದೆ.