ಅಪರೂಪದ ಕಲ್ಲು ಹೂವು “ಉಸ್ನೆಯ ಹಿರುಟ’ : ದೇಶದಲ್ಲೇ ಮೊದಲ ಬಾರಿಗೆ ಪತ್ತೆ
ಬಂಟ್ವಾಳದ ಪ್ರಾಧ್ಯಾಪಕರ ಸಂಶೋಧನೆ
Team Udayavani, Feb 23, 2023, 7:42 AM IST
ಬಂಟ್ವಾಳ: ಬಂಟ್ವಾಳ ಎಸ್ವಿಎಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ವಿನಾಯಕ್ ಕೆ.ಎಸ್. ನೇತೃತ್ವದ ಸಂಶೋಧನ ತಂಡವು ಭಾರತದಲ್ಲೇ ಮೊದಲ ಬಾರಿಗೆ “ಉಸ್ನೆಯ ಹಿರುಟ’ ಎಂಬ ಅಪರೂಪದ ಕಲ್ಲು ಹೂವು ಪ್ರಭೇದವನ್ನು ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಪತ್ತೆಹಚ್ಚಿದೆ.
ಈ ಪ್ರಭೇದವು ಪಾರ್ಮಿಲಿಯ ಎಂಬ ಕಲ್ಲು ಹೂವಿನ ಕುಟುಂಬಕ್ಕೆ ಸೇರಿದ್ದು, 1,500 ಅಡಿಗಿಂತ ಎತ್ತರ ಪ್ರದೇಶದಲ್ಲಿ ಮಾತ್ರ ಕಾಣಸಿಗುತ್ತದೆ. ಪಾಚಿ ಮತ್ತು ಶಿಲೀಂಧ್ರಗಳ ಸಹಯೋಗದಿಂದ ಉತ್ಪತ್ತಿಯಾಗುತ್ತದೆ. ವಾತಾವರಣ ಮಾಲಿನ್ಯದ ಕಾರಣಕ್ಕೆ ಶೀಘ್ರ ನಶಿಸುತ್ತದೆ. ಮಾಲಿನ್ಯರಹಿತ ಪ್ರದೇಶದಲ್ಲಿ ಕಾಣಸಿಗುತ್ತದೆ.
ಫಿಲಿಫೈನ್ಸ್, ಆಸ್ಟ್ರೇಲಿಯಾ, ಕ್ಯಾಲಿಫೋರ್ನಿಯ, ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಕಾಣಸಿಗುವ ಈ ಪ್ರಬೇಧದ ಕುರಿತು ಜರ್ನಲ್ ಆಫ್ ತ್ರಿಟನ್ ಟ್ಯಾಕ್ಸ್ ಎಂಬ ವಿಜ್ಞಾನ ಪತ್ರಿಕೆಯ ಫೆಬ್ರವರಿ ಆವೃತ್ತಿಯಲ್ಲಿ ಡಾ| ವಿನಾಯಕ್ ಅವರ ಲೇಖನ ಪ್ರಕಟಗೊಂಡಿದೆ. ಇದುವರೆಗೆ ಭಾರತದಲ್ಲಿ ಈ ಕುಟುಂಬಕ್ಕೆ ಸೇರಿದ 57 ಹಾಗೂ ಕರ್ನಾಟಕದಲ್ಲಿ 8 ಕಲ್ಲು ಹೂಗಳ ಪ್ರಭೇದಗಳನ್ನು ಗುರುತಿಸಲಾಗಿದೆ.
ಸಂಶೋಧನ ತಂಡದಲ್ಲಿ ಅರ್ಚನಾ ಆರ್. ಮೇಸ್ತ, ಎನ್. ರಾಜೇಶ್ವರಿ ಪಾಲ್ಗೊಂಡಿದ್ದರು.