ಅಂದು ಬ್ಲ್ಯಾಕ್ ಸ್ಪಾಟ್, ಇಂದು ಗ್ರೀನ್ ಸ್ಪಾಟ್; ಕಟಪಾಡಿ ಗ್ರಾ.ಪಂ. ರುದ್ರಭೂಮಿ ಮಾದರಿ
Team Udayavani, Feb 5, 2022, 4:56 PM IST
ಕಟಪಾಡಿ: ಬ್ಲ್ಯಾಕ್ ಸ್ಪಾಟ್ ಆಗಿ ಗುರುತಿಸಲ್ಪಡುತ್ತಿದ್ದ ಕಟಪಾಡಿ ಗ್ರಾ.ಪಂ.ನ ಸರಕಾರಿಗುಡ್ಡೆ ಸಾರ್ವಜನಿಕ ಹಿಂದೂ ರುದ್ರಭೂಮಿಯ ಪ್ರದೇಶವು ಇದೀಗ ಗ್ರೀನ್ಸ್ಪಾಟ್ ಆಗಿ ಅಭಿವೃದ್ಧಿ ಹೊಂದುತ್ತಿದೆ. ಸುಮಾರು ಎರಡು ಎಕರೆಯಷ್ಟು ಸ್ಥಳಾವಕಾಶವುಳ್ಳ ಈ ಶ್ಮಶಾನದಲ್ಲಿ ಈ ಹಿಂದೆ ಎಲ್ಲೆಂದರಲ್ಲಿ ಎಸೆದ ತ್ಯಾಜ್ಯ ರಾಶಿ, ಕೊಳೆತು ನಾರುವ ದುಸ್ಥಿತಿ ಕಂಡು ಬಂದಿತ್ತು. ಸಾಕಷ್ಟು ಸೂಚನಾ ಫಲಕಗಳನ್ನು ಅಳವಡಿಸಿದರೂ ತ್ಯಾಜ್ಯ ಎಸೆಯುವುದು ಮಾತ್ರ ಕಡಿತಗೊಂಡಿರಲಿಲ್ಲ.
ಇದೀಗ ಕಟಪಾಡಿ ಗ್ರಾ.ಪಂ. ಆಡಳಿತ ಮಂಡಳಿಯು ಸೂಕ್ತ ರೂಪುರೇಖೆಯೊಂದಿಗೆ ಸರಕಾರಿಗುಡ್ಡೆ ಸಾರ್ವಜನಿಕ ಹಿಂದೂ ರುದ್ರಭೂಮಿಯ ತ್ಯಾಜ್ಯ ಭರಿತ ಬ್ಲ್ಯಾಕ್ ಸ್ಪಾಟ್ನ್ನು ಸಂಪೂರ್ಣವಾಗಿ ಸ್ವತ್ಛಗೊಳಿಸಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಗ್ರೀನ್ ಸ್ಪಾಟ್ ಆಗಿ ಬದಲಾಯಿಸಿದೆ.
ಹನಿ ನೀರಾವರಿ ತಂತ್ರಜ್ಞಾನ
ಇಲ್ಲಿ ಕಹಿಬೇವು, ಲಿಂಬೆ, ಮಟ್ಟುಗುಳ್ಳ, ನೆಲ್ಲಿಕಾಯಿ ಸಹಿತ ಆಯುರ್ವೇದಿಕ್, ಔಷಧೀಯ ಗುಣವುಳ್ಳ ಅನೇಕ ಗಿಡಗಳನ್ನು ನೆಡಲಾಗಿದೆ. ಅದಕ್ಕೆ ಸೂಕ್ತ ಕಟ್ಟೆಯನ್ನು ಕಟ್ಟಿ ಪ್ರತಿಯೊಂದೂ ಗಿಡದ ಬುಡಕ್ಕೆ ಪೈಪ್ಲೈನ್ ಕೂಡ ಅಳವಡಿಸಿ ಹನಿ ನೀರಾವರಿ ತಂತ್ರಜ್ಞಾನದ ಮೂಲಕ ಗಿಡಗಳ ಬೆಳವಣಿಗೆಗೆ ಪ್ರಾಶಸ್ತ್ಯವನ್ನು ನೀಡಲಾಗಿದೆ.
ಮಟ್ಟುಗುಳ್ಳದ ಫಸಲು
ಇಲ್ಲಿ ನೆಡ ಲಾಗಿರುವ ಮಟ್ಟುಗುಳ್ಳದ ಗಿಡದಲ್ಲಿ ಈಗಾಗಲೇ ಮಟ್ಟುಗುಳ್ಳದ ಫಸಲು ಲಭಿಸಿದೆ. ಪ್ರಥಮ ಫಸಲನ್ನು ಗ್ರಾಮ ದೇಗುಲಕ್ಕೆ ಸಮರ್ಪಿಸಲಾಗಿದೆ ಎನ್ನುವ ಶ್ಮಶಾನ ನಿರ್ವಾಹಕ ಕಿಶೋರ್ ಪೂಜಾರಿ ಹಾಗೂ ಸಿಬಂದಿ ಹಸುರು ವಲಯವನ್ನು ಪಾಲನೆ ಮಾಡುತ್ತಿದ್ದಾರೆ.
ಬಾನಾಡಿಗಳಿಗೆ ಆಶ್ರಯ
ಸುಮಾರು ವಿವಿಧ ಬಗೆಯ 85 ಗಿಡಗಳನ್ನು ನೆಡಲಾಗಿದ್ದು, ಸುಸಜ್ಜಿತ ಹಸುರುವನದ ನಿರ್ಮಾಣಗೊಂಡಿದೆ. ಹಣ್ಣು ಹಂಪಲುಗಳ ಗಿಡಗಳು ಬಾನಾಡಿಗಳಿಗೂ ಆಹಾರ, ಆಶ್ರಯ ನೀಡು ತ್ತಿದೆ. ಕಹಿಬೇವಿನ ಸೊಪ್ಪುಗಳನ್ನು ಈಗಾ ಗಲೇ ಕೆಲವು ಮಂದಿ ಕೇಳಿ ಪಡೆದುಕೊಂಡು ಉಪಯೋಗಿಸುತ್ತಿದ್ದಾರೆ.
ಗ್ರಾಮದ ಸ್ವಚ್ಛತೆಗೆ ಸಹಕರಿಸಿ
ಈ ಭಾಗದಲ್ಲಿ ಕಸದ ರಾಶಿಗೆ ಮುಕ್ತಿ ಹಾಗೂ ಸ್ವಚ್ಛತೆಗೆ ಮಹತ್ವ ನೀಡುವ ದೃಷ್ಟಿಯಿಂದ ಬ್ಲ್ಯಾಕ್ ಸ್ಪಾಟ್ಗಳನ್ನು ಗುರುತಿಸಿ ಪಂಚಾಯತ್ ಆಡಳಿತವು ಕಾರ್ಯೋ ನ್ಮುಖವಾಗಿದ್ದು, ಆ ನಿಟ್ಟಿನಲ್ಲಿ ಪ್ರಥಮವಾಗಿ ಶ್ಮಶಾನ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಗ್ರೀನ್ ಸ್ಪಾಟ್ ನಿರ್ಮಾಣ ಮಾಡಿದ್ದು, ಯಶಸ್ವಿಯಾಗಿದ್ದೇವೆ. ಸಾರ್ವಜನಿಕರು, ಗ್ರಾಮಸ್ಥರು ನಮ್ಮ ಗ್ರಾಮದ ಸ್ವಚ್ಛತೆಗಾಗಿ ಇನ್ನಷ್ಟು ಹೆಚ್ಚು ಸಹಕರಿಸಿರಿ
– ಇಂದಿರಾ ಎಸ್. ಆಚಾರ್ಯ, ಅಧ್ಯಕ್ಷೆ,, -ಅಬೂಬಕರ್ ಎ.ಆರ್., ಉಪಾಧ್ಯಕ್ಷ,
ಮಮತಾ ವೈ.ಶೆಟ್ಟಿ., ಪಿ.ಡಿ.ಒ., ಕಟಪಾಡಿ ಗ್ರಾ.ಪಂ.
– ವಿಜಯ ಆಚಾರ್ಯ ಉಚ್ಚಿಲ