ಕೋತಟ್ಟು ಗ್ರಾ.ಪಂ.ಗೆ ಉಡುಪಿ ಜಿ.ಪಂ. ಸಿ.ಇ.ಒ. ಭೇಟಿ : ಅಭಿವೃದ್ಧಿ ಕುರಿತು ಚರ್ಚೆ
Team Udayavani, Jul 5, 2021, 4:14 PM IST
ಕೋಟ: ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ನವೀನ್ ಭಟ್ ಅವರು ಇಂದು ಕೋತಟ್ಟು ಗ್ರಾ.ಪಂ.ಗೆ ಭೇಟಿ ನೀಡಿ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಇ.ಒ. ಅವರು, ಕೋತಟ್ಟು ಗ್ರಾ.ಪಂ. ಕಚೇರಿ ಹಾಗೂ ಕಾರಂತ ಕಲಾಭವನಕ್ಕೆ ಸಂಪರ್ಕ ಕಲ್ಪಿಸುವ ಕಲ್ಮಾಡಿ ರಸ್ತೆಯ ಅಗಲೀಕರಣ ಅಭಿವೃದ್ಧಿ ಅವಕಾಶಗಳನ್ನು ಪರಿಶೀಲಿಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಂದ ಜಿಲ್ಲಾಡಳಿತಕ್ಕೆ ಪತ್ರ ಬಂದಿದೆ. ಈ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕಿದೆ ಹಾಗೂ ಗ್ರಾ.ಪಂ.ನಲ್ಲಿ ಆರಂಭಗೊಂಡಿರುವ ಎಸ್.ಎಲ್.ಆರ್.ಎಂ. ಘಟಕದ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸುವ ಸಲುವಾಗಿ ಇಂದು ಗ್ರಾ.ಪಂ.ಗೆ ಭೇಟಿ ನೀಡಿದ್ದೇನೆ ಎಂದರು.
ಈ ಸಂದರ್ಭ ಕಾರಂತ ಕಲಾಭವನಕ್ಕೆ ಭೇಟಿ ನೀಡಿ ವಿವಿಧ ವಿಚಾರಗಳ ಕುರಿತು ಮಾಹಿತಿ ಪಡೆದರು.
ಗ್ರಾ.ಪಂ. ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಽಕಾರಿ ಶೈಲಾ ಎಸ್. ಪೂಜಾರಿ, ಗ್ರಾ.ಪಂ. ಸದಸ್ಯ ಸತೀಶ್ ಬಾರಿಕೆರೆ, ಕೋಟ ಗ್ರಾ.ಪಂ. ಸದಸ್ಯ ಸಂತೋಷ್ ಪ್ರಭು, ಆರ್.ಐ. ರಾಜು, ಗ್ರಾಮಲೆಕ್ಕಾಧಿಕಾರಿ ಚೆಲುವರಾಜು, ಬ್ರಹ್ಮಾವರ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ವಿ. ಇಬ್ರಾಹಿಂಪುರ್, ಕಾರಂತ ಕಲಾಭವನದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.