World Bunts Conference: ಭವ್ಯ ಮೆರವಣಿಗೆ; ಹಲವು ಗಣ್ಯರು ಭಾಗಿ
Team Udayavani, Oct 28, 2023, 11:13 AM IST
ಉಡುಪಿ: ಜಾಗತಿಕ ಬಂಟರ ಸಂಘದ ಅಡಿಯಲ್ಲಿ ಎರಡು ದಿನಗಳ ಕಾಲ ನಡೆಯುವ ವಿಶ್ವ ಬಂಟರ ಸಮ್ಮೇಳನ 2023 ರ ಮೆರವಣಿಗೆ ಬೋರ್ಡ್ ಹೈಸ್ಕೂಲ್ ನಿಂದ ಅಜ್ಜರಕಾಡಿನ ಮೈದಾನದವರೆಗೆ ಭವ್ಯವಾಗಿ ನಡೆಯಿತು.
ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಬಾರ್ಕೂರು ಸಂಸ್ಥಾನದ ಸಂತೋಷ ಭಾರತಿ ಸ್ವಾಮೀಜಿ, ಕಟೀಲು ಲಕ್ಷ್ಮೀ ನಾರಾಯಣ ಅಸ್ರಣ್ಣ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಪುರುಷೋತ್ತಮ ಪಿ ಶೆಟ್ಟಿ , ಪಟ್ಲ ಸತೀಶ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.
ದೀಪ ಪ್ರಜ್ವಲನೆ ಮತ್ತು ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮೆರವಣಿಗೆಯಲ್ಲಿ ಕೀಲು ಕುದುರೆ, ಡೋಲು, ಹುಲಿ ಕುಣಿತ, ಚೆಂಡೆ, ಕಂಬಳದ ಕೋಣಗಳು, ಬ್ಯಾಂಡ್, ಯಕ್ಷಗಾನದ ವೇಷಗಳು ಭಾಗಿಯಾಗಿದ್ದವು.
ಉಳ್ಳಾಲ ಬಂಟರ ಸಂಘದವರು ತ್ರಿವರ್ಣದ ಉಡುಗೆ, ಗುರುಪುರ ಸಂಘದ ಸೈನಿಕರ ದಿರಿಸು, ಬೆಳ್ಮಣ್ ಸಂಘದ ಟೀಂ ಇಂಡಿಯಾ ಜೆರ್ಸಿ, ಶಿರ್ವ ತಂಡದ ಕೃಷಿ ಚಟುವಟಿಕೆ ಗಮನ ಸೆಳೆದವು.
ಕರಾವಳಿ ಮಾತ್ರವಲ್ಲದೆ ತೀರ್ಥಹಳ್ಳಿ, ಚಿಕ್ಕಮಗಳೂರು, ಕಳಸ, ಶಿವಮೊಗ್ಗ, ಮಡಿಕೇರಿ, ಹುಬ್ಬಳ್ಳಿ, ಮೈಸೂರು, ಬೆಂಗಳೂರು, ಗೋವಾ ಮತ್ತು ಮಂಬೈನ ಸಂಘಗಳು ಭಾಗವಹಿಸಿದ್ದವು.