Lovers: ಪ್ರೇಯಸಿ ಜತೆ ಮದುವೆ ಮಾಡಿಸಲು ಪೊಲೀಸರಿಗೆ ಪ್ರಿಯಕರ ಮನವಿ
Team Udayavani, Sep 8, 2023, 10:20 AM IST
ಬೆಂಗಳೂರು: ತಾನೂ ಪ್ರೀತಿಸಿದ ಯುವತಿ ಕೈಕೊಟ್ಟಿದ್ದು, ಆಕೆ ಜತೆ ಮದುವೆ ಮಾಡಿಸುವಂತೆ ಯುವಕನೊಬ್ಬ ತಿಲಕನಗರ ಪೊಲೀಸರ ಮೊರೆ ಹೋಗಿದ್ದಾನೆ.
ತಮಿಳುನಾಡು ಮೂಲದ ಮಣಿಕಂಠ ತನ್ನ ಪ್ರೇಯಸಿ ವಿರುದ್ಧ ದೂರು ನೀಡಿದವನು.
ಮಣಿಕಂಠ ತಿಲಕನಗರದಲ್ಲಿ ವಾಸವಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. 2 ವರ್ಷದಿಂದ ಕೆ.ಪಿ. ಅಗ್ರಹಾರ ನಿವಾಸಿ 22 ವರ್ಷದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಅಂದಿನಿಂದ ಯುವತಿಯ ಖರ್ಚು ವೆಚ್ಚದ ಸಂಪೂರ್ಣ ಜವಾಬ್ದಾರಿ ಮಣಿಕಂಠ ನೋಡಿಕೊಳ್ಳುತ್ತಿದ್ದ. “ಖರ್ಚು ಮಾಡಿದ ದುಡ್ಡು ಹೋದರು ಪರವಾಗಿಲ್ಲ. ನನಗೆ ನನ್ನ ಪ್ರೀತಿ ಬೇಕು. ಯುವತಿ ಮನೆಯವರ ಜತೆ ಮಾತನಾಡಿ ಮದುವೆ ಮಾಡಿಸಿ’ ಎಂದು ಮಣಿಕಂಠ ಪೊಲೀಸರಿಗೆ ಮನವಿ ಮಾಡಿದ್ದಾನೆ.
ಆತನ ಒತ್ತಾಯಕ್ಕೆ ಮಣಿದ ಪೊಲೀಸರು ಮಫ್ತಿಯಲ್ಲಿ ಯುವತಿಯ ಕುಟುಂಬವನ್ನು ಸಂಪರ್ಕಿಸಿದ್ದಾರೆ. ಆಗ ಯುವತಿಯ ಪೋಷಕರು, ನಮ್ಮ ಯುವತಿಗೆ ಬೇರೊಬ್ಬ ಯುವಕನ ಜತೆ ನಿಶ್ಚಿತಾರ್ಥವಾಗಿದೆ. ತೊಂದರೆ ಕೊಡಬೇಡಿ ಎಂದು ಹೇಳಿದ್ದಾರೆ. ಆಗ ಯುವತಿಗೆ ಮಣಿಕಂಠ ಇಷ್ಟವಿಲ್ಲ ಎಂಬುದು ಗೊತ್ತಾಗಿದೆ. ಈ ವಿಚಾರವನ್ನು ಆತನಿಗೂ ಮನವರಿಕೆ ಮಾಡಿ, ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.