Leopard; ನಾಗರಹೊಳೆಯಲ್ಲಿ ಚಿರತೆ ಶವ ಪತ್ತೆ; ಕಾದಾಟದಲ್ಲಿ ಸಾವನ್ನಪ್ಪಿರುವ ಶಂಕೆ
Team Udayavani, Dec 15, 2023, 2:31 PM IST
ಹುಣಸೂರು: ನಾಗರಹೊಳೆ ಉದ್ಯಾನವನದ ಕಲ್ಲಹಳ್ಳ ವನ್ಯಜೀವಿ ವಲಯದಲ್ಲಿ ಸುಮಾರು ಹತ್ತು ವರ್ಷದ ಗಂಡು ಚಿರತೆಯ ಶವ ಡಿ. 13ರ ಬುಧವಾರ ಪತ್ತೆಯಾಗಿದೆ.
ಉದ್ಯಾನದ ಕಲ್ಲಹಳ್ಳ ಗಸ್ತಿನಲ್ಲಿ 4-5 ದಿನಗಳ ಹಿಂದೆ ಸಾವನ್ನಪ್ಪಿರುವ ಚಿರತೆ ಶವ ಪತ್ತೆಯಾಗಿದ್ದು, ಗಸ್ತಿನಲ್ಲಿದ್ದ ಸಿಬ್ಬಂದಿಗಳ ಮಾಹಿತಿ ನೀಡಿದ ಮೇರೆಗೆ ಗುರುವಾರದಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ, ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯ ಕೆ.ಎನ್.ಮಾದಪ್ಪ, ವನ್ಯ ಜೀವಿ ಪರಿಪಾಲಕರ ಡಾ.ಸಿ.ಕೆ.ತಮ್ಮಯ್ಯರ ಸಮಕ್ಷಮದಲ್ಲಿ ದುಬಾರೆ ಆನೆ ಶಿಬಿರದ ಪಶುವೈದ್ಯ ಡಾ.ಚೆಟ್ಟಿಯಪ್ಪ, ಬಾಳೆಲೆ ಪಶು ಆಸ್ಪತ್ರೆಯ ಡಾ.ಭವಿಷ್ಯಕುಮಾರ್, ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು.
ನಂತರ ಸ್ಥಳದಲ್ಲೇ ಸುಟ್ಟು ಹಾಕಲಾಯಿತು. ಈ ವೇಳೆ ಎಸಿಎಫ್ ಅನುಷಾ, ಕಲ್ಲಹಳ್ಳ ವಲಯದ ಪ್ರಭಾರ ಆರ್.ಎಫ್.ಓ ಮಹಮ್ಮದ್ ಜಿಷಾನ್ ಹಾಗೂ ಸಿಬ್ಬಂದಿ ಇದ್ದರು.
ಹುಲಿ ಹಾಗೂ ಚಿರತೆ ನಡುವಿನ ಕಾದಾಟದಲ್ಲಿ ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದ್ದು, ಹೆಚ್ಚಿನ ಮಾಹಿತಿಗಾಗಿ ಚಿರತೆಯ ಅಂಗಾಂಗವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷಕುಮಾರ್ ತಿಳಿಸಿದ್ದಾರೆ.