ಅಂಕೋಲಾ : ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದ ಅಬಕಾರಿ ಅಧಿಕಾರಿ
Team Udayavani, Apr 19, 2022, 9:05 PM IST
ಅಂಕೋಲಾ : ಅಕ್ರಮ ಮದ್ಯ ಸಾಗಿಸುತ್ತಿದ್ದ ಪ್ರಕರಣವೊಂದರ ಆರೋಪಿಯಿಂದ ಅಬಕಾರಿ ಪ್ರೊಬೇಶನರಿ ಪಿಎಸ್ಐ ಲಂಚ ಸ್ವೀಕರಿಸುತ್ತಿರುವಾಗ ಎಸಿಬಿ ಡಿವೈಎಸ್ಪಿ ಪ್ರಕಾಶ ನೇತೃತ್ವದ ತಂಡ ದಾಳಿ ನಡೆಸಿ ಸಾಕ್ಷಿ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಅಂಕೋಲಾ ಅಬಕಾರಿ ಪ್ರೊಬೇಶನರಿ ಪಿಎಸ್ಐ ಆದ ಪ್ರೀತಿ ರಾತೋಡರವರೆ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದ ಅಧಿಕಾರಿ.
ಪ್ರಕರಣದ ವಿವರ :
ಕಳೆದ ಪೆಬ್ರವರಿ 26ರಂದು ತಾಲೂಕಿನ ಹಾರವಾಡ ಬಳಿ ಎರಡು ದ್ವಿಚಕ್ರ ವಾಹನದಲ್ಲಿ ಅಕ್ರಮ ಗೋವಾ ಸಾರಾಯಿ ಸಾಗಿಸುತ್ತಿರುವಾಗ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಸಾರಾಯಿ ಮತ್ತು ವಾಹನ ಸಮೇತ ರೂ.1,10,830 ಮೌಲ್ಯದ ಮಾಲನ್ನು ಹಿಡಿದು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಕುರಿತು ಅಬಕಾರಿ ಅಧಿಕಾರಿ ಪ್ರೀತಿ ರಾಠೋಡ ಈ ಪ್ರಮುಖ ಆರೋಪಿ ಕಾರವಾರದ ಮುಷ್ತಾಕ್ ಹಸನ್ ಬೇಗ್ ಇವರ ಬಳಿ ಅಧಿಕ ಮೌಲ್ಯದ ಸಾರಾಯಿಗಳು ಸೇರಿದಂತೆ ರೂ.50,000 ಲಂಚಕ್ಕೆ ಬೇಡಿಕೆಯಿಟ್ಟಿದ್ದರೆನ್ನಲಾಗಿದೆ.
ಮುಷ್ತಾಕ್ ಅವರು ಈ ಕುರಿತು ಕಾರವಾರ ಎಸಿಬಿಗೆ ಮಾಹಿತಿ ನೀಡಿರುತ್ತಾರೆ. ಬಳಿಕ ಎಸಿಬಿ ಡಿವೈಎಸ್ಪಿ ಪ್ರಕಾಶ್ ಅವರು ತಂಡ ರಚಿಸಿಕೊಂಡು ದಾಳಿಗೆ ಸಿದ್ದರಾಗಿ ಬಂದಿದ್ದಾರೆ. ಮೊದಲು ಮುಷ್ತಾಕ್ ಮಂಗಳವಾರ ಅಂಕೋಲಾ ಅಬಕಾರಿ ಕಚೇರಿಗೆ ಬಂದು ಡೀಲ್ ಕುದುರಿಸುತ್ತಿದ್ದಂತೆ ಕಚೇರಿಯಲ್ಲಿಯೇ ಲಂಚದ ಹಣದ ಒಂದು ಭಾಗವಾಗಿ 20,000 ಅಧಿಕಾರಿಗೆ ನೀಡುತ್ತಿರುವ ಸಂದರ್ಭದಲ್ಲಿಯೆ ಎಸಿಬಿ ದಾಳಿ ನಡೆಸಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಪಕ್ಷ ಸಿದ್ದಾಂತ, ನಾಯಕತ್ವ ಇಲ್ಲದ ಕಾಂಗ್ರೆಸ್ ದೇಶವನ್ನೇ ಗೆಲ್ಲಲು ಹೊರಟಿದೆ : ಸಿಎಂ ವ್ಯಂಗ್ಯ
ಅಬಕಾರಿ ಇಲಾಖೆಯ ಕಚೇರಿಯಲ್ಲಿಯೇ ಸುಮಾರು 8 ತಾಸುಗಳ ಕಾಲ ಲಂಚ ಪಡೆದಿರುವ ಅಧಿಕಾರಿಯ ವಿಚಾರಣೆ ನಡೆಸಿದ್ದಾರೆ. ಮತ್ತು ಪ್ರಕರಣದ ಕಡತ ಸೇರಿದಂತೆ ವಿಚಾರಣೆ ನಡೆಸಿದ್ದಾರೆ.