Politics: ಅನಂತ್ಕುಮಾರ್ ಹೆಗಡೆ ಹೇಳಿಕೆ: ಕಾಂಗ್ರೆಸ್, BJP ನಡುವೆ ಮುಂದುವರಿದ ವಾಕ್ಸಮರ
-ಹೀಗೇ ಮಾತನಾಡುತ್ತಿದ್ದರೆ ಕ್ರಮ ಅನಿವಾರ್ಯ ಎಂದ ಗೃಹ ಸಚಿವ ಡಾ| ಪರಮೇಶ್ವರ್
Team Udayavani, Jan 18, 2024, 9:12 PM IST
ಬೆಂಗಳೂರು: ಸಿಎಂ ವಿರುದ್ಧ ಸಂಸದ ಅನಂತ್ಕುಮಾರ್ ಹೆಗಡೆ ನೀಡಿದ್ದ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವಾಕ್ಸಮರ ಮುಂದುವರಿದಿದ್ದು, ಅನಂತ ಕುಮಾರ್ ಇದೇ ರೀತಿ ಮಾತನಾಡುತ್ತಿದ್ದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಗೃಹಸಚಿವರು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸಿಎಂ ಏಕವಚನದಲ್ಲಿ ಮಾತನಾಡಿದರೆ ಸರಿ, ಮಿಕ್ಕವರು ಮಾತನಾಡಿದರೆ ತಪ್ಪಾ ಎಂದು ಪ್ರಶ್ನಿಸಿದ್ದಾರೆ.
ಗುರುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಗೃಹಸಚಿವ ಡಾ| ಜಿ. ಪರಮೇಶ್ವರ್, ಅನಂತ್ಕುಮಾರ್ ಓರ್ವ ಸಂಸದ ಎಂಬ ಗೌರವದಿಂದ ಪೊಲೀಸರು ಕ್ರಮ ಕೈಗೊಳ್ಳಲು ಹಿಂಜರಿದಿದ್ದಾರೆ. ಆದರೆ ಅವರ ಮಾತುಗಳು ಇದೇ ರೀತಿ ಮುಂದುವರಿದರೆ ಕ್ರಮ ಅನಿವಾರ್ಯವಾದೀತು ಎಂದು ಎಚ್ಚರಿಸಿದರು. ಪೊಲೀಸರ ಸಂಯಮವನ್ನು ದೌರ್ಬಲ್ಯ ಎಂದು ಪರಿಗಣಿಸಬಾರದು ಎಂದೂ ಅವರು ಹೇಳಿದರು.
ನಿಂದನೆ ಆಗಬಾರದು
ಇದಕ್ಕೆ ತಿರುಗೇಟು ನೀಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಎಲ್ಲರನ್ನೂ ಹಲವು ವರ್ಷದಿಂದ ಏಕವಚನದಲ್ಲಿ ಮಾತನಾಡಿಕೊಂಡೇ ಬಂದಿದ್ದಾರೆ. ಅವರು ಮಾತನಾಡಿದರೆ ಸರಿ, ಮಿಕ್ಕವರು ಮಾತನಾಡಿದರೆ ತಪ್ಪಾ? ರಾಜಕೀಯದಲ್ಲಿ ಅವರಿಗೆ ದೊಡ್ಡ ಪ್ರಮಾಣದ ಸಹಾಯ-ಸಹಕಾರ ಮಾಡಿದ ದೇವೇಗೌಡರಿಗೇ ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅನಂತಕುಮಾರ್ ಹೆಗಡೆ ಬಿಜೆಪಿಯಲ್ಲಿರುವ ಹುಚ್ಚ. ಆತನ ಮಾತಿಗೆ ಬೆಲೆ ಕೊಡುವ ಅಗತ್ಯ ಇಲ್ಲ. ಆತನ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷರೇ ಹೇಳಿದ್ದಾರೆ. ಆತನನ್ನು ಅವರ ಪಕ್ಷದವರು ಹುಚ್ಚಾಸ್ಪತ್ರೆಗೆ ಸೇರಿಸಲಿ. ಇಲ್ಲದಿದ್ದರೆ ನಾವು ಚಿಕಿತ್ಸೆ ಕೊಡಿಸುತ್ತೇವೆ.
– ಶಿವರಾಜ್ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ