ಭೂತಾಯಿಗೆ ಬಯಕೆಯ ಬುತ್ತಿ ಅರ್ಪಿಸಿದ ಅನ್ನದಾತರು
Team Udayavani, Jan 14, 2021, 2:25 PM IST
ಬಾಗಲಕೋಟೆ: ಭಾರತೀಯ ಹಬ್ಬಗಳಲ್ಲಿ ಮಕರ ಸಂಕ್ರಾಂತಿಗೆ ವಿಶೇಷ ಸ್ಥಾನವಿದೆ. ಸೂರ್ಯನು ಧನುಷ್ಯ ರಾಶಿಯಿಂದ ಮಕರ ರಾಶಿ ಪ್ರವೇಶಿಸುವ ಸಂದರ್ಭವನ್ನು ಮಕರ ಸಂಕ್ರಾಂತಿ (ಉತ್ತರಾಯಣ ಪುಣ್ಯ ಕಾಲ ಆರಂಭ) ಎಂದು ಜ್ಯೋತಿಷ್ಯದಲ್ಲಿ
ಗುರುತಿಸಲಾಗಿದೆ. ಮಾಗಿಯ ಚಳಿ ಜನವರಿಯಲ್ಲಿ ಕಡಿಮೆ ಆಗುವುದು. ಜಾನುವಾರುಗಳನ್ನು ಸಿಂಗರಿಸಿ ಕಿಚ್ಚು ಹಾಯಿಸುವುದು,
ಗಾಳಿಪಟ ಸ್ಪರ್ಧೆ, ಸುಗ್ಗಿ ಕುಣಿತ, ಸಂಗೀತ, ಸಂಕ್ರಾಂತಿ ಪುಣ್ಯ ಸ್ನಾನ, ಕುಂಭ ಮೇಳದ ಆರಂಭ. ಭೂತಾಯಿಗೆ ಸೀಮಂತ, ಪ್ರೀತಿ ಹಾಗೂ ಸ್ನೇಹದ ಸಂಕೇತವಾಗಿ ಎಳ್ಳು ಬೆಲ್ಲ ವಿತರಣೆ, ಸೂರ್ಯನಿಗೆ ವಿಶೇಷ ಪೂಜೆ ಇವೆಲ್ಲವು ಸಂಕ್ರಾಂತಿಯ ಸಂಭ್ರಮ ಇಮ್ಮಡಿಗೊಳಿಸುತ್ತವೆ.
ಕವಿ ಲಕ್ಷ್ಮಿನಾರಾಯಣ ಭಟ್ಟ ಹೇಳುವಂತೆ, ಹರಿಸಿ ನಮ್ಮ ಕಣ್ಣ ಕವಿದ ಭ್ರಾಂತಿ, ಮನ್ನಿಸಿ ನಡೆಸಲಿ ಶುಭ ಸಂಕ್ರಾಂತಿ. ಮಕರ ಸಂಕ್ರಾಂತಿಯ ದಿನ ರೈತರು ಎತ್ತು ಬಂಡಿಯನ್ನು ಶೃಂಗರಿಸಿ ಮನೆ ಮಂದಿ ಎಲ್ಲ ಕುಳಿತುಕೊಂಡು ಸಡಗರ ಸಂಭ್ರಮದಿಂದ ನಾನಾ
ಬಗೆಯ ಭೋಜನದ ಬುತ್ತಿಯ ಗಂಟನ್ನು ತಗೆದುಕೊಂಡು ಎತ್ತಿನ ಬಂಡಿಯಲ್ಲಿ ಕುಳಿತು ಹೊಲಗಳತ್ತ, ನಾ ಮುಂದೆ ನೀ ಮುಂದೆ ಎಂದು ರೈತರು ಬಂಡಿಯನ್ನು ಓಡಿಸುತ್ತ, ಹೊಲಗಳಿಗೆ ತೆರಳಿ ಹುಲುಸಾಗಿ ಬೆಳೆದ ಭೂತಾಯಿಗೆ ಬಯಕೆಯ ಬುತ್ತಿಯನ್ನು ಅರ್ಪಿಸುವ ಉತ್ತರ ಕರ್ನಾಟಕದ ವಿಶಿಷ್ಠ ಹಬ್ಬ ಎಳ್ಳ ಅಮಾವಾಸ್ಯೆ.
ಇದನ್ನೂ ಓದಿ:ಮಾರ್ಚ್ ನಲ್ಲಿ ಮಾರುಕಟ್ಟೆಗೆ OPPO X3 ಪ್ರೋ ಸ್ಮಾರ್ಟ್ ಪೋನ್: ಆಸಕ್ತಿದಾಯಕ ಫೀಚರ್ ಗಳು !
ಹಿಂಗಾರು ಹಂಗಾಮಿನಲ್ಲಿ ಬಿತ್ತನೆಗೊಂಡ ಬಿಳಿಜೋಳ, ಕಡಲೆ, ಗೋಧಿ, ಸೇರಿದಂತೆ ಅನೇಕ ಹಿಂಗಾರು ಬೆಳೆಗಳು ಸಮೃದ್ಧಿಯಾಗಿ ಬೆಳೆದು, ಹೊಡೆ ಇರಿದು ತೆನೆಯಾಗಿ ಹೊರ ಬರುವ ಸಮಯದಲ್ಲಿ ರೈತರು ಹುಲಸಾಗಿ ಬೆಳೆದು ನಿಂತ ಭೂತಾಯಿಗೆ ಸೀಮಂತ
ನೆರವೆರಿಸುವ ರೈತ ಹಬ್ಬವಿದು. ಹೊಲದಲ್ಲಿ ಬನ್ನಿ ಮರಕ್ಕೆ ವಿಶಿಷ್ಟವಾಗಿ ಸಿಂಗರಿಸಿ ಅದಕ್ಕೆ ಸೀರೆ, ಬಳೆ, ಕುಪ್ಪಸ ತೊಡಿಸಿ, ಅರಿಸಿನ-ಕುಂಕುಮ ಹೂವನ್ನು ಧರಿಸಿ ಮನೆಯಲ್ಲಿ ತಯಾರಿಸಿದ ಅನೇಕ ಭಕ್ಷ-ಭೋಜನಗಳನ್ನು ಅದರ ಮುಂದೆ ಇರಿಸಿ ನೈವೇದ್ಯ ಮಾಡಿ ಸಮೃದ್ಧಿಯಿಂದ ಬೆಳೆದ ಬೆಳೆಗೆ ನೀರು ಮತ್ತು ಆಹಾರ ಪದಾರ್ಥಗಳನ್ನು ಚೆಲ್ಲುತ್ತ “ಹುಲ್ಲುಲ್ಲಿಗೊ ಚಲಾಂಬರಗೋ’ ಎಂದು ಕೂಗುತ್ತ ಹೊಲದ ತುಂಬಾ ಚೆಲ್ಲಿ, ಒಳ್ಳೆಯ ಫಸಲು ಬರಲಿ ಎಂದು ಮನೆ ಮಂದಿಯೆಲ್ಲ ಪ್ರಾರ್ಥನೆ ಸಲ್ಲಿಸುವುದು ಸಂಕ್ರಮಣದ
ಪರಂಪರೆ.
ಹಬ್ಬ ಮೂರನಾಲ್ಕು ದಿನ ಇರುವಾಗಲೇ ಮಹಿಳೆಯರು ಹಬ್ಬದೂಟದ ಸಿದ್ಧತೆಗೆ ತೊಡಗುತ್ತಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ಎಳ್ಳು ಹಚ್ಚಿದ ಸಜ್ಜಿ ರೊಟ್ಟಿ, ಬಿಳಿ ಜೋಳದ ರೊಟ್ಟಿ, ಗುರೆಳ್ಳು, ಶೇಂಗಾ, ಪುಟಾಣಿ ಚಟ್ನಿಗಳನ್ನು ಕುಟ್ಟುವ ಕಾರ್ಯದಲ್ಲಿ
ಮಗ್ನರಾಗುವರು. ರೈತರ ಈ ಹಬ್ಬ ಮದುವೆಯ ಸಂಭ್ರಮದ ವಾತಾವರಣ ನಿರ್ಮಿಸುತ್ತದೆ. ಮಕರ ಸಂಕ್ರಾಂತಿ ಬಂತೆಂದರೆ ಸಾಕು ರೈತ ಕುಟುಂಬಕ್ಕೆ ಎಲ್ಲಿಲ್ಲದ ಖುಷಿಯ ಸಂಭ್ರಮ.
ಇದನ್ನೂ ಓದಿ:ಕಲಬುರಗಿಗೆ 29,500 ಡೋಸ್ ಕೋವಿಶೀಲ್ಡ್ ಲಸಿಕೆ ಆಗಮನ: ನಾಲ್ಕು ಜಿಲ್ಲೆಗಳಿಗೆ ಹಂಚಿಕೆ
ಹಬ್ಬದ ಹಿಂದಿನ ರಾತ್ರಿ ಮಹಿಳೆಯರು ಬೇಗನೆ ಎದ್ದು ಹೋಳಿಗೆ, ಕರಿಗಡಬು, ಶೇಂಗಾ ಹೋಳಿಗೆ ತಯಾರಿಸುವದು. ವಿಶಿಷ್ಟವಾದ
ಗಿಜಿಬಾಜಿ, ಬದ್ನಿಕಾಯಿ ಭರತ, ಕಾಳು ಪಲ್ಲೆಗಳನ್ನು ತಯಾರಿಸುವುದು ವಿಶೇಷ. ಸಜ್ಜಿರೊಟ್ಟಿಯ ಜೊತೆಗೆ ಬದನಿ ಕಾಯಿಪಲ್ಲೆ, ಕೆನೆ ಮೊಸರು, ತರಹೇವಾರಿ ಚಟ್ನಿ ಸಮೇತ ಊಟ ಮಾಡುವುದೇ ಒಂದು ವಿಶೇಷ.
ಸಹ ಭೋಜನ: ಹಬ್ಬದ ದಿನದಂದು ತಮ್ಮ ಪರಿವಾರದ ಜೊತೆಗೆ ಅಕ್ಕ ಪಕ್ಕದವರನ್ನು, ದೂರ ದೂರದ ಸಂಬಂಧಿಗಳನ್ನು ಕರೆಕದುಕೊಂಡು ಹೊಲದಲ್ಲಿ ಪೂಜೆ ನೈವೆದ್ಯ ಮುಗಿದ ನಂತರ ಎಲ್ಲರು ಸೇರಿಕೊಂಡು ಸಾಲು ಪಂತಿಯಲ್ಲಿ ಕುಳಿತು ಸಹ ಭೋಜನ ಸವಿಯುತ್ತಾರೆ. ಇಂದು ಈ ಹಬ್ಬ ಸಹ ಜೀವನ, ಸಹ ಬಾಳ್ವೆ, ಸೌಹಾರ್ದತೆಯ ಸಂಕೇತವಾಗಿದೆ. ಊಟದ ಬಳಿಕ
ತಾಂಬೂಲ ಸವಿದು ಕೆಲ ಹೊತ್ತು ಹೊಲದಲ್ಲಿ ವಿಶ್ರಮಿಸಿ ಸಾಯಂಕಾಲ ಎಳ್ಳು ಬೆಲ್ಲವನ್ನು ವಿನಿಮಯ ಮಾಡುವ, ವಿಶಿಷ್ಟ ಸಂಸ್ಕೃತಿಯ ಹಬ್ಬವೇ ಮಕರ ಸಂಕ್ರಾಂತಿ.
ಲೇಖನ: ಮಹಾಬಳೇಶ್ವರ ಎಸ್. ಗುಡಗುಂಟಿ, ಬಾಗಲಕೋಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
3 ದಿನ ರೇವಣ್ಣ ಭೇಟಿಗಿಲ್ಲ ಅವಕಾಶ; ಮಾಜಿ ಸಚಿವರಿಗೆ ಈಗ ಬೆನ್ನು ನೋವು
ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ
ನೀತಿ ಸಂಹಿತೆ ಸಡಿಲಿಕೆ: ಆಯೋಗಕ್ಕೆ ಪತ್ರ ಬರೆದು ರಾಜ್ಯ ಸರಕಾರ ಮನವಿ
Siddaramaiah ಚುನಾವಣ ಪ್ರಚಾರ: 14 ಲಕ್ಷ ಜನರನ್ನು ಉದ್ದೇಶಿಸಿ ಸಿಎಂ ಮಾತು
D.K. Shivakumar ಲೋಕದ ಡೊಂಕು ನೀವೇಕೆ ತಿದ್ದುವಿರಿ, ನಿಮ್ಮ ಮನೆಯನ್ನು ಸರಿ ಮಾಡಿಕೊಳ್ಳಿ