ಕೋವಿಡ್ : ಕೇರಳಕ್ಕೆ ಶುಭ ಶುಕ್ರವಾರ
Team Udayavani, May 2, 2020, 10:51 AM IST
ಕಾಸರಗೋಡು: ಕಳೆದ 55 ದಿನಗಳಿಂದ ನಿರಂತರ ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದ ಕೇರಳ
ರಾಜ್ಯದಲ್ಲಿ ಮೊದಲ ಬಾರಿಗೆ ಶುಕ್ರವಾರ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ.
ಇದೇ ವೇಳೆ ಕಾಸರಗೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 179 ಮಂದಿಗೆ ರೋಗ ಬಾಧಿಸಿದ್ದು, 171 ಮಂದಿ ಗುಣಮುಖ ರಾಗಿದ್ದಾರೆ. 8 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
9 ಮಂದಿ ಗುಣಮುಖ
ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ತಲಾ ನಾಲ್ವರು ಮತ್ತು ಎರ್ನಾಕುಳಂ ಜಿಲ್ಲೆಯಲ್ಲಿ ಒಬ್ಬರು ಸೇರಿದಂತೆ ಶುಕ್ರವಾರ ರಾಜ್ಯದಲ್ಲಿ 9 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಎರ್ನಾಕುಳಂ, ಆಲಪ್ಪುಳ, ತೃಶ್ಶೂರು, ವಯನಾಡು ಜಿಲ್ಲೆಗಳು ರೋಗ ಮುಕ್ತವಾಗಿವೆ.
ವಿವಿಧ ಜಿಲ್ಲೆಗಳಲ್ಲಿ 21,499 ಮಂದಿ ನಿಗಾದಲ್ಲಿದ್ದಾರೆ. ಶುಕ್ರವಾರ ಶಂಕಿತ 106 ಮಂದಿಯನ್ನು ಆಸ್ಪತ್ರೆ ಗಳಿಗೆ ದಾಖಲಿಸಲಾಗಿದೆ. ರೋಗ ಲಕ್ಷಣಗಳುಳ್ಳ 27,150 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ ಲಭ್ಯ 26,225 ಮಂದಿ ಸ್ಯಾಂಪಲ್ ನೆಗೆಟಿವ್ ಆಗಿವೆ.
ಹಾಟ್ ಸ್ಪಾಟ್
ರಾಜ್ಯದಲ್ಲಿ ಒಟ್ಟು 80 ಹಾಟ್ ಸ್ಪಾಟ್ಗಳಿವೆ. ಕಾಸರಗೋಡು ಜಿಲ್ಲೆಯಲ್ಲಿ ಕಾಂಞಂಗಾಡ್ ನಗರಸಭೆ, ಉದುಮ, ಪಳ್ಳಿಕೆರೆ ಗ್ರಾ.ಪಂ.ಗಳನ್ನು ಹಾಟ್ ಸ್ಪಾಟ್ಗಳಿಂದ ಹೊರತುಪಡಿಸಲಾಗಿದೆ. ಇಲ್ಲಿನ ಎಲ್ಲ ರೋಗಿಗಳು ಈಗಾಗಲೇ ರೋಗ ಮುಕ್ತರಾಗಿದ್ದರೂ ಕಾಂಞಂಗಾಡ್ ನಗರಸಭೆಯನ್ನು ಹಾಟ್ಸ್ಪಾಟ್ ಯಾದಿಯಲ್ಲಿ ಮುಂದುವರಿಸಲಾಗಿತ್ತು. ಶುಕ್ರವಾರ ಈ ಯಾದಿಯಿಂದ ಹೊರತುಪಡಿಸಲಾಯಿತು. ಪ್ರಸ್ತುತ ಕಾಸರಗೋಡು ನಗರಸಭೆ, ಚೆಂಗಳ, ಚೆಮ್ನಾಡ್, ಮುಳಿಯಾರು, ಮೊಗ್ರಾಲ್ ಪುತ್ತೂರು, ಅಜಾನೂರು, ಉದುಮ ಗ್ರಾಮ ಪಂಚಾಯತ್ಗಳು ಹಾಟ್ಸ್ಪಾಟ್ಗಳಲ್ಲಿವೆ.
ಕಿತ್ತಳೆ ವಲಯದಲ್ಲಿ ಜಿಲ್ಲೆ
ಕೇಂದ್ರ ಆರೋಗ್ಯ ಸಚಿವಾಲಯ ಕಾಸರಗೋಡು ಜಿಲ್ಲೆಯನ್ನು ಕೆಂಪು ವಲಯದಿಂದ ಕಿತ್ತಳೆ ವಲಯಕ್ಕೆ ಸೇರ್ಪಡೆಗೊಳಿಸಿದೆ. ಕೇರಳದಲ್ಲಿ ಕಣ್ಣೂರು, ಕೋಟ್ಟಯಂ ಜಿಲ್ಲೆಗಳು ಮಾತ್ರ ಕೆಂಪು ವಲಯದಲ್ಲಿವೆ. ರಾಜ್ಯದ 10 ಜಿಲ್ಲೆಗಳು ಕಿತ್ತಳೆ ವಲಯದಲ್ಲೂ ಎರಡು ಜಿಲ್ಲೆಗಳು ಹಸುರು ವಲಯದಲ್ಲೂ ಇವೆ.