ಭೀಭತ್ಸ ಘಟನೆ : ಇದ್ದ ಒಬ್ಬ ಕರುಳ ಕುಡಿಯನ್ನೇ ಕೊಚ್ಚಿ ಕೊಂದ ಮಾನಸಿಕ ಅಸ್ವಸ್ಥೆ
Team Udayavani, Jan 10, 2022, 4:28 PM IST
ಎಚ್.ಡಿ.ಕೋಟೆ: ಒಂದೆಡೆ ಮಕ್ಕಳನ್ನು ಪಡೆಯಲು ಪುಣ್ಯ ಮಾಡಿರಬೇಕು ಎನ್ನುತ್ತಾರೆ, ಮತ್ತೂಂದೆಡೆ ಉತ್ತಮ ತಂದೆ-ತಾಯಿಯನ್ನು ಪಡೆಯುವುದು ಪೂರ್ವಜನ್ಮದ ಪುಣ್ಯ ಎನ್ನುತ್ತಾರೆ. ಆದರೆ, ಹೆತ್ತಮ್ಮನೇ ಮಗುವನ್ನು ಮಚ್ಚಿನಿಂದ ಭೀಕರವಾಗಿ ಕೊಚ್ಚಿದಾಗ ಪರಿಸ್ಥಿತಿ ಹೇಗಿರಬೇಡ!.
ಹೀಗೆ ಮಚ್ಚಿನೇಟು ತಿಂದ ಬಾಲಕನನ್ನು ಸಂಬಂಧಿಕರು ಆಸ್ಪತ್ರೆಗೆ ಸೇರಿಸುವ ವೇಳೆ ಅಸುನೀಗಿದ್ದಾನೆ. ಘಟನೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದ್ದು ಮಾನಸಿಕವಾಗಿ ಅಸ್ವಸ್ಥಳಾಗಿರುವ ತಾಯಿ ಪರಾರಿಯಾಗಿದ್ದಾಳೆ. ಬೂದನೂರು ಗ್ರಾಮದ ಶಂಕರ್ ಮತ್ತು ಭವಾನಿ ಎಂಬ ದಂಪತಿಯ ಏಕೈಕ ಪುತ್ರ ಶ್ರೀನಿವಾಸ್ (4) ಮೃತಪಟ್ಟ ಬಾಲಕ. ಘಟನೆ ವೇಳೆ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕನನ್ನು ವೈದ್ಯರ ಸಲಹೆಯಂತೆ ಜಿಲ್ಲಾಸ್ಪತ್ರೆಗೆ ಸ್ಥಳಾಂತರಗೊಳಿಸಲಾಗುತ್ತಿತ್ತು.
ಏನಿದು ಘಟನೆ?: ಭವಾನಿ ಎಚ್.ಡಿ.ಕೋಟೆ ತಾಲೂಕಿನ ಕೆ.ಯಡತೊರೆ ಗ್ರಾಮದ ನಿವಾಸಿಯಾಗಿದ್ದು, ಹಲವು ವರ್ಷಗಳ ಹಿಂದಿನಿಂದ ತವರು ಮನೆಯಲ್ಲಿಯೇ ವಾಸವಾಗಿದ್ದರು. ಕಳೆದ ಸುಮಾರು 15ದಿನಗಳ ಹಿಂದೆಯಷ್ಟೇ ಪತಿಯ ಗ್ರಾಮ ಬೂದನೂರಿಗೆ ತನ್ನ ಏಕಮಾತ್ರ ಪುತ್ರ ಶ್ರೀನಿವಾಸ್ ಜತೆ ಆಗಮಿಸಿದ್ದರು. ಹಲವು ದಿನಗಳ ಹಿಂದಿನಿಂದ ನನ್ನ ಮೈ ಮೇಲೆ ದೇವರು ಬರುತ್ತದೆ ಎಂದು ಮಾನಸಿಕವಾಗಿ ಅಸ್ವಸ್ಥರಾಗಿದ್ದಳೆಂದು ಗ್ರಾಮದ ಹಲವರು ಹೇಳುತ್ತಿದ್ದಾರೆ. ಘಟನೆ ಕುರಿತು ಎಚ್.ಡಿ.ಕೋಟೆ ಪೊಲೀಸರಿಗೆ ಸಾರ್ವಜನಿಕ ಆಸ್ಪತ್ರೆಯಿಂದ ಮಾಹಿತಿ ನೀಡಿದ್ದಾರೆ. ಎಚ್.ಡಿ.ಕೋಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಾಲಕನ ಮೇಲೆ ಮನ ಬಂದಂತೆ ಮಚ್ಚಿನಿಂದ ಹಲ್ಲೆ
ಭಾನುವಾರ ಮಧ್ಯಾಹ್ನದ ತನಕ ಶಂಕರ್ ಮನೆಯಲ್ಲಿಯೇ ಇದ್ದು ಮಧ್ಯಾಹ್ನ ಅಗತ್ಯ ವಸ್ತು ಖರೀದಿಗಾಗಿ ಮನೆಯಿಂದ ಸಮೀಪದ ಅಂಗಡಿಯತ್ತ ಧಾವಿಸಿದ್ದರು. ಅಂಗಡಿಯಿಂದ ಮರಳಿ ಮನೆಗೆ ಹಿಂದಿರುಗುವಷ್ಟರಲ್ಲಿ ಭವಾನಿ ಮಚ್ಚಿನಿಂದ ಮಗುವಿನ ತಲೆ ಭಾಗಕ್ಕೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಇದರಿಂದ ಬಾಲಕನ ಇಡೀ ತಲೆಯ ಭಾಗದಲ್ಲಿ ಸಾಕಷ್ಟು ಬಲವಾದ ಮಚ್ಚೇಟು ಬಿದ್ದು ನೋಡುಗರು ಭಯಭೀತರಾಗುವಂತೆ ರಕ್ತ ಸಿಕ್ತ ಗಾಯಗಳಾಗಿದ್ದವು. ಮನೆಗೆ ಬಂದ ಶಂಕರ್ ಘಟನೆ ಕಂಡು ಭಯಭೀತನಾಗಿ ಗ್ರಾಮಸ್ಥರ ಸಹಕಾರದೊಂದಿಗೆ ಮಗುವನ್ನು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದರು. ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ ಹಿನ್ನೆಲೆ ಮಗುವನ್ನು
ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಿದ್ದರು.