ಲಂಕಾದಲ್ಲಿ ಉಗ್ರರ ಅಟ್ಟಹಾಸ; ಕನ್ನಡಿಗರ ಸಾವಿನ ಸಂಖ್ಯೆ ಏರಿಕೆ?
Team Udayavani, Apr 22, 2019, 11:48 AM IST
ಶ್ರೀಲಂಕಾ:ಶ್ರೀಲಂಕಾದಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ದಾಳಿಯಲ್ಲಿ ಬೆಂಗಳೂರಿನಿಂದ ಕೊಲಂಬೋಗೆ ತೆರಳಿದ್ದ 7ಮಂದಿ ಕನ್ನಡಿಗರು, ಜೆಡಿಎಸ್ ಮುಖಂಡರಲ್ಲಿ ನಾಲ್ಕು ಮಂದಿ ಮೃತಪಟ್ಟಿರುವ ಬಗ್ಗೆ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮಾಡಿ, ಹನುಮಂತರಾಯಪ್ಪ ಹಾಗೂ ರಂಗಪ್ಪ ಸೇರಿದಂತೆ ಇಬ್ಬರು ಸಾವನ್ನಪ್ಪಿರುವುದಾಗಿ ಖಚಿತಪಡಿಸಿದ್ದರು.
ಇಬ್ಬರ ಸಾವು ಮಾತ್ರ ಅಧಿಕೃತ ಎಂದು ಗೃಹಸಚಿವ ಎಂಬಿ ಪಾಟೀಲ್ ಹೇಳಿದ್ದು, ಉಳಿದವರ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ವಿದೇಶಾಂಗ ಇಲಾಖೆಯಿಂದ ಬರಬೇಕಾಗಿದೆ ಎಂದು ತಿಳಿಸಿದ್ದಾರೆ.
ಇದೀಗ ಬಂದ ಸುದ್ದಿ ಪ್ರಕಾರ, ಕೊಲಂಬೋಕ್ಕೆ ಪ್ರವಾಸಕ್ಕೆ ತೆರಳಿದ್ದ 7 ಮಂದಿ ಜೆಡಿಎಸ್ ಮುಖಂಡರಲ್ಲಿ, ಬೆಂಗಳೂರಿನ 8ನೇ ಮೈಲಿ ನಿವಾಸಿ ಹನುಮಂತರಾಯಪ್ಪ, ವಿದ್ಯಾರಣ್ಯಪುರ ನಿವಾಸಿ ರಂಗಪ್ಪ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಗುಲ್ಬರ್ಗ, ಕೋಲಾರ, ಬೀದರ್, ಹೊಸಪೇಟೆ ಸೇರಿದಂತೆ ರಾಜ್ಯದ ವಿವಿಧೆಡಯಿಂದ ಆಗಮಿಸಿದ್ದ ಪ್ರವಾಸಿಗರು ಕೊಲಂಬೋದಲ್ಲಿ ಇದ್ದಿರುವುದಾಗಿ ಪ್ರತ್ಯಕ್ಷದರ್ಶಿಗಳು ಖಾಸಗಿ ಟಿವಿ ಚಾನೆಲ್ ಗಳ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಬೆಂಗಳೂರಿನಿಂದ ತೆರಳಿದ್ದ ಜೆಡಿಎಸ್ ಮುಖಂಡರು ಕೊಲಂಬೋದ ಶಾಂಗ್ರೀಲಾ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು ಎಂದು ವರದಿ ತಿಳಿಸಿದೆ. ಸುರತ್ಕಲ್ ಮೂಲದ ಮಹಿಳೆ ರಝೀನಾ(58ವರ್ಷ) ಸೇರಿದಂತೆ ಒಟ್ಟು 5 ಮಂದಿ ಕನ್ನಡಿಗರು ಸಾವನ್ನಪ್ಪಿದ್ದಾರೆ.
ಶ್ರೀಲಂಕಾದಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 290ಕ್ಕೆ ಏರಿದ್ದು, ಸುಮಾರು 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಲಂಕಾ ಕನ್ನಡಿಗರ ಸಾವಿನ ಕುರಿತು ಗೃಹಸಚಿವ ಎಂಬಿ ಪಾಟೀಲ್:
ಶ್ರೀಲಂಕಾ ಸರಣಿ ಬಾಂಬ್ ಸ್ಫೋಟದಲ್ಲಿ ಇಬ್ಬರು ಕನ್ನಡಿಗರು ಸಾವನ್ನಪ್ಪಿರುವ ಬಗ್ಗೆ ಖಚಿತವಾಗಿದೆ. ಉಳಿದವರ ಬಗ್ಗೆ ಇನ್ನೂ ವಿದೇಶಾಂಗ ಇಲಾಖೆಯಿಂದ ಮಾಹಿತಿ ಬಂದಿಲ್ಲ ಎಂದು ಗೃಹಸಚಿವ ಎಂಬಿ ಪಾಟೀಲ್ ವಿಜಯಪುರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದ್ದರು.