Delhi HC: ಪತ್ನಿಯಿಂದ ಪತಿಯ ಅವಹೇಳನ, ಅವಮಾನ ಕೂಡ ಕ್ರೌರ್ಯವೇ
ದೆಹಲಿ ಹೈಕೋರ್ಟ್ನ ಮಹತ್ವದ ತೀರ್ಪು- ದಂಪತಿ ವಿಚ್ಛೇದನ ಎತ್ತಿಹಿಡಿದ ಉಚ್ಚ ನ್ಯಾಯಾಲಯ
Team Udayavani, Dec 24, 2023, 8:02 PM IST
ನವದೆಹಲಿ: ಸುಳ್ಳು ಆರೋಪಗಳನ್ನು ಮಾಡಿ ಸಾರ್ವಜನಿಕವಾಗಿ ಒಬ್ಬ ವ್ಯಕ್ತಿಗೆ ಅವಮಾನ ಮಾಡುವುದು ಮತ್ತು ಕಚೇರಿಯಲ್ಲಿ ಆತನನ್ನು “ಲಂಪಟ” ಎಂದು ಕರೆಯುವುದು ಕ್ರೌರ್ಯಕ್ಕೆ ಸಮ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪತಿಯ ವಿರುದ್ಧ ಪತ್ನಿ ನಡೆದುಕೊಂಡ ರೀತಿಯನ್ನು “ಕ್ರೌರ್ಯ” ಎಂದು ತೀರ್ಮಾನಿಸಿರುವ ಉಚ್ಚ ನ್ಯಾಯಾಲಯವು ದಂಪತಿಯ ವಿಚ್ಛೇದನಕ್ಕೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಅನುಮತಿಯನ್ನು ಎತ್ತಿಹಿಡಿದಿದೆ. ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಪತ್ನಿಯೇ ಹೈಕೋರ್ಟ್ ಮೆಟ್ಟಿಲೇರಿದ್ದಳು.
ನಂಬಿಕೆ, ವಿಶ್ವಾಸ ಮತ್ತು ಗೌರವವು ಮದುವೆಯ ಆಧಾರಸ್ತಂಭ ಇದ್ದಂತೆ ಎಂದೂ ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ. ಯಾವ ವ್ಯಕ್ತಿಯೂ ತನ್ನ ಪತ್ನಿಯಿಂದ ಇಂತಹ ಅಗೌರವ, ಅವಮಾನವನ್ನು ಸಹಿಸುವುದಿಲ್ಲ. ಪತ್ನಿಯು ಸದಾ ಪತಿಯ ವರ್ಚಸ್ಸು ಮತ್ತು ಘನತೆಯ ರಕ್ಷಕಿಯಾಗಿರುತ್ತಾಳೆ. ಆದರೆ, ಈ ಪ್ರಕರಣದಲ್ಲಿ ಪತ್ನಿಯು ಪತಿಯನ್ನು ಸಾರ್ವಜನಿಕವಾಗಿ ಅವಮಾನಿಸಿ, ಮಾನಹಾನಿ ಮಾಡಿದ್ದಲ್ಲದೇ, ಆತನ ವ್ಯಕ್ತಿತ್ವಕ್ಕೂ ಮಸಿ ಬಳಿದಿದ್ದಾಳೆ. ಅಲ್ಲದೇ, ಪತಿಯ ಕಚೇರಿಗೆ ನುಗ್ಗಿ ಆತನ ಸಹೋದ್ಯೋಗಿಗಳು, ಮೇಲಧಿಕಾರಿಗಳ ಸಮ್ಮುಖದಲ್ಲೇ ಆತನನ್ನು ದಾಂಪತ್ಯದ್ರೋಹಿ ಎಂದು ಜರೆದಿದ್ದಾಳೆ. ಇದನ್ನು ನಾವು “ಕ್ರೌರ್ಯ” ಎಂದೇ ಪರಿಗಣಿಸಬಹುದಾಗಿದೆ ಎಂದು ಹೇಳಿದ ನ್ಯಾಯಪೀಠ, ದಂಪತಿಗೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನದ ಅನುಮತಿಯನ್ನು ಎತ್ತಿಹಿಡಿದಿದೆ.