ಅನುದಾನದಲ್ಲಿ ತಾರತಮ್ಯ: ದಿನೇಶ್
Team Udayavani, Nov 9, 2019, 3:07 AM IST
ಬೆಂಗಳೂರು: ಸಿಎಂ ಯಡಿಯೂರಪ್ಪ ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದು ಹೇಳುತ್ತಲೇ, ಅನರ್ಹ ಶಾಸಕರ ಕ್ಷೇತ್ರ ಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರೋತ್ಥಾನ ಯೋಜನೆಯಲ್ಲಿ ತಾರತಮ್ಯ ಮಾಡ ಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಯಾಗುತ್ತಿರುವ ಯೋಜನೆ ಗಳನ್ನು ರದ್ದುಪಡಿಸ ಲಾಗುತ್ತಿದೆ. ಇದೆಲ್ಲವೂ ದ್ವೇಷದ ರಾಜಕಾರಣ. ಬಿಜೆಪಿಯವರಿಗೆ ಚುನಾವಣೆ ಗೆಲ್ಲುವುದು ಮತ್ತು ಅಧಿಕಾರದಲ್ಲಿ ಇರಬೇಕು ಎನ್ನುವುದಷ್ಟೇ ಅವರ ಸಿದ್ಧಾಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ನೆರೆ ಸಂತ್ರಸ್ತರ ಬಗ್ಗೆ ಕಾಳಜಿಯಿಲ್ಲ ಅಧಿಕಾರ ಬಳಸಿಕೊಂಡು ಹಣ ಮಾಡುವುದೇ ಅವರ ಉದ್ದೇಶ. ರಾಜ್ಯಕ್ಕೆ ಇಂತಹ ದುರ್ಗತಿ ಎಂದೂ ಬಂದಿರಲಿಲ್ಲ. ಯಡಿಯೂರಪ್ಪ ಅವರನ್ನು ಕಂಡರೆ ಬಿಜೆಪಿಯವರಿಗೆ ಆಗುವುದಿಲ್ಲ. ಕೇಂದ್ರದ ನಾಯಕರಿಗೂ ಯಡಿಯೂರಪ್ಪ ಮೇಲೆ ವಿಶ್ವಾಸ ಇಲ್ಲ. ಮುಖ್ಯಮಂತ್ರಿಗೆ ಅನರ್ಹರ ಓಲೈಕೆ ಬಿಟ್ಟರೆ ಬೇರೆ ದಾರಿಯಿಲ್ಲ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರೂ ಪ್ರತ್ಯೇಕ ತಂಡ ರಚಿಸಿಕೊಂಡು ಓಡಾಡುತ್ತಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯಡಿಯೂರಪ್ಪ ಅವರಿಗೆ ಗೌರವ ಕೊಡುತ್ತಿಲ್ಲ. ತಮ್ಮ ಪಕ್ಷದ ಶಾಸಕರ ಅಸಮಾಧಾನ ಕಡಿಮೆ ಮಾಡಲೂ ಸಾಧ್ಯವಾಗುತ್ತಿಲ್ಲ. ಇದೆಲ್ಲ ನೋಡಿದರೆ, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವ ಸಾಧ್ಯತೆಯಿದೆ ಎಂದು ಹೇಳಿದರು.
ಬಿಎಸ್ವೈ ಆಡಿಯೋ: ರಾಷ್ಟ್ರಪತಿಗೆ ದೂರು
ಮೈಸೂರು: ಸಿಎಂ ಯಡಿಯೂರಪ್ಪ ಮಾತನಾಡಿರುವ ಆಡಿಯೋ ಸಂಬಂಧ ರಾಷ್ಟ್ರಪತಿಗೆ ದೂರು ನೀಡಲು ಸಮಯ ಕೋರಲಾಗಿದೆ ಎಂದು ವಿರೋಧಪಕ್ಷದ ನಾಯಕ ಸಿದ್ದ ರಾಮಯ್ಯ ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಯಡಿಯೂರಪ್ಪ ನವರು “ಆಪರೇಷನ್ ಕಮಲ’ಕ್ಕೆ ಸಂಬಂಧಿಸಿದಂತೆ ಎಲ್ಲವನ್ನೂ ಹೇಳಿರುವ ಆಡಿಯೋ ವೈರಲ್ ಆಗಿದೆ.
ಅಮಿತ್ ಶಾ ಸೂಚನೆಯಂತೆ “ಆಪ ರೇಷನ್ ಕಮಲ’ ಮಾಡಿರುವುದಾಗಿ ಯಡಿಯೂರಪ್ಪ ಆಡಿಯೋದಲ್ಲಿ ಹೇಳಿದ್ದಾರೆ. “ಆಪರೇಷನ್ ಕಮಲ’ ಮಾಡಿರುವ ಅಮಿತ್ ಶಾ ಮಂತ್ರಿಯಾಗಿರಬಾರದು. ಅನೈತಿಕವಾಗಿ ಅಧಿಕಾರಕ್ಕೆ ಬಂದಿರುವ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಬಾರದು. ಹೀಗಾಗಿ, ಇವರಿಬ್ಬರನ್ನೂ ವಜಾಗೊಳಿಸಿ ಎಂದು ರಾಷ್ಟ್ರಪತಿಯವರಿಗೆ ದೂರು ನೀಡುತ್ತೇವೆ ಎಂದರು.
ಟಿಪ್ಪು ಜಯಂತಿ ಆಚರಣೆಗೆ ರಾಜ್ಯದ ಜನರ ವಿರೋಧವಿಲ್ಲ. ನ್ಯಾಯಾಲಯ ಕೂಡ ಖಾಸಗಿಯಾಗಿ ಆಚರಣೆಗೆ ಅಡ್ಡಿ ಇಲ್ಲ ಎಂದು ಹೇಳಿದೆ. ಆದರೆ, ಈ ವಿಚಾರದಲ್ಲಿ ಬಿಜೆಪಿ ದಾರವಿಲ್ಲದೆ ಬುಗುರಿ ಆಡಿಸುತ್ತಿದೆ.
-ಸಿದ್ದರಾಮಯ್ಯ, ಮಾಜಿ ಸಿಎಂ