Pakistan: ಪಾಕ್ ಅಸೆಂಬ್ಲಿ ವಿಸರ್ಜನೆ ಮತ್ತೆಲ್ಲವೂ ನಾಟಕೀಯ!
Team Udayavani, Aug 10, 2023, 11:57 PM IST
ಪಾಕಿಸ್ಥಾನ ಅಸೆಂಬ್ಲಿಗೆ ಅವಧಿ ಮುಗಿಯುವ ಮೂರು ದಿನ ಮುನ್ನವೇ ಅಲ್ಲಿನ ಪ್ರಧಾನಿ ಶೆಹಬಾಜ್ ಶರೀಫ್, ಶಿಫಾರಸಿನಂತೆ ಅಧ್ಯಕ್ಷರು ಅಲ್ಲಿನ ಸಂಸತ್ ಆಗಿರುವ ರಾಷ್ಟ್ರೀಯ ಅಸೆಂಬ್ಲಿ ವಿಸರ್ಜನೆ ಮಾಡಿದ್ದಾರೆ. ಹೀಗಾಗಿ ಪಾಕಿಸ್ಥಾನದಲ್ಲಿ ಸದ್ಯ ಯಾವುದೇ ಸರಕಾರವಿಲ್ಲ. ಸದ್ಯದಲ್ಲೇ ಉಸ್ತುವಾರಿ ಪ್ರಧಾನಿಯ ನೇಮಕವಾಗಲಿದೆ. ಇದಕ್ಕೂ ಮುನ್ನವೇ ಮತ್ತೆ ರಾಜಕೀಯ ಅಸ್ಥಿರತೆಯೂ ಮೂಡಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.
ಅಧ್ಯಕ್ಷರಿಂದ ವಿಸರ್ಜನೆ
ಪಾಕಿಸ್ಥಾನದ ಅಧ್ಯಕ್ಷ ಆರಿಫ್ ಆಳ್ವಿ, ಬುಧವಾರ ಪಾಕ್ ಅಸೆಂಬ್ಲಿಯನ್ನು ವಿಸರ್ಜನೆ ಮಾಡಿದ್ದು, ದೇಶ ಸಾಮಾನ್ಯ ಚುನಾವಣೆಗೆ ಸಜ್ಜಾಗಲಿದೆ. ಆದರೆ ಅಸೆಂಬ್ಲಿಯ ಅವಧಿ ಮುಗಿಯುವ ಮುನ್ನವೇ ವಿಸರ್ಜನೆ ಮಾಡಿದ್ದು ಏಕೆ ಎಂಬ ಚರ್ಚೆಗಳು ಅಲ್ಲಿ ಶುರುವಾಗಿವೆ. ಇದಕ್ಕೆ ಕಾರಣಗಳೂ ಇವೆ. ಅಸೆಂಬ್ಲಿ ಅವಧಿ ಮುಗಿದ 60 ದಿನಗಳಲ್ಲಿ ಅಲ್ಲಿನ ಸಾಮಾನ್ಯ ಚುನಾವಣೆ ಮುಗಿಯಬೇಕು.
ಪಾಕಿಸ್ಥಾನ ಅಸೆಂಬ್ಲಿ ಹೇಗಿದೆ?
ಭಾರತದಲ್ಲಿ ಅಸೆಂಬ್ಲಿ ಎನ್ನುವುದು ಆಯಾ ರಾಜ್ಯಗಳಲ್ಲಿನ ವಿಧಾನಸಭೆಗಳಿಗೆ ಮಾತ್ರ. ಇಲ್ಲಿ ಕೇಂದ್ರ ಸರಕಾರಕ್ಕೆ ಸಂಸತ್ ಇದೆ. ಆದರೆ ಪಾಕಿಸ್ಥಾನದಲ್ಲಿ ಅಸೆಂಬ್ಲಿ ಎಂಬುದೇ ದೇಶದ ಪ್ರಮುಖ ಶಾಸನ ಸಭೆ. ಇದಕ್ಕೆ ಮುಖ್ಯಸ್ಥರು ಅಲ್ಲಿನ ಅಧ್ಯಕ್ಷರು. ಅಲ್ಲಿಯೂ ನ್ಯಾಶನಲ್ ಅಸೆಂಬ್ಲಿ ಮತ್ತು ಸೆನೆಟ್ ಎಂಬ ಎರಡು ಸದನಗಳಿವೆ. ನ್ಯಾಶನಲ್ ಅಸೆಂಬ್ಲಿ ಎಂಬುದು ಅಲ್ಲಿನ ಕೆಳಮನೆ. ಸೆನೆಟ್ ಮೇಲ್ಮನೆ. ನ್ಯಾಶನಲ್ ಅಸೆಂಬ್ಲಿಯ ಒಟ್ಟಾರೆ ಬಲ 336. ಇದರ ಅವಧಿ 5 ವರ್ಷಗಳು.
ಅವಧಿಗೆ ಮುನ್ನ ವಿಸರ್ಜನೆ ಏಕೆ?
ಇಲ್ಲೂ ಒಂದು ರಾಜಕೀಯವಿದೆ. ಅವಧಿ ಮುಗಿದ ಮೇಲೆ ಕಡ್ಡಾಯವಾಗಿ 60ದಿನಗಳ ಒಳಗೆ ಸಾಮಾನ್ಯ ಚುನಾವಣೆ ನಡೆಸಲೇಬೇಕು. ಆದರೆ ಅವಧಿಗೆ ಮುನ್ನ ವಿಸರ್ಜನೆ ಮಾಡಿದರೆ ಚುನಾವಣೆ ನಡೆಸಲು ಇನ್ನೂ 30 ದಿನ ಹೆಚ್ಚುವರಿಯಾಗಿ ತೆಗೆದುಕೊಳ್ಳ ಬಹುದು. ಅಂದರೆ ಸದ್ಯ ಪಾಕಿಸ್ಥಾನದಲ್ಲಿ ಚುನಾವಣೆ ನಡೆಸಲು ಶೆಹಬಾಜ್ ಶರೀಫ್ ನೇತೃತ್ವದ ಸಮ್ಮಿಶ್ರ ಒಕ್ಕೂಟಕ್ಕೆ ಮನಸ್ಸಿಲ್ಲ. ಅಲ್ಲದೆ ಇಮ್ರಾನ್ ಖಾನ್ ಸದ್ಯ ಜೈಲಿನಲ್ಲಿದ್ದು, ಅವರ ಪರವಾಗಿ ದೇಶಾದ್ಯಂತ ಅಲೆಯಿದೆ. ಒಂದು ವೇಳೆ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಾಧ್ಯವಿಲ್ಲದಿದ್ದರೂ, ಅವರ ಪಕ್ಷ ಅಭೂತಪೂರ್ವವಾಗಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ಹೀಗಾಗಿಯೇ ಚುನಾವಣೆಯನ್ನು ಮುಂದೂ ಡಲು ಎಲ್ಲ ದಾರಿಗಳನ್ನು ಶೆಹಬಾಜ್ ಶರೀಫ್ ಹುಡುಕುತ್ತಿದ್ದಾರೆ.
ಚುನಾವಣೆ ಮುಂದೂಡುತ್ತಾರಾ?
ಈಗಿನ ಲೆಕ್ಕಾಚಾರಗಳನ್ನು ನೋಡಿದರೆ ಚುನಾವಣೆ ಮುಂದಕ್ಕೆ ಹೋಗುವ ಎಲ್ಲ ಸಾಧ್ಯತೆಗಳಿವೆ. ಇತ್ತೀಚೆಗಷ್ಟೇ ಶೆಹಬಾಜ್ ಶರೀಫ್, ರಾಜ್ಯಗಳಲ್ಲಿ ಜನಗಣತಿ ಮುಗಿದ ಮೇಲೆಯೇ ರಾಜ್ಯಗಳು ಮತ್ತು ಪ್ರಾಂತಗಳಿಗೆ ಚುನಾವಣೆ ನಡೆಸಲಾಗುತ್ತದೆ ಎಂದಿದ್ದರು. ಅಂದರೆ ಜನಗಣತಿ ಪ್ರಕ್ರಿಯೆ ಮುಗಿದು ಅದು ನಡೆಯುವುದು ಮುಂದಿನ ವರ್ಷವೇ. ಇದಾದ ಬಳಿಕವೇ ಸಾಮಾನ್ಯ ಚುನಾವಣೆ ನಡೆಯುವ ಸಾಧ್ಯತೆ ಇದೆ. ಅಲ್ಲದೆ ಚುನಾವಣೆ ಮುಂದೂಡಲು ಇರುವ ಎಲ್ಲ ಮಾರ್ಗಗಳ ಬಗ್ಗೆಯೂ ಶೆಹಬಾಜ್ಶರೀಫ್ ಹುಡುಕಾಟ ನಡೆಸುತ್ತಿದ್ದಾರೆ.
ಪಾಕಿಸ್ಥಾನದಲ್ಲಿ ಮುಂದೇನು?
ಸದ್ಯ ಪಾಕಿಸ್ಥಾನದಲ್ಲಿ ಯಾವುದೇ ಸರಕಾರವಿಲ್ಲ. ಅಲ್ಲಿನ ಅಧ್ಯಕ್ಷರು ಹೊಸದಾಗಿ ಉಸ್ತುವಾರಿ ಪ್ರಧಾನಿ ಯನ್ನು ನೇಮಕ ಮಾಡುತ್ತಾರೆ. ಸದ್ಯ ಮಾಜಿ ಪ್ರಧಾನಿ ಗಳಾದ ನವಾಜ್ ಶರೀಫ್, ಶಹೀದ್ ಖಾನ್ ಅಬ್ಟಾಸಿ, ಬಲೂಚಿಸ್ಥಾನದ ಸ್ವತಂತ್ರ ಸಂಸದ ಅಸ್ಲಾಮ್ ಭೂತಾನಿ, ಮಾಜಿ ಹಣಕಾಸು ಸಚಿವ ಹಫೀಜ್ ಶೇಕ್, ನಿವೃತ್ತ ಪ್ರಧಾನ ಕಾರ್ಯದರ್ಶಿ ಫಾವದ್ ಹಸನ್, ಪಿಪಿಪಿ ನಾಯಕ ಮಕೂªಮ್ ಅಹ್ಮದ್ ಅವರ ಹೆಸರುಗಳಿವೆ.
ಇವರಲ್ಲಿ ಯಾರೇ ಪ್ರಧಾನಿಯಾದರೂ, ಮುಂದಿನ ಮೂರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಆಡಳಿತ ನಡೆಸಬೇಕಾಗುತ್ತದೆ. ಅಲ್ಲಿನ ಹಣಕಾಸಿನ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಇದನ್ನು ಸರಿಪಡಿಸ ಬೇಕಾ ಗಿದೆ. ಜನಾಕ್ರೋಶವನ್ನೂ ಎದುರಿಸಬೇಕಾಗುತ್ತದೆ.
ಇಮ್ರಾನ್ ಕಥೆ ಏನು?
ಸದ್ಯ ಜೈಲಿನಲ್ಲಿರುವ ಇಮ್ರಾನ್ ಖಾನ್ ಇನ್ನು 5 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಿಲ್ಲ. ಅಲ್ಲಿನ ಚುನಾವಣ ಆಯೋಗ ಇಂಥದ್ದೊಂದು ಆದೇಶ ಹೊರಡಿಸಿದೆ. ಇದೇ ಮುಂದುವರಿದರೆ ಈ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡದಂತಾಗುತ್ತದೆ. ಅಲ್ಲಿಗೆ ಅವರ ರಾಜಕೀಯ ಜೀವನ ಮುಗಿದಂತೆಯೇ ಆಗುತ್ತದೆ. ಆದರೂ ಇಡೀ ದೇಶದಲ್ಲಿ ಇಮ್ರಾನ್ ಪರವಾಗಿ ದೊಡ್ಡ ಅಲೆಯೇ ಇದೆ. ಪದೇ ಪದೆ ಅವರನ್ನು ಜೈಲಿಗೆ ಕಳುಹಿಸುವ ಮತ್ತು ಹಿಂಸೆ ಕೊಡುವ ಕೆಲಸ ಮಾಡುತ್ತಿದೆ ಎಂಬ ಕೋಪ ಶೆಹಬಾಜ್ಶರೀಫ್ ಮತ್ತವರ ಸರಕಾರದ ಮೇಲೂ ಇದೆ. ಹೀಗಾಗಿ ಇಮ್ರಾನ್ ಇರದಿದ್ದರೂ, ಅವರ ಪಕ್ಷ ದೊಡ್ಡ ಮಟ್ಟದ ಗೆಲುವು ಸಾಧಿಸುವ ಎಲ್ಲ ಸಾಧ್ಯತೆಗಳಿವೆ.
ನವಾಜ್ ಶರೀಫ್ ವಾಪಸ್ ಬರುತ್ತಾರಾ?
ಸದ್ಯಕ್ಕೆ ಪಿಎಂಎಲ್ಎನ್ ಪಕ್ಷಕ್ಕೆ ನವಾಜ್ ಶರೀಫ್ ಅವರೊಬ್ಬರೇ ಆಸರೆ. ಶೆಹಬಾಜ್ ಶರೀಫ್, ನವಾಜ್ ಶರೀಫ್ ಅವರ ಸಹೋದರ. ಇವರ ಆಡಳಿತ ಅಷ್ಟೇನೂ ಚೆನ್ನಾಗಿಲ್ಲ. ಆದರೆ ನವಾಜ್ ಶರೀಫ್ ಬಗ್ಗೆ ದೇಶದಲ್ಲಿ ಉತ್ತಮ ಅಭಿಪ್ರಾಯವಿದೆ. ಹೀಗಾಗಿ ಇಮ್ರಾನ್ ಖಾನ್ ವಿರುದ್ಧ ಎದುರಿಸಲು ನವಾಜ್ ಶರೀಫ್ ಅವರೊಬ್ಬರೇ ಸಮರ್ಥರು ಎಂಬ ವಾದ ಗಳಿವೆ. ಸದ್ಯ ನವಾಜ್ ಶರೀಫ್ ಕೂಡ ಅಕ್ರಮ ಗಳಿಂದಾಗಿ ದೇಶಭ್ರಷ್ಟರಾಗಿದ್ದಾರೆ. ಇವರು ಪಾಕಿಸ್ಥಾನಕ್ಕೆ ವಾಪಸ್ ಬಂದು, ಚುನಾವಣೆಗೆ ಸಜ್ಜಾಗಬೇಕಾಗಿದೆ. ಇದು ಸಾಧ್ಯವೇ ಎಂಬುದನ್ನು ನೋಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
IPL; ಬೌಲರ್ಗಳನ್ನು ಕಾಪಾಡಿ: ಅಶ್ವಿನ್ ವಿನಂತಿ!
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ