ಸರಕಾರೀಕರಣದ ವಿರುದ್ದ ಹೋರಾಟ ಮುಂದುವರಿಸಬೇಕು: ಸ್ವರ್ಣವಲ್ಲಿ ಶ್ರೀ
Team Udayavani, Dec 5, 2021, 7:58 PM IST
ಶಿರಸಿ: ದೇವಸ್ಥಾನದ ಸರಕಾರೀಕರಣ ಸರಿಯಲ್ಲ. ಸರಕಾರೀಕರಣ ವಿರುದ್ದದ ಹೋರಾಟ ವ್ಯವಸ್ಥಿತವಾಗಿ ನಡೆಸಬೇಕು ಎಂದು ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶಿಸಿದರು.
ಭಾನುವಾರ ನಗರದ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಭಾನುವಾರ ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳದ ವಾರ್ಷಿಕ ಮಹಾಸಭೆಯ ಸಾನ್ನಿಧ್ಯವಹಿಸಿ ಆಶೀರ್ವದಿಸಿದರು.
ದೇವಸ್ಥಾನದ ವ್ಯವಸ್ಥಿತ ನಿರ್ವಹಣೆಗೆ ಸರ್ವ ಸಮ್ಮತ ನೀತಿ ನಿಯಮ ಬರಬೇಕು. ಈ ಬಗ್ಗೆ ನಮ್ಮ ಒತ್ತಡ ಮುಜರಾಯಿ ಇಲಾಖೆಗೆ ಇದೆ. ಇದೇ ತಿಂಗಳ 28 ಕ್ಕೆಮುಖ್ಯಮಂತ್ರಿಗಳ ಭೇಟಿ ವೇಳೆ ಗಮನಕ್ಕೆ ತರುತ್ತೇವೆ ಎಂದರು.
ದೇವಾಲಯಗಳೂ ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳದ ಸದಸ್ಯತ್ವ ಪಡೆದರೆ ದೇವಾಲಯಗಳ ಸ್ವಾಯತ್ತತೆ ಕುರಿತ ಹೋರಾಟಕ್ಕೆ ಬಲ ಬರುತ್ತದೆ ಎಂದು ಹೇಳಿದರು.
ಮಹಾಮಂಡಳವು ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಿ ಆಯಾ ತಾಲೂಕಿನ ದೇವಾಲಯಗಳ ಸದಸ್ಯತ್ವ ಮಾಹಿತಿ ಸಂಗ್ರಹಿಸಿ ಪ್ರತಿ ವರ್ಷ ನೊಂದಣಿ ನಡೆಸಬೇಕು. ದೇವಸ್ಥಾನದ ಆಸ್ತಿ ಸಂಬಂಧಿಸಿ ಸ್ಥಳೀಯವಾಗಿ ನೋಡಿಕೊಳ್ಳಬೇಕು. ಕೆಲವು ದೇವಾಲಯಗಳಿಗೆ ಆಸ್ತಿ ಸಮಸ್ಯೆಗಳು ಬೇರೆ ಬೇರೆಯಾಗಿಯೇ ಇದೆ ಎಂದರು.
ದೇವಸ್ಥಾನದ ಸ್ವಾಯತ್ತತೆ ಕುರಿತು ನಡೆಸುತ್ತಿರುವ ಹೋರಾಟದ ಕಾನೂನು ಸಲಹೆಗಾರ ಅರುಣಾಚಲ ಹೆಗಡೆ, ದೇವಾಲಯಗಳ ಸ್ವಾಯತ್ತತೆ ಪ್ರಕರಣ ಸಂಬಂಧ ನ.17ಕ್ಕೆ ಅಂತಿಮ ಹಿಯರಿಂಗ್ ಗೆ ಬಂದಿತ್ತಾದರೂ ಕೋವಿಡ್ ಹಾಗೂ ಇತರ ಕಾರಣಗಳಿಂದ 2022 ರ ಜನವರಿಗೆ ಮುಂದೂಡಲಾಗಿದೆ. ದೇವಾಲಯದ ಆಸ್ತಿ ಸರ್ಕಾರದ ಹೆಸರಿನಲ್ಲಿದ್ದರೆ ಅಂಥ ಪ್ರಕರಣಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಬಹುದು ಎಂದರು.
ಮಹಾಮಂಡಳದ ಕಾರ್ಯಾಧ್ಯಕ್ಷ ಆರ್.ಜಿ.ನಾಯ್ಕ, 2004ರಲ್ಲಿ ಮಹಾಮಂಡಲ ರಚನೆಯಾಗಿದ್ದು, ಹಲವು ಕಾರ್ಯಚಟುವಟಿಕೆ ನಡೆಸಿದೆ. ಸರ್ಕಾರದ ದಬ್ಬಾಳಿಕೆ ನೀತಿ ಎದುರಿಸಿ ದೇವಾಲಯಗಳ ಸ್ವಾಯತ್ತತೆ ಕಾಪಾಡಿಕೊಳ್ಳಲು ಪ್ರಯತ್ನಿಸಿದೆ. ಕಾನೂನಾತ್ಮಕ ಹೋರಾಟದ ಮೂಲಕ ದೇವಾಲಯಗಳ ಅಸ್ಮಿತೆ ಉಳಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದರು.
ಮಹಾಮಂಡಳದ ಉಪಾಧ್ಯಕ್ಷ ಟಿ.ಜಿ.ನಾಡಿಗೇರ, ಮಾರಿಕಾಂಬಾ ದೇವಾಲಯದ ಉಪಾಧ್ಯಕ್ಷ ಸುಧೇಶ ಜೋಗಳೇಕರ, ಧರ್ಮದರ್ಶಿ ಸುಧೀರ ಹಂದ್ರಾಳ, ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ, ಇತರರಿದ್ದರು. ಮಂಡಲದ ಕಾರ್ಯದರ್ಶಿ ಗೋಪಾಲಕೃಷ್ಣ ವೈದ್ಯ ಮತ್ತೀಘಟ್ಟ ನಿರೂಪಿಸಿದರು.