ಅಲ್ಪ ನೀರಿನಲ್ಲೇ ಬಂಗಾರದ ಬೆಳೆ; ತೈವಾನ್ ಪಿಂಕ್ ಸೀಬೆ ಬೆಳೆಗೆ ನರೇಗಾ ಆಶಾಕಿರಣ
Team Udayavani, Jan 13, 2024, 11:59 AM IST
ಉದಯವಾಣಿ ಸಮಾಚಾರ
ದೇವನಹಳ್ಳಿ: ಕೃಷಿ ಭೂಮಿ ರೈತರ ಪ್ರಯೋಗ ಶಾಲೆ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ತಾಲೂಕಿನ ಬೆಟ್ಟಕೋಟೆ ಗ್ರಾಮದ ಚನ್ನೇಗೌಡ ಅವರೇ ಸಾಕ್ಷಿ. ತಮಗೆ ಸೇರಿದ 2 ಎಕರೆ ಜಮೀನಿನಲ್ಲಿ ತೈವಾನ್ ಪಿಂಕ್ ತಳಿಯ ಸೀಬೆ (ಚೇಪೆ ಹಣ್ಣು) ಬೆಳೆದು ಆದಾಯ ಕಂಡು ಕೊಂಡಿದ್ದಾರೆ.
ಸಮೃದ್ಧವಾಗಿ ಬೆಳೆದಿರುವ ಸೀಬೆ ಹಣ್ಣಿನ ತೋಟ ನೋಡುಗರ ಬಾಯಿಯಲ್ಲಿ ನೀರೂರಿಸುತ್ತದೆ. ಹೆಚ್ಚು ನೀರು ಬಯಸದ ಸೀಬೆ ಬಯಲು ಸೀಮೆಗೆ ಹೇಳಿ ಮಾಡಿಸಿದ ಬೆಳೆ ಎನ್ನುತ್ತಾರೆ.
1 ಕೆ.ಜಿ.ತೂಗುತ್ತೆ:ತೈವಾನ್ ಪಿಂಕ್ ವಾರ್ಷಿಕವಾಗಿ 2 ಬೀಡುಗಳಲ್ಲಿ ಒಟ್ಟಾರೆ 8-10 ಟನ್ ಹಣ್ಣನ್ನು ಕಟಾವು ಮಾಡಿ ಬೆಂಗ ಳೂರು, ಚೆನ್ನೈ, ಹೈದರಾಬಾದ್ಗೆ ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್ಗಳಲ್ಲಿ ಮಾರಾಟವಾಗುತ್ತಿವೆ. ಸಾಮಾನ್ಯವಾಗಿ ಸೀಬೆ ಹಣ್ಣು 100ರಿಂದ 250 ಗ್ರಾಂ ತೂಗುವುದೇ ಹೆಚ್ಚು. ಈ ತೈವಾನ್ ತಳಿಯ ಪ್ರತಿ ಹಣ್ಣು ಕನಿಷ್ಠ 600 ಗ್ರಾಂ.ನಿಂದ 1 ಕೆ.ಜಿ. ತೂಗುತ್ತದೆ. ಪ್ರಸ್ತುತ 1 ಕೆ.ಜಿ.ಗೆ 85ರಿಂದ 90ರೂ. ದರವಿದೆ. ಉತ್ತಮ ಬೇಡಿಕೆ ಇರುವುದರಿಂದ ಹೆಚ್ಚಿನ ಆದಾಯವೂ ಲಭಿಸುತ್ತಿದೆ.
ಸೀಬೆ ಬೆಳೆಯಲ್ಲಿ ವರ್ಷಕ್ಕೆ ಎರಡು ಫಸಲು ಪಡೆಯಬಹುದು. ಸ್ಥಳೀಯ ವ್ಯಾಪಾರಸ್ಥರು ಬಂದು ಕಡಿಮೆ ಬೆಲೆಗೆ ಫಸಲು ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ, ನೀಡದೇ, ಕ್ರೇಟ್ಗಳಲ್ಲಿ ತುಂಬಿ ಬೆಂಗಳೂರಿನ ಮಾರುಕಟ್ಟೆಗೆ ರವಾನಿಸುತ್ತಿದ್ದಾರೆ.
ಸೀಬೆ ಗಿಡಗಳಿಗೆ ಸಾವಯವ ಗೊಬ್ಬರ ಹಾಕುತ್ತಿದ್ದೇನೆ: ಸೀಬೆ ಗಿಡಕ್ಕೆ ರಸಗೊಬ್ಬರ ಹಾಕಬೇಕು; ಇಲ್ಲವಾದರೆ ಗಿಡಗಳು ಸತ್ತು ಹೋಗುತ್ತವೆ, ಫಸಲು ಸರಿಯಾಗಿ ಬರುವುದಿಲ್ಲ ಎಂದು ಗಿಡ ಪೂರೈಸಿದವರು ಹೇಳಿದ್ದರು. ಆದರೆ, ನಾನು ಯಾವುದೇ ಕಾರಣಕ್ಕೂ ರಸಗೊಬ್ಬರ ಹಾಕುವುದಿಲ್ಲ ಎಂದು ನಿರ್ಧರಿಸಿ, ನೈಸರ್ಗಿಕವಾದ ಹಸುವಿನ ಗೊಬ್ಬರ, ಗಂಜಲ, ಕುರಿ ಗೊಬ್ಬರ, ಒಣ ಎಲೆ, ಹಸಿರೆಲೆ ಕೊಳೆಸಿ ಹಾಕುತ್ತಿದ್ದೇನೆ. ಫಸಲೂ ಚೆನ್ನಾಗಿದೆ ಎಂದು ರೈತ ಚನ್ನೇಗೌಡ ತಿಳಿಸಿದ್ದಾರೆ.
ಒಂದು ಸಸಿಗೆ 120 ರೂ.ನಂತೆ ಕೋಲ್ಕತ್ತಾದಿಂದ ಖರೀದಿ
ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸೌಲಭ್ಯ ಪಡೆದು 2 ಎಕರೆಯಲ್ಲಿ ಚನ್ನೇಗೌಡ ತೈವಾನ್ ಪಿಂಕ್ ತಳಿಯ ಸೀಬೆ ಬೆಳೆದಿದ್ದಾರೆ.
ಸಸಿಗಳನ್ನು ಕೋಲ್ಕತ್ತ ನಗರದಿಂದ ಪ್ರತಿ ಸಸಿಗೆ 120 ರೂ.ನಂತೆ ಹಣ ಪಾವತಿಸಿ 1500 ಸಸಿಗಳನ್ನು ಡೋರ್ ಡೆಲವರಿ ಪಡೆದಿದ್ದಾರೆ. ನರೇಗಾ ಯೋಜನೆಯಡಿ 2022-23ನೇ ಸಾಲಿನಲ್ಲಿ ಕೂಲಿ ವೆಚ್ಚ 96,000 ಹಾಗೂ ಪ್ರದೇಶ ವಿಸ್ತರಣೆಗೆ 40,000 ಸಾಮಗ್ರಿ ವೆಚ್ಚವನ್ನು ನರೇಗಾ ಯೋಜನೆಯಡಿ ಕಲ್ಪಿಸಲಾಗಿದೆ. ಹಾಗೆಯೇ ಸಸಿಗಳನ್ನು 2ಗಿ2.5 ಞ2 ಮೀ. ಅಂತರದ ಅಧಿಕ ಸಾಂದ್ರ
ಪದ್ಧತಿಯಲ್ಲಿ ನಾಟಿ ಮಾಡಿ ಆರೈಕೆ ಮಾಡಬೇಕಿದೆ. ಈ ಸಸಿಗಳಿಗೆ ಈಗ 1.8 ವರ್ಷ ಆಗಿದ್ದು ಅಲ್ಪ ನೀರು ಇರುವ ಕಾರಣದಿಂದ ಸಸಿಗಳಿಗೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿದ್ದಾರೆ.
ಕಳೆದ 9 ತಿಂಗಳಿಂದ ಪಿಂದೆಯನ್ನು ಕಿತ್ತು ಹಾಕಿದ್ದರು. 3 ತಿಂಗಳ ಹಿಂದೆಯಷ್ಟೇ ಬೆಳೆದ ಪಿಂದೆಯನ್ನು ಉಳಿಸಿಕೊಂಡಿ¨ªಾರೆ. ಸೀಬೆ ಹಣ್ಣನ್ನು ಉಜಿ ನೊಣ ಹಾಗೂ ಕೀಟ ಗಳಿಂದ ರಕ್ಷಿಸಿಕೊಳ್ಳಲು ಸ್ಪಾಂಜ್ ಅಳವಡಿಸಿದ್ದಾ ರೆ. ಇದರಿಂದ ಕಾಯಿ ಹಾಳಾಗುವುದು ಕಡಿಮೆ ಆಗಿದೆ. ಹಾಗೆಯೇ ಪಕ್ಷಿಗಳ ಕಾಟದಿಂದಲೂ ಹಣ್ಣುಗಳನ್ನು ರಕ್ಷಿಸಿಕೊಳ್ಳಲು ಅನುಕೂಲ ಎಂದು ರೈತ ಚನ್ನೇಗೌಡ “ಉದಯವಾಣಿ’ಗೆ ತಿಳಿಸಿದ್ದಾರೆ.
ಬೆಂ.ಗ್ರಾಮಾಂತರ ಜಿಲ್ಲೆಯ ತೋಟಗಾರಿಕಾ ಬೆಳೆಗಳಾದ ಮಾವು, ಗುಲಾಬಿ, ಸೀಬೆ, ದ್ರಾಕ್ಷಿ, ನುಗ್ಗೆ ಉತ್ತೇಜಿಸಲು ಮಹಾತ್ಮ ಗಾಂಧಿ
ನರೇಗಾ ಯೋಜನೆ ಯಡಿ ಸಣ್ಣ ರೈತರಿಗೆ ಜೀವಿತಾವಧಿ ಯಲ್ಲಿ 5 ಲಕ್ಷ ರೂ.ವರೆಗೂ ಸಹಾಯಧಾನ ನೀಡಲಾಗುವುದು.
●ಡಾ. ಅನುರಾಧಾ, ಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿ.
*ಎಸ್.ಮಹೇಶ್