ರಾತ್ರೋ ರಾತ್ರಿ ಕಿಡಿಗೇಡಿಗಳಿಂದ ಬೆಂಕಿ: ಭತ್ತದ ಹುಲ್ಲು ಸುಟ್ಟು ಭಸ್ಮ, ಕಣ್ಣೀರಿಟ್ಟ ರೈತ
Team Udayavani, Jan 5, 2022, 12:54 PM IST
ಎಚ್.ಡಿ.ಕೋಟೆ: ರಾತ್ರಿ ವೇಳೆ ಕಿಡಿಗೇಡಿಗಳು ಹುಲ್ಲಿನ ಮೆದೆಗೆ ಬೆಂಕಿಹೊತ್ತಿಸಿದ ಪರಿಣಾಮ ಬಡ ರೈತರೊಬ್ಬರ ಸುಮಾರು 20ಸಾವಿರಕ್ಕೂ ಅಧಿಕ ಮೌಲ್ಯದ ಹುಲ್ಲು ಬೆಂಕಿಗಾಹುತಿಯಾದ ಘಟನೆ ತಾಲೂಕಿನ ಕೆ.ಬೆಳತ್ತೂರಿನಲ್ಲಿ ನಡೆದಿದೆ.
ಕೆ.ಬೆಳತ್ತೂರು ಗ್ರಾಮದ ನಿವಾಸಿ ಸಿದ್ದನಾಯ್ಕ ಅವರಿಗೆ ಸೇರಿದ ಭತ್ತದ ಹುಲ್ಲು ಬೆಂಕಿಗಾಹುತಿಯಾಗಿದೆ. ಘಟನೆ ವೇಳೆ ಸಿದ್ದನಾಯ್ಕ ಕಣ್ಣೀರಿಟ್ಟ ದೃಶ್ಯ ನೋಡುಗರ ಮನ ಕಲಕುವಂತಿತ್ತು.
ಸಿದ್ದನಾಯ್ಕರಿಗೆ ಜಮೀನಿಲ್ಲದೇ ಅದೇ ಗ್ರಾಮದ ಬೇರೊಬ್ಬರ ಜಮೀನು ಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡು ಕೃಷಿ ಚಟುವಟಿಕೆ ನಡೆಸಿದ್ದರು. ಶ್ರಮಕ್ಕೆ ತಕ್ಕಪ್ರತಿಫಲವಾಗಿ ಉತ್ತಮ ಇಳುವರಿ ನೀಡಿದ ಪರಿಣಾಮ ಭತ್ತ ಕಟಾವು ಮಾಡಿ ಭತ್ತದ ಒಕ್ಕಣೆ ಕಾರ್ಯ ನಡೆದಿತ್ತು. ಒಕ್ಕಣೆ ನಂತರ ಇಡೀ ಭತ್ತದ ಹುಲ್ಲು ಒಂದುಕಡೆ ಸೇರಿಸಿ ಮೆದೆ ಹಾಕಲಾಗಿತ್ತು. ಆದರೆ ಸಿದ್ದನಾಯ್ಕರ ಬೆಳವಣಿಗೆ ಸಹಿಸದ ಕಿಡಿಗೇಡಿಗಳು ಸೋಮವಾರ ತಡರಾತ್ರಿ ಹುಲ್ಲಿನ ಮೆದೆಗೆ ಬೆಂಕಿ ಹೊತ್ತಿಸಿದ್ದಾರೆ. ಇಡೀ ಹುಲ್ಲಿನ ಮೆದೆ ಬೆಂಕಿಗಾಹುತಿಯಾಗಿದ್ದು ಮರುದಿನ ಹುಲ್ಲಿನ ಮೆದೆ ಬೆಂಕಿ ಕೆನ್ನಾಲಿಗೆಗೆ ಸಿಲುಕಿದ ದೃಶ್ಯ ಕಂಡ ರಸ್ತೆ ಹೋಕರು ಘಟನೆ ಕುರಿತು ಸಿದ್ದನಾಯ್ಕರಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ : ಮಾನನಷ್ಟ ಮೊಕದ್ದಮೆ; ಮಂಗಳೂರು ಲ್ಯಾಂಡ್ ಟ್ರೇಡ್ಸ್ನ ಶ್ರೀನಾಥ್ ಹೆಬ್ಬಾರ್ಗೆ ಗೆಲುವು
ವಿಷಯ ತಿಳಿದ ಸಿದ್ದನಾಯ್ಕ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಇಡೀ ರಾತ್ರಿ ಬೆಂಕಿಗಾಹುತಿಯಾಗಿ ಹುಲ್ಲಿನ ಮೆದೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಘಟನಾ ಸ್ಥಳಕ್ಕೆ ಇಡೀ ಗ್ರಾಮದ
ಬಹುತೇಕ ಜನಸಾಗರವೇ ಹರಿದು ಬಂದಿತಾದರೂ ಹುಲ್ಲು ಸುಟ್ಟು ಹೋಗಿದ್ದರಿಂದ ಏನೂ ಮಾಡದ ಸ್ಥಿತಿಯಲ್ಲಿ ಮೂಕಪ್ರೇಕ್ಷಕರಾಗಿದ್ದರು.