Hunsur: ಕಿಕ್ಕೇರಿ ಕಟ್ಟೆಯಲ್ಲಿ ಕಾಡಾನೆ ದಾಳಿ- ವೃದ್ದೆಗೆ ಗಾಯ
ಕೊಟ್ಟಿಗೆಯಲ್ಲಿದ್ದ ಹಸುವನ್ನು ಹೊರಗೆ ಕಟ್ಟುವ ವೇಳೆ ಮನೆ ಮುಂದೆಯೇ ಗಜರಾಜ ಪ್ರತ್ಯಕ್ಷ.
Team Udayavani, Jan 12, 2024, 8:24 PM IST
ಹುಣಸೂರು: ಮನೆ ಬಳಿಯೇ ಕಾಡಾನೆ ದಾಳಿಗೆ ಸಿಲುಕಿದ ವೃದ್ದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಾಗರಹೊಳೆ ಉದ್ಯಾನದಂಚಿನ ಹನಗೋಡು ಹೋಬಳಿಯ ಕಿಕ್ಕೆರಿಕಟ್ಟೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ನಾಗರಹೊಳೆ ಉದ್ಯಾನದಂಚಿನ ತಾಲೂಕಿನ ಹನಗೋಡು ಹೋಬಳಿಯ ಕಿಕ್ಕೇರಿಕಟ್ಟೆಯ ಮಿಲ್ಟ್ರಿ ರಾಜಣ್ಣರ ಪತ್ನಿ ಕಾವೇರಮ್ಮ(೫೦)ರವರೇ ಗಾಯಗೊಂಡವರು.
ಮುಂಜಾನೆ ಎದ್ದು, ಹಸುಗಳನ್ನು ಕೊಟ್ಟಿಗೆಯಿಂದ ಹೊರಗೆ ಕಟ್ಟುವ ವೇಳೆ ಏಕಾಏಕಿ ಆನೆಯು ದಾಳಿ ನಡೆಸಿದೆ. ಜೊತೆಗಿದ್ದ ಕಾವೇರಮ್ಮರ ಪತಿ ಕಿರುಚಿಕೊಂಡಿದ್ದರಿಂದ ಮನೆಯಲ್ಲಿದ್ದವರು ಹೊರಗೋಡಿ ಬಂದು ಕೂಗಾಟ ನಡೆಸಿದ್ದರಿಂದ ಆನೆ ಸ್ಥಳದಿಂದ ಪರಾರಿಯಾಗಿದೆ.
ಸೊಂಟಕ್ಕೆ ಪೆಟ್ಟು ಬಿದ್ದಿರುವ ಅವರನ್ನು ತಕ್ಷಣವೇ ಹನಗೋಡು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ಸಾರ್ವಜನಿಕರು ಹನಗೋಡು ಆಸ್ಪತ್ರೆಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ಹೆಚ್ಚಿನ ಚಿಕಿತ್ಸೆಗೆ ಶಾಸಕರ ಸೂಚನೆ:
ವಿಷಯ ತಿಳಿದು ಶಾಸಕ ಜಿ.ಡಿ.ಹರೀಶ್ಗೌಡರು ಹನಗೋಡು ಆಸ್ಪತ್ರೆಗೆ ಭೇಟಿ ಇತ್ತು, ವೈದ್ಯರೊಂದಿಗೆ ಚರ್ಚಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿ, ಸೂಕ್ತ ಪರಿಹಾರ ನೀಡುವಂತೆ ಹಾಗೂ ಕಾಡಾನೆಗಳ ನಿಯಂತ್ರಿಸಲು ಎಸಿಎಫ್ ದಯಾನಂದ್, ಆರ್ಎಫ್ಒ ಸುಬ್ರಮಣ್ಯರಿಗೆ ಸೂಚಿಸಿದರು.
ಈ ವೇಳೆ ಗ್ರಾ.ಪಂ. ಅಧ್ಯಕ್ಷ ಚನ್ನಯ್ಯ, ಉಪಾಧ್ಯಕ್ಷ ಬೋರೇಗೌಡ, ಮಾಜಿ ಅಧ್ಯಕ್ಷ ಗಣಪತಿ, ತಾ.ಪಂ.ಮಾಜಿ ಸದಸ್ಯ ರಮೇಶ್,ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರುಬಸವರಾಜು ಶಾಸಕರೊಂದಿಗಿದ್ದರು.
ಘಟನಾ ಸ್ಥಳಕ್ಕೆ ಉಪವಲಯಣ್ಯಧಿಕಾರಿ ಸಿದ್ದರಾಜು, ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.