ದೇಶದ ಅತಿದೊಡ್ಡ ಮೇಳಕ್ಕೆ ಸಾಕ್ಷಿಯಾಗಲಿದೆ ಐಐಎಚ್ಆರ್
Team Udayavani, Jan 21, 2020, 3:08 AM IST
ಬೆಂಗಳೂರು: ದೇಶದ ಅತಿದೊಡ್ಡ ತೋಟಗಾರಿಕೆ ಮೇಳಕ್ಕೆ ಇಲ್ಲಿನ ಹೆಸರಘಟ್ಟ ಈ ಬಾರಿ ಸಾಕ್ಷಿಯಾಗಲಿದ್ದು, ಕೇಂದ್ರದ ಮಹತ್ವಾಕಾಂಕ್ಷಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅಗ್ಗದ ಬೆಲೆಯಲ್ಲಿ ಹೈಟೆಕ್ ಬೇಸಾಯ ತಂತ್ರಜ್ಞಾನಗಳನ್ನು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಈ ಮೇಳದಲ್ಲಿ ಪರಿಚಯಿಸುತ್ತಿದೆ.
ಸಾಮಾನ್ಯವಾಗಿ ಇಲ್ಲಿ ನಡೆಯುವ ರಾಷ್ಟ್ರೀಯ ತೋಟಗಾರಿಕೆ ಮೇಳಗಳಲ್ಲಿ ದೇಶದ 20-22 ರಾಜ್ಯಗಳಿಂದ ಸುಮಾರು 20ರಿಂದ 30 ಸಾವಿರ ರೈತರು ಭಾಗವಹಿಸುತ್ತಿದ್ದರು. ಆದರೆ, ಈ ಸಲ ಜಮ್ಮು-ಕಾಶ್ಮೀರ ಸೇರಿದಂತೆ ದೇಶದ 30 ರಾಜ್ಯಗಳಿಂದ ದುಪ್ಪಟ್ಟು ಅಂದರೆ 50 ಸಾವಿರಕ್ಕೂ ಅಧಿಕ ರೈತರು ಭೇಟಿ ನೀಡುವ ನಿರೀಕ್ಷೆ ಇದೆ. ಹಾಗಾಗಿ, ಇದು ದೇಶದ ಅತಿದೊಡ್ಡ ಹಾಗೂ ಹೈಟೆಕ್ ಮೇಳವೂ ಆಗಲಿದೆ.
ಕಳೆದ ಬಾರಿ 55 ಬೆಳೆಗಳ 289 ತಳಿಗಳನ್ನು ಪ್ರದರ್ಶಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಈ ಪಟ್ಟಿಗೆ ಇನ್ನೂ 15-20 ತಳಿಗಳು ಸೇರ್ಪಡೆಯಾಗಲಿವೆ. ಈ ಬಾರಿಯ ಮೇಳದ ಶೀರ್ಷಿಕೆ “ಕೃಷಿಯನ್ನು ಉದ್ದಿಮೆಯನ್ನಾಗಿಸಲು ತೋಟಗಾರಿಕೆ’ ಆಗಿದೆ. ಇದಕ್ಕೆ ಪೂರಕವಾಗಿ ಕೃಷಿಯನ್ನು ಉದ್ಯಮವನ್ನಾಗಿ ಮಾಡಿಕೊಂಡ 425ಕ್ಕೂ ಅಧಿಕ ಕಂಪೆನಿಗಳು ಐಐಎಚ್ಆರ್ನಿಂದಲೇ 850ಕ್ಕೂ ಅಧಿಕ ತಂತ್ರಜ್ಞಾನಗಳಿಗೆ ಪರವಾನಗಿ ಪಡೆದಿವೆ. ಅವುಗಳ ಉತ್ಪನ್ನಗಳ ಪ್ರದರ್ಶನವೂ ಇಲ್ಲಿ ಇರಲಿದೆ.
ಅಲ್ಲದೆ, ಸಮಗ್ರ ಕೃಷಿ ಪದ್ಧತಿ, ಸೊಪ್ಪು ಸೇರಿದಂತೆ 22ಕ್ಕೂ ಅಧಿಕ ತರಕಾರಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆದು ಹೆಚ್ಚು ಇಳುವರಿ ಪಡೆಯುವಂತಹ ಹತ್ತಾರು ತಂತ್ರಜ್ಞಾನಗಳು ಮೇಳದಲ್ಲಿ ಅನಾವರಣಗೊಳ್ಳಲಿವೆ. ಇದೆಲ್ಲದರಿಂದಾಗಿ ಹೆಸರೇ ಸೂಚಿಸುವಂತೆ ಇದೊಂದು ಸಾರ್ಥಕ ರಾಷ್ಟ್ರೀಯ ತೋಟಗಾರಿಕೆ ಮೇಳ ಆಗಲಿದೆ ಎಂದು ಐಐಎಚ್ಆರ್ ಪ್ರಧಾನ ವಿಜ್ಞಾನಿ (ತರಕಾರಿ ಬೆಳೆಗಳ ವಿಭಾಗ) ಹಾಗೂ ಆಯೋಜನಾ ಸಮಿತಿ ಕಾರ್ಯದರ್ಶಿ ಡಾ.ಎಂ.ವಿ. ಧನಂಜಯ್ “ಉದಯವಾಣಿ’ಗೆ ತಿಳಿಸಿದರು.
ಇನ್ನು ಕೃಷಿಯನ್ನು ಲಾಭದಾಯಕಗೊಳಿಸುವುದು ಹಾಗೂ ತಂತ್ರಜ್ಞಾನಗಳ ಬಳಕೆ ಮೂಲಕ ಯುವಕರನ್ನು ಕೃಷಿಯತ್ತ ಆಕರ್ಷಿಸುವ ಉದ್ದೇಶದಿಂದ ಸಂರಕ್ಷಿತ ಬೇಸಾಯ ಪದ್ಧತಿಗೆ ನಾಲ್ಕು ದಿನಗಳ ಮೇಳದಲ್ಲಿ ಆದ್ಯತೆ ನೀಡಲಾಗಿದೆ. ಸಂರಕ್ಷಿತ ಬೇಸಾಯ ಪದ್ಧತಿಗಳಾದ ಹಸಿರುಮನೆ (ಪಾಲಿಹೌಸ್) ಹಾಗೂ ನೆರಳು ಪರದೆ (ಶೇಡ್ನೆಟ್)ಯನ್ನು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು, ಕಡಿಮೆ ಬೆಲೆಯಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ರೈತರಿಗೆ ನಾಲ್ಕು ದಿನಗಳ ಮೇಳದಲ್ಲಿ ಮಾಹಿತಿ ನೀಡಲಾಗುವುದು. ಈ ವಿಧಾನಗಳಲ್ಲಿ ಎಲ್ಲ ವರ್ಗದ ರೈತರು ದೇಶದ ನಾನಾ ಭಾಗಗಳಲ್ಲಿ ಬೆಳೆಯಬಹುದಾಗಿದೆ. ಇದಕ್ಕಾಗಿ ಹಲವು ಶಿಷ್ಟಾಚಾರ, ವಿಶೇಷ ತಳಿಗಳು, ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದೂ ಹೇಳಿದರು.
ಇಸ್ರೇಲ್ ಮಾದರಿ 14 ಸಾವಿರ; ಐಐಎಚ್ಆರ್ ಮಾದರಿ 800 ರೂ.!: “ಹಸಿರು ಮನೆ ಮತ್ತು ನೆರಳು ಪರದೆಯು ಈಗಲೂ ಸಾಮಾನ್ಯ ರೈತರಿಗೆ ಕೈಗೆಟುಕದ ವಿಧಾನಗಳಾಗಿದ್ದು, ಸೀಮಿತ ವರ್ಗ ಅನುಸರಿಸುವ ಕ್ರಮವಾಗಿದೆ. ಉದಾಹರಣೆಗೆ ಇಸ್ರೇಲ್ ಮಾದರಿಯ ಪಾಲಿಹೌಸ್ ಚದರ ಮೀಟರ್ಗೆ 14 ಸಾವಿರ ರೂ. ಆಗುತ್ತದೆ. ಹಾಗಾಗಿ, ಸಣ್ಣ ರೈತರಿಗೆ ಇದು ಎಟಕುವುದೇ ಇಲ್ಲ. ಐಐಎಚ್ಆರ್ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗ ಳಿಂದ ಈ ಎರಡೂ ಪದ್ಧತಿಗಳು ಕ್ರಮವಾಗಿ 300-350 ಹಾಗೂ 800 ರೂ. ಆಗುತ್ತದೆ. ಅಷ್ಟೇ ಅಲ್ಲ, ಆಯಾ ಪ್ರದೇಶಕ್ಕೆ ತಕ್ಕಂತೆ ಅನುಸರಿಸುವ ವಿಧಾನಗಳೂ ಇವೆ ಎಂದರು.
ನೆರಳು ಪರದೆಯಲ್ಲಿ ಕ್ಯಾಪ್ಸಿಕಂ, ಸೌತೆಕಾಯಿ ಸೇರಿದಂತೆ ಹಲವು ಬೆಳೆಗಳನ್ನು ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಗೌರಿಬಿದನೂರು, ಅನಂತಪುರ ಸೇರಿದಂತೆ 50 ಕಡೆಗಳಲ್ಲಿ ಪ್ರಾಯೋಗಿಕವಾಗಿ ಈ ಅಗ್ಗದ ಪಾಲಿಹೌಸ್ಗಳ ಪ್ರಯೋಗ ಮಾಡಲಾಗಿದೆ. ಅಲ್ಲೆಲ್ಲಾ ಸಾಂಪ್ರದಾಯಿಕ ವಿಧಾನಕ್ಕೆ ಹೋಲಿಸಿದರೆ, ಅಧಿಕ ಇಳುವರಿ ಜತೆಗೆ ಗುಣಮಟ್ಟದ ಬೆಳೆ ಬಂದಿದೆ. ಇದು ರೈತರ ಆದಾಯ ದ್ವಿಗುಣಗೊಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ ಎಂದು ಎಂದು ಪಿಎಂಇ ಘಟಕ (ಆದ್ಯತೆ, ನಿರ್ವಹಣೆ, ಮೌಲ್ಯಮಾಪನ)ದ ನೋಡಲ್ ಅಧಿಕಾರಿ ಡಾ.ಟಿ.ಎಸ್. ಅಘೋರ ತಿಳಿಸಿದರು.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
MUST WATCH
ಹೊಸ ಸೇರ್ಪಡೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ