ಕಾಸರಗೋಡು ಅಪರಾಧ ಸುದ್ಧಿಗಳು
Team Udayavani, May 4, 2022, 8:37 PM IST
ಡೆಂಗ್ಯೂ : ಮಗು ಸಹಿತ ಇಬ್ಬರ ಸಾವು
ಕಾಸರಗೋಡು: ಮಂಜೇಶ್ವರ ವ್ಯಾಪ್ತಿಯಲ್ಲಿ ಡೆಂಗ್ಯೂ ವ್ಯಾಪಿಸುತ್ತಿದ್ದು, ಮಗು ಸಹಿತ ಇಬ್ಬರು ಸಾವಿಗೀಡಾಗಿದ್ದಾರೆ.
ವರ್ಕಾಡಿ ಬೋಳದಪದವು ನಿವಾಸಿ ಬಾಬು ಸಫಲ್ಯ ಅವರ ಪುತ್ರ ನಿತೀಶ್ ಸಫಲ್ಯ(22) ಮತ್ತು ಜೋಡುಕಲ್ಲು ಮಡಂದೂರು ನಿವಾಸಿ ರಾಜೇಶ್ ಚೆಟ್ಟಿಯಾರ್ ಅವರ ಪುತ್ರಿ ಯಜ್ಞಶ್ರೀ (4) ಸಾವಿಗೀಡಾದರು.
ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿತೀಶ್ ಸಫಲ್ಯ ಅವರು ಮೇ 3 ರಂದು ರಾತ್ರಿ ಸಾವಿಗೀಡಾದರು. ಕಳೆದ ಎಂಟು ದಿನಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಜ್ಞಶ್ರೀ ಮೇ 3 ರಂದು ಸಾವಿಗೀಡಾದರು.
ಬೈಕ್ ಅಪಘಾತ : ಇಬ್ಬರಿಗೆ ಗಾಯ
ಕಾಸರಗೋಡು: ಮುನ್ನಾಡ್ ಪೀಪಲ್ಸ್ ಕಾಲೇಜು ಪರಿಸರದಲ್ಲಿ ಬೈಕ್ಗಳು ಪರಸ್ಪರ ಢಿಕ್ಕಿ ಹೊಡೆದು ಪೀಪಲ್ಸ್ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿ ದೀಪಕ್, ಮನು ಮೋಹನ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ದರೋಡೆ ಪ್ರಕರಣ : ಬಂಧನ
ಕಾಸರಗೋಡು: ವ್ಯಾಪಾರಿಗೆ ಬೆದರಿಸಿ ಹಣ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೊಗ್ರಾಲ್ಪುತ್ತೂರು ಅರಫಾತ್ ನಗರದ ಡೋನ್ ಸಹದ್ ಯಾನೆ ಸಹದ್(23)ನನ್ನು ಪೊಲೀಸರು ಬಂಧಿಸಿದ್ದಾರೆ.
ಉಳಿಯತ್ತಡ್ಕ ರಹಮತ್ನಗರದ ಮುಹಮ್ಮದ್ ಶಾಫಿ ಅವರನ್ನು ಬೆದರಿಸಿ ಒಂದು ಲಕ್ಷ ರೂ. ಆಗ್ರಹಿಸಿದ್ದು, ಹಣ ಸಿಗದಿದ್ದಾಗ 6000 ರೂ. ದರೋಡೆ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ.
ಬಸ್ ಪಲ್ಟಿ : ಹಲವರಿಗೆ ಗಾಯ
ಕಾಸರಗೋಡು: ಚೆರ್ವತ್ತೂರು ಞಾಣಿಕಡವಿನಲ್ಲಿ ಬಸ್ ಮಗುಚಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬುಧವಾರ ಸಂಜೆ ಬಸ್ ಪಲ್ಟಿ ಹೊಡೆದಿದ್ದು, ಬಸ್ನಲ್ಲಿದ್ದ ಪ್ರಯಾಣಿಕರನ್ನು ಸ್ಥಳೀಯರು, ಪೊಲೀಸರು ಹಾಗು ಅಗ್ನಿಶಾಮಕ ದಳ ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾಸರಗೋಡು-ಕಣ್ಣೂರು ರೂಟ್ನಲ್ಲಿ ಸಂಚರಿಸುವ ಖಾಸಗಿ ಬಸ್ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದಿದೆ.