ಕುಂದಾಪುರ: ಗುಣಮುಖರಾಗಿ 14 ಮಂದಿ ಬಿಡುಗಡೆ
Team Udayavani, May 31, 2020, 4:33 PM IST
ಕುಂದಾಪುರ, ಮೇ 31: ಇಲ್ಲಿನ ಸರಕಾರಿ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ 14 ಮಂದಿ ಕೋವಿಡ್ ಸೋಂಕಿತರು ಗುಣಮುಖರಾಗಿ ರವಿವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು. ಅವರನ್ನು ತಾಲೂಕು ಆಡಳಿತ ಗುಲಾಬಿ ಕುಂಡ ನೀಡಿ, ಶುಭ ಹಾರೈಸಿ ಬೀಳ್ಕೊಟ್ಟಿತು. ಜಿಲ್ಲೆಯಲ್ಲಿ ಕೋವಿಡ್ 19ಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ತೆರಳಿದ ಮೊದಲ ಘಟನೆ ಇದಾಗಿದೆ.
ಕೋವಿಡ್ 19ಗಾಗಿ ಮೀಸಲಿಟ್ಟ ಈ ಆಸ್ಪತ್ರೆಯಲ್ಲಿ ಒಟ್ಟು 78 ಮಂದಿ ರೋಗಲಕ್ಷಣವಿಲ್ಲದೆ ಪಾಸಿಟಿವ್ ಬಂದ ಕ್ವಾರಂಟೈನ್ನಲ್ಲಿದ್ದ ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ ಏಳನೆ ದಿನಕ್ಕೆ 3 ವರ್ಷ, 8 ವರ್ಷ ಮತ್ತು 14 ವರ್ಷದ ಮಕ್ಕಳು ಸಹಿತ 55 ವರ್ಷದರವರೆಗಿನ ಒಟ್ಟು 14 ಮಂದಿಯ ಗಂಟಲು ದ್ರವದ ಮಾದರಿ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಇವರಲ್ಲಿ ಬಹುತೇಕ ಮಂದಿ ಮಹಾರಾಷ್ಟ್ರ ರಾಜ್ಯದಿಂದ ಆಗಮಿಸಿದವರು, ಒಂದಷ್ಟು ಮಂದಿ ತೆಲಂಗಾಣದಿಂದ ಬಂದವರು.
ಕುಂದಾಪುರ ಸಹಾಯಕ ಕಮಿಷನರ್ ಕೆ. ರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸುಧೀರ್ಚಂದ್ರ ಸೂಡ, ಕೋವಿಡ್ 19 ಜಿಲ್ಲಾ ನೋಡಲ್ ಅಧಿಕಾರಿ ಡಾ| ಪ್ರಶಾಂತ್ ಭಟ್, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ, ಸರಕಾರಿ ಆಸ್ಪತ್ರೆಯ ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಡಾ| ರಾರ್ಬಟ್ ರೆಬೆಲ್ಲೊ, ಪಿಜಿಶಿಯನ್ ಡಾ| ನಾಗೇಶ್, ಬೈಂದೂರು ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಪ್ರೇಮಾನಂದ, ಕುಂದಾಪುರ ಪಿಎಸ್ಐ ಹರೀಶ್ ಆರ್. ಮೊದಲಾದವರು ಕೋವಿಡ್ ಆಸ್ಪತೆಯಲ್ಲಿ ಚಿಕಿತ್ಸೆ ಪಡೆದು ಕೊರೋನ ಮುಕ್ತರಾದವರಿಗೆ ಗುಲಾಬಿ ನೀಡ, ಗುಲಾಬಿ ಗಿಡಗಳನ್ನು ವಿತರಿಸಿ, ಮಕ್ಕಳಿಗೆ ಚಾಕಲೇಟ್ ಕೊಟ್ಟು, ಚಪ್ಪಾಳೆ ತಟ್ಟಿ ಬಿಡುಗಡೆಯಾದವರಲ್ಲಿ ಹೊಸ ಜೀವನೋತ್ಸಾಹ ತುಂಬುವ ಮೂಲಕ ವಿಶೇಷ ರೀತಿಯಲ್ಲಿ ಬೀಳ್ಕೊಟ್ಟರು. ಕುಂದಾಪುರ ಜೆಸಿಐ ಸಿಟಿ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಸರಕಾರಿ ಆಸ್ಪತ್ರೆಯ ವೈದ್ಯರು, ಶುಶ್ರೂಷಕಿಯರು, ಸಿಬಂದಿ ಉಪಸ್ಥಿತರಿದ್ದರು.