Mangaluru ಅರ್ಹ ಮತದಾರರೆಲ್ಲರಿಗೂ ಅಗತ್ಯ ಸೌಲಭ್ಯ: ಡಿಸಿ
Team Udayavani, Mar 26, 2024, 11:53 PM IST
ಮಂಗಳೂರು: ಅರ್ಹ ಮತದಾರರೆಲ್ಲರೂ ತಮ್ಮ ಹಕ್ಕು ಚಲಾಯಿಸಲು ಅನುಕೂಲವಾಗುವಂತೆ ಚುನಾವಣ ಆಯೋಗವು ಈ ಬಾರಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಶೇ.40ಕ್ಕೂ ಹೆಚ್ಚು ಅಂಗವೈಕಲ್ಯ ಹೊಂದಿರುವವರಿಗೆ ಅಂಚೆ ಮತದ ಮೂಲಕ ಮನೆಯಿಂದಲೇ ಮತ ಚಲಾಯಿಸುವ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.
ಕೇಂದ್ರ ಚುನಾವಣ ಆಯೋಗದ ನಿರ್ದೇಶನದಂತೆ ಈಗಾಗಲೇ ಮತದಾರರ ಪಟ್ಟಿಯಲ್ಲಿ ಗುರುತಿಸಲಾದ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕ ಮತದಾರರು ಹಾಗೂ ಶೇ.40ಕ್ಕೂ ಹೆಚ್ಚು ವಿಕಲತೆ ಹೊಂದಿರುವ ಬಗ್ಗೆ ಸಕ್ಷಮ ಪ್ರಾ ಧಿಕಾರದಿಂದ ನೀಡಲಾದ ಪ್ರಮಾಣ ಪತ್ರ ಹೊಂದಿರುವ ಅಂಗವಿಕಲ ಮತದಾರರ ಮನೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಭೇಟಿ ನೀಡಿ ಅವರ ಮನೆಯಲ್ಲಿಯೇ ಮತದಾನ ಮಾಡಲು ಅಗತ್ಯವಿರುವ ಅಂಚೆ ಮತದಾನದ ಸೌಲಭ್ಯ ನೀಡುವ 12-ಡಿ ನಮೂನೆ ಪತ್ರ ನೀಡುವರು. ಅದನ್ನು ಪಡೆದು, ಭರ್ತಿ ಮಾಡಿ ಬೂತ್ ಮಟ್ಟದ ಅಧಿ ಕಾರಿಗಳಿಗೆ ಸಲ್ಲಿಸಬೇಕು. ಈ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ ಮತದಾರರ ಮನೆಗೆ ಬಿಎಲ್ಒಗಳು ಮೊದಲ ಬಾರಿ ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರು ಲಭ್ಯವಿಲ್ಲದಿದ್ದಲ್ಲಿ ಪುನಃ ಎರಡನೇ ಬಾರಿ ಭೇಟಿ ನೀಡುವರು. ಈ ಮೂಲಕ ಅವರಿಗೆ ಮತದಾನದ ಸೌಲಭ್ಯ ಒದಗಿಸಲಾಗುವುದು. ಆದರೆ ಎರಡೂ ಬಾರಿಯ ಭೇಟಿ ಸಂದರ್ಭದಲ್ಲಿ ಮತದಾರರು ಲಭ್ಯವಾಗದಿದ್ದರೆ ಅಂತಹ ಮತದಾರರು ಅಂಚೆ ಮತದಾನದ ಸೌಲಭ್ಯ ಕಳೆದುಕೊಳ್ಳುವರು ಎಂದರು.
ಹಿರಿಯ ನಾಗರಿಕರು ಹಾಗೂ ಅಂಗವಿಕಲ ಮತದಾರರಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಲು ಅಗ್ಯವಿರುವ ವೀಲ್ ಚೇರ್, ರ್ಯಾಂಪ್, ಮತಗಟ್ಟೆ ಸಹಾಯಕರು ಸೇರಿದಂತೆ ಇತರ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿರುತ್ತದೆ. ಒಂದು ಬಾರಿ ಮನೆಯಿಂದಲೇ ಮತ ಚಲಾಯಿಸುವ ಆಯ್ಕೆ ಮಾಡಿಕೊಂಡಲ್ಲಿ, ಅವರಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಲು ಅವಕಾಶವಿರುವುದಿಲ್ಲ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.