ರಾಹುಲ್ರನ್ನು ಹೆಚ್ಚುವರಿ ಕೀಪರ್ ಆಗಿ ಆಯ್ಕೆ ಮಾಡಿ: ಮೊಹಮ್ಮದ್ ಕೈಫ್
Team Udayavani, May 18, 2020, 6:30 AM IST
ಹೊಸದಿಲ್ಲಿ: ಭವಿಷ್ಯದಲ್ಲಿ ಭಾರತ ತಂಡಕ್ಕೆ ಓರ್ವ ಹೆಚ್ಚುವರಿ ಕೀಪರ್ನ ಅಗತ್ಯವಿದೆ. ಕೆ.ಎಲ್. ರಾಹುಲ್ ಅವರು ಉತ್ತಮವಾಗಿ ಕೀಪಿಂಗ್ ಮತ್ತು ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದರೆ ಅವರನ್ನು ಪೂರ್ಣ ಪ್ರಮಾಣದ ಕೀಪರ್ ಆಗಿ ಬಳಸುವ ಬದಲು ಹೆಚ್ಚುವರಿ ಕೀಪರ್ ಆಗಿ ಬಳಕೆ ಮಾಡಿದರೆ ಒಳಿತು ಎಂದು ಭಾರತ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಲೋ ಲೈವ್ ಸಂದರ್ಶನದಲ್ಲಿ ಮಾತನಾಡಿದ ಅವರು, ಧೋನಿ ತಂಡದಲ್ಲಿ ಇಲ್ಲದ ವೇಳೆ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಲಾಯಿತು. ಆದರೆ ಪಂತ್ ಅವರಿಗೆ ಹೆಚ್ಚು ಅವಕಾಶ ನೀಡದೆ ರಾಹುಲ್ ಅವರನ್ನು ಆಯ್ಕೆ ಮಾಡಲಾಯಿತು. ಯಾರನ್ನಾದರೂ ಒಂದು ಸ್ಥಾನಕ್ಕೆ ಆಯ್ಕೆ ಮಾಡಿದಾಗ ಅವರಿಗೆ ಸಂಪೂರ್ಣ ಬೆಂಬಲ ಮತ್ತು ಸಮಯವನ್ನು ನೀಡಬೇಕಾದ ಅಗತ್ಯವಿದೆ ಎಂದರು.
ನನ್ನ ಪ್ರಕಾರ ಕೆ.ಎಲ್. ರಾಹುಲ್ ಪೂರ್ಣ ಪ್ರಮಾಣದ ಕೀಪಿಂಗ್ ಮಾಡಬಾರದು. ಏಕೆಂದರೆ ರಾಹುಲ್ ಸುದೀರ್ಘ ಅವಧಿ ಬ್ಯಾಟಿಂಗ್ ಮಾಡಬೇಕು. ಇನ್ನು ತಂಡದ ಮುಖ್ಯ ಕೀಪರ್ ಗಾಯವಾದರೆ ಬೇರೆ ಆಟಗಾರರನ್ನು ಹುಡುಕುವ ಅಗತ್ಯವಿರುವುದಿಲ್ಲ. ಯಾಕೆಂದರೆ ಅಂತಹ ಸಮಯದಲ್ಲಿ ರಾಹುಲ್ಗೆ ಈ ಜವಾಬ್ದಾರಿಯನ್ನು ನೀಡಬೇಕು ಎಂದು ಕೈಫ್ ಸಲಹೆ ನೀಡಿದ್ದಾರೆ.
ತಂಡದ ಆಯ್ಕೆ ಪಾರದರ್ಶಕವಾಗಿರಬೇಕು
ತಂಡವನ್ನು ಆಯ್ಕೆ ಮಾಡುವಾಗ ಆಯ್ಕೆ ಸಮಿತಿಯ ನಿರ್ಧಾರಗಳು ಪಾರದರ್ಶಕವಾಗಿ ಇದ್ದರೆ ಬಹಳ ಒಳ್ಳೆಯದು. ಒಬ್ಬ ಆಟಗಾರ ಯಾಕೆ ಆಯ್ಕೆ ಆಗುತ್ತಾನೆ ಅಥವಾ ಯಾಕೆ ಆಯ್ಕೆ ಆಗಿಲ್ಲ ಎನ್ನುವುದನ್ನು ಆತನಿಗೆ ಸ್ಪಷ್ಟವಾಗಿ ತಿಳಿ ಹೇಳಬೇಕು. ಇಂಗ್ಲೆಂಡ್ ಹಾಗೂ ಇತರ ದೇಶಗಳಲ್ಲಿ ಇವನ್ನೆಲ್ಲ ಸ್ಪಷ್ಟವಾಗಿ ಹೇಳುತ್ತಾರೆ. ಭಾರತದಲ್ಲಿ ಆಯ್ಕೆ ಸಮಿತಿ ಸದಸ್ಯರು ಇದನ್ನು ಹೇಳುವುದಿಲ್ಲ. ಇದರಿಂದ ಆಯ್ಕೆ ಸಮಿತಿ ಹಾಗೂ ಆಟಗಾರರ ನಡುವೆ ಬಹಳ ದೊಡ್ಡ ಅಂತರ ಏರ್ಪಟ್ಟಿದೆ. ಇದು ದೂರವಾಗಬೇಕು ಎಂದು ಕೈಫ್ ಹೇಳಿದ್ದಾರೆ.