ರಮೇಶ್ ಜಾರಕಿಹೊಳಿಗೆ ಬಂಧನ ಭೀತಿ- ವಂಚನೆ ಪ್ರಕರಣ CIDಗೆ ವರ್ಗಾವಣೆ
Team Udayavani, Jan 19, 2024, 11:51 PM IST
ಬೆಂಗಳೂರು: ಬೆಳಗಾವಿಯ ಸೌಭಾಗ್ಯಲಕ್ಷ್ಮಿ ಶುಗರ್ಸ್ ಸಾಲ ಪ್ರಕರಣದ ತನಿಖೆಯನ್ನು ಸರಕಾರವು ಸಿಐಡಿ ವಿಭಾಗಕ್ಕೆ ವರ್ಗಾಯಿಸಿದ್ದು, ಪ್ರಕರಣದ ಮೊದಲನೇ ಆರೋಪಿ, ಬಿಜೆಪಿ ಶಾಸಕ ರಮೇಶ್ ಜಾರಕಿ ಹೊಳಿಗೆ ಬಂಧನ ಭೀತಿ ಆವರಿಸಿದೆ.
ಆರೋಪಿಗಳು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನಲ್ಲಿ ಸಾಲ ಪಡೆದು ಹಿಂದಿರುಗಿಸದೆ ಮೋಸ ಮಾಡುವ ಉದ್ದೇಶ ಹೊಂದಿದ್ಧಾರೆ. ಸಾಲ ಮರುಪಾವತಿಸದೆ ಬ್ಯಾಂಕಿಗೆ ವಂಚಿಸುವ ಉದ್ದೇಶದಿಂದ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ಬಾರದಂತೆ ಸೌಭಾಗ್ಯಲಕ್ಷ್ಮಿ ಶುಗರ್ಸ್ ಲಿ. ಕಂಪೆನಿ ಆಡಳಿತ ಮಂಡಳಿಯಲ್ಲಿದ್ದ ತಮ್ಮ ಹುದ್ದೆಗಳಿಂದ ಹೊರಬಂದು ಸಂಬಂಧವಿಲ್ಲದ ವ್ಯಕ್ತಿಗಳನ್ನು ನಿರ್ದೇಶಕರನ್ನಾಗಿ ನೇಮಿಸಿದ್ದಾರೆ ಎಂದು ಬ್ಯಾಂಕ್ ಮ್ಯಾನೇಜರ್ ದೂರಿನಲ್ಲಿ ಉಲ್ಲೇಖೀಸಿದ್ದರು.
ಏನಿದು ಪ್ರಕರಣ ?
ಗೋಕಾಕ್ ತಾಲೂಕಿನಲ್ಲಿರುವ ಸೌಭಾಗ್ಯಲಕ್ಷ್ಮಿ ಶುಗರ್ಸ್ ಲಿ. ಕಂಪೆನಿ ಹೆಸರಿನಲ್ಲಿ 2013 ರಿಂದ 2017ರ ವರೆಗೆ ಚಾಮ ರಾಜಪೇಟೆಯ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನಿಂದ ಒಟ್ಟು 232.88 ಕೋಟಿ ರೂ. ಸಾಲ ಪಡೆದಿದ್ದರು. ಬಳಿಕ 2023ರಲ್ಲಿ 439.7 ಕೋ. ರೂ. ಸಾಲ ಬಾಕಿ ಉಳಿಸಿಕೊಂಡಿದ್ದರು. ಸಾಲ ಮರುಪಾವತಿ ಆಗದ ಕಾರಣ ಬ್ಯಾಂಕ್ ಮ್ಯಾನೇಜರ್ ರಾಜಣ್ಣ ಬೆಂಗಳೂರಿನ ವಿವಿ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ಆಧಾರದಲ್ಲಿ ರಮೇಶ್ ಜಾರಕಿಹೊಳಿ, ವಸಂತ್ ಪಾಟೀಲ್, ಶಂಕರ್ ಪವಾಡೆ ವಿರುದ್ಧ ಎಫ್ಐಆರ್ ದಾಖಲಾಗಿದೆ.
ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಸಕ್ಕರೆ ಕಾರ್ಖಾನೆ ಅಭಿವೃದ್ಧಿಗಾಗಿ ಪಡೆದಿರುವ ಸಾಲ ಮತ್ತು ಬಡ್ಡಿ ಸೇರಿ 439 ಕೋ. ರೂ. ಪಾವತಿಸದೆ ವಂಚಿಸಿರುವ ಆರೋಪದಲ್ಲಿ ತಮ್ಮ ವಿರುದ್ಧದ ದೂರು ಮತ್ತು ಎಫ್ಐಆರ್ ರದ್ದುಪಡಿಸುವಂತೆ ಕೋರಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಶುಕ್ರವಾರ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.