ಪಂಚವಾರ್ಷಿಕ ಯೋಜನೆಯಾಯ್ತು ಈಜುಕೊಳ : ಕುಂಟುತ್ತಲೇ ಸಾಗಿರುವ ಕಾಮಗಾರಿ
Team Udayavani, Jan 20, 2021, 4:41 PM IST
ಧಾರವಾಡ: ಒಂದು ವರ್ಷ ಬರೀ ತೆರವು, ನೆಲ ಅಗೆಯುವುದರಲ್ಲೇ ಕಾಲಹರಣ…ಇದಾದ ಬಳಿಕ ಅನುದಾನದ ಕೊರತೆ.. ಬದಲಾಗುತ್ತಲೇ ಇರುವ ನಿರ್ಮಾಣ ಯೋಜನೆ…ಈಗ ಅನುದಾನ ಕೊರತೆ ನೀಗಿದ ಬಳಿಕವೂ ಆಮೆಗತಿಯಲ್ಲಿ ಸಾಗಿರುವ ಕಾಮಗಾರಿ ಪೂರ್ಣ ಆಗಲು ಕನಿಷ್ಠ ಇನ್ನೂ ಎರಡು ವರ್ಷ ಬೇಕಂತೆ…ಗರಿಷ್ಠ ಎಷ್ಟು ವರ್ಷವೋ ದೇವರಿಗೆ ಗೊತ್ತು!
ಹೌದು, ಬೇಸಿಗೆ ಬಿರು ಬಿಸಿಲಿನಲ್ಲಿ ಮತ್ತು ಶಾಲೆಯ ರಜೆಗಳಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಕೊಂಚ ಈಜುಕೊಳಕ್ಕೆ ಹೋಗಿ ಹಾಯಾಗಿ ಈಜಿ ಮಜಾ ಪಡೆಯಲು ಬಹುವರ್ಷಗಳಿಂದ ಕಾದಿದ್ದ ಧಾರವಾಡದ ಏಕೈಕ ಈಜುಕೊಳದ ಕಥೆ ಮತ್ತು ವ್ಯಥೆ ಇದು. ನಗರದ ಜಿಲ್ಲಾಧಿಕಾರಿ ನಿವಾಸದ ಸನ್ನಿಹಿತದಲ್ಲಿಯೇ ನಿರ್ಮಾಣ ಆಗುತ್ತಿರುವ ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾ ಸಂಕೀರ್ಣದ ಕಾಮಗಾರಿ ಪರಿ ನೋಡಿದರೆ ನಿಜಕ್ಕೂ ಬೇಸರ ತರಿಸುತ್ತದೆ. ಕ್ರೀಡಾಪಟುಗಳು, ತರಬೇತುದಾರರ
ಸಲಹೆಗಳ ಅನ್ವಯ ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆ ನಡೆಸಲು ಅಗತ್ಯವಿರುವ ಈಜುಕೊಳ ಸೇರಿ ಕೆಲ ಬದಲಾವಣೆ ಮಾಡಿದ್ದರಿಂದ ಯೋಜನಾ ವೆಚ್ಚ 13.5 ಕೋಟಿಯಿಂದ 35 ಕೋಟಿಗೇರಿದೆ. ಪಾಲಿಕೆಯ ವ್ಯಾಪ್ತಿಯ ಈಜುಕೊಳವನ್ನು ತೆರವುಗೊಳಿಸಿ, ನೆಲ ಅಗೆದು ಈ ಕಾಮಗಾರಿ ಆರಂಭವಾಗಿ ಬರೋಬ್ಬರಿ 2 ವರ್ಷವಾದರೂ ನಿರೀಕ್ಷಿತಮಟ್ಟದಲ್ಲಿ ಕಾಮಗಾರಿ ಆಗದೇ ಇರುವುದೇ ಕ್ರೀಡಾಸಕ್ತರ ಬೇಸರಕ್ಕೆ ಕಾರಣವಾಗಿದೆ.
ನಿರ್ಮಾಣ ಯೋಜನೆ ಬದಲಾವಣೆಯಿಂದ ವೆಚ್ಚವೂ ಹೆಚ್ಚಳವಾಗಿ ಅನುದಾನದ ಕೊರತೆ ಎದುರಿಸುವಂತಾಗಿತ್ತು. ಆದರೆ ಈಗ ಅನುದಾನ ಕೊರತೆ ನೀಗಿದ್ದರೂ ಕಾಮಗಾರಿಗೆ ಮಾತ್ರ ವೇಗ ಸಿಕ್ಕಿಲ್ಲ.
ಇದನ್ನೂ ಓದಿ:ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ರಾಮಲಿಂಗಾರೆಡ್ಡಿ, ಧ್ರುವನಾರಾಯಣ ನೇಮಕ
ಇನ್ನೆರಡು ವರ್ಷದಲ್ಲಾದರೂ ಮುಗಿಯುತ್ತಾ?
ಒಎನ್ಜಿಸಿ ಕಂಪನಿಯ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್ಆರ್) ಮೂಲಕ ಒಟ್ಟು 13.5 ಕೋಟಿ ವೆಚ್ಚದಲ್ಲಿ ಸಂಕೀರ್ಣ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಒಎನ್ಜಿಸಿ 13.5 ಕೋಟಿ ರೂ. ನೀಡಲು ಒಪ್ಪಿ ಮೊದಲ ಹಂತವಾಗಿ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೆ, ಬಳಿಕ ಬದಲಾವಣೆಗಳ ಬಳಿಕ ಎದುರಾಗಿರುವ ಅನುದಾನ ಕೊರತೆ ನೀಗಿಸಲು ಕಂಪನಿ ಹಿಂದೇಟು ಹಾಕಿತ್ತು. ಹೀಗಾಗಿ ಉಳಿದ ಅನುದಾನಕ್ಕಾಗಿ ವಿವಿಧ ಕಂಪನಿಗಳ ಮೊರೆ ಹೋಗುವಂತಾಗಿತ್ತು. ನೀಲನಕ್ಷೆಯಲ್ಲಿ ಕೆಲ ಬದಲಾವಣೆ ಹಾಗೂ ವೈಶಿಷ್ಟ್ಯಗಳಲ್ಲಿ ಬದಲಾವಣೆ ಮಾಡಿದ ಪರಿಣಾಮ ಯೋಜನಾ ವೆಚ್ಚ 35 ಕೋಟಿಗೆ ಏರಿತ್ತು. ಅನುದಾನದ ಕೊರತೆ ಎದುರಾಗಿತ್ತು. ಸದ್ಯ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ಅವರು
ವಿವಿಧ ಕಂಪನಿಗಳ ಜೊತೆ ಮಾತುಕತೆ ಕೈಗೊಂಡು ಅನುದಾನದ ಕೊರತೆ ನಿವಾರಿಸಿದ್ದಾರೆ. ಆದರೂ ಕಾಮಗಾರಿ ಮುಗಿಯಲು ಇನ್ನೆರಡು ವರ್ಷ ಬೇಕಂತೆ. ಈ ಅವಧಿಯೊಳಗೆಯಾದರೂ ಕಾಮಗಾರಿ ಪೂರ್ಣಗೊಂಡು ಕ್ರೀಡಾ ಸಂಕೀರ್ಣ ಮುಕ್ತಗೊಳ್ಳಲಿ ಎಂಬುದೇ ಕ್ರೀಡಾಸಕ್ತರ ಅಭಿಲಾಷೆ.
ಕ್ರೀಡಾಪಟುಗಳ ಅಸಮಾಧಾನ
ಜಿಲ್ಲಾಧಿಕಾರಿ ನಿವಾಸದ ಸನ್ನಿಹಿತದಲ್ಲಿಯೇ ಇದ್ದ ಪಾಲಿಕೆಯ ಈಜುಕೊಳ ಸೂಕ್ತ ನಿರ್ವಹಣೆ ಕೊರತೆ ಇಲ್ಲದೆ ಸೊರಗಿತ್ತು. ಇದಕ್ಕೆ ಹೈಟೆಕ್ ಸ್ಪರ್ಶದ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣ ನಿರ್ಮಿಸಲು 2018ರಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಶಿಲಾನ್ಯಾಸ ನೆರವೇರಿಸಿದ್ದರು. ಅಲ್ಲದೇ ಈ ನಿರ್ಮಾಣಕ್ಕೆ ದೆಹಲಿಯ ಐಐಟಿ ಹಾಗೂ ಪ್ರತಿಷ್ಠಿತ ಸ್ಕೂಲ್ ಆಫ್ ಪ್ಲ್ಯಾನಿಂಗ್ ಆ್ಯಂಡ್ ಆರ್ಕಿಟೆಕ್ಟನ್ ತಾಂತ್ರಿಕ ಸಲಹೆ ಇದೆ. ಆದರೆ ಕ್ರೀಡಾ ಸಂಕೀರ್ಣ ನಿರೀಕ್ಷಿತ ಮಟ್ಟದಲ್ಲಿ ಮೇಲೇಳದಿರುವುದು ಕ್ರೀಡಾಪಟುಗಳ ಅಸಮಾಧಾನಕ್ಕೂ ಕಾರಣವಾಗಿದೆ.
ನೆಲಬಿಟ್ಟು ಮೇಲೆದ್ದಿಲ್ಲ ಸಂಕೀರ್ಣ
ಇದು ಬಹುಪಯೋಗಿ ಕ್ರೀಡಾ ಸಂಕೀರ್ಣವಾಗಿದ್ದು, ನೆಲಮಹಡಿಯಲ್ಲಿ ಪ್ರತ್ಯೇಕವಾಗಿ ಪಾಕಿಂìಗ್ ವ್ಯವಸ್ಥೆ ಇರಲಿದೆ. ಉಳಿದ ಕಡೆಗಳಲ್ಲಿ ಕ್ರೀಡಾ ಸಾಮಗ್ರಿಗಳ ಮಳಿಗೆಗಳು, ಕ್ಯಾಂಟೀನ್, ವೀಕ್ಷಕರ ಗ್ಯಾಲರಿ, ತರಬೇತುದಾರರು ಮತ್ತು ವೈದ್ಯರಿಗೆ ಕೊಠಡಿ, ಮಕ್ಕಳು ಹಾಗೂ ವಯಸ್ಕರಿಗೆ ಪ್ರತ್ಯೇಕ ಈಜುಕೊಳ, ಕಬಡ್ಡಿ ಅಂಕಣ, ಬ್ಯಾಡ್ಮಿಂಟನ್, ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಜಿಮ್ ಹಾಗೂ ಇತರ ವಿಶಿಷ್ಟ ವ್ಯವಸ್ಥೆ ಇರಲಿದೆ. ಜಿ+3 ಮಹಡಿಗಳಲ್ಲಿ ಸಂಕೀರ್ಣ ನಿರ್ಮಾಣಗೊಳ್ಳಲಿದ್ದು, ಈವರೆಗೂ ಸಂಕೀರ್ಣ ನೆಲಬಿಟ್ಟು ಮೇಲೆದ್ದಿಲ್ಲ. ಆಮೆಗತಿಯಲ್ಲಿ ಸಾಗಿರುವ ಕಾಮಗಾರಿಗೆ ವೇಗ ನೀಡುವ ಕೆಲಸ ಆಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ