ರಾಷ್ಟ್ರ ಸಮಗ್ರತೆಯ ದಿಕ್ಸೂಚಿ ನಯಾ ಕಾಶ್ಮೀರ ಮಸೂದೆ
Team Udayavani, Dec 13, 2023, 12:45 AM IST
“ಏಕ್ ದೇಶ್ ಮೇ ದೋ ನಿಶಾನ್, ದೋ ಪ್ರಧಾನ್, ದೋ ಸಂವಿಧಾನ್ ನಹೀ ಚಲೇಗ’ ಎನ್ನುವ ಡಾ| ಶ್ಯಾಮ ಪ್ರಸಾದ ಮುಖರ್ಜಿ ಯವರ ಹೋರಾಟ ಹಾಗೂ ಬಲಿದಾನದ ಸಾರ್ಥಕತೆಯ ಮಜಲು ಇದೀಗ ಸ್ಪಷ್ಟವಾಗಿ ಕಾಶ್ಮೀರದ ಕಣಿವೆಯಲ್ಲಿ ಅನಾವರಣಗೊಳ್ಳು ತ್ತಿದೆ. 1947 ಅಕ್ಟೋಬರ್ 26ರಂದು ರಾಜಾ ಹರಿಸಿಂಗ್ ಅವರಿಂದ ಭಾರತ ಸರಕಾರಕ್ಕೆ ಹಸ್ತಾಂತರಿಸಲ್ಪಟ್ಟ ಜಮ್ಮು-ಕಾಶ್ಮೀರದ ನೂತನ ಇತಿಹಾಸದ ಇನ್ನೊಂದು ಪುಟ ಇದೀಗ ತೆರೆಯುತ್ತಿದೆ.
ಭಾರತ ರಾಜ್ಯಾಂಗ ಘಟನೆ ಯೊಳಗೆ “ತಾತ್ಕಾಲಿಕ ವಿಧಿ’ ಎಂದೇ ಸಂಬೋಧಿತಗೊಂಡು ಬೆಚ್ಚಗೆ ಸುದೀರ್ಘ ಅವಧಿಯಲ್ಲಿ ಅವಿತು ಕುಳಿತಿದ್ದ, ಪ್ರತ್ಯೇಕತೆಯ ಸೊಲ್ಲು ತುಂಬಿಸಿಕೊಂಡಿದ್ದ 370ನೇ ವಿಧಿ ಅಮಿತ್ ಶಾ ಅವರ 2019ರ ಆಗಸ್ಟ್ 5ರ ನುಡಿ ಸಿಡಿಲಬ್ಬರಕ್ಕೆ ದೊಪ್ಪನೆ ಕುಸಿದು ಹೋಯಿತು! 370ನೇ ವಿಧಿಯನ್ನು ಖಂಡತುಂಡವಾಗಿ ಅಂದೇ ವಿರೋಧಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಅಖಂಡ ಭಾರತದ ಕನಸು-ನನಸಿನ ಸರದಾರ ಪಟೇಲರ ಆಶಯಕ್ಕೆ ನೀರೆರೆದ ಕೀರ್ತಿಯನ್ನು ಮೋದಿ ಸರಕಾರ ತನ್ನದಾಗಿಸಿತು. ಈ “370ನೇ ಕಾಶ್ಮೀರ ವಿಧಿ’ಯನ್ನು ಮುಟ್ಟಿದರೆ, ಮೆಟ್ಟಿದರೆ ರಾಷ್ಟ್ರವೇ ಅಲ್ಲೋಲಕಲ್ಲೋಲವಾದೀತು ಎಂಬ ಭಯದ ಕರಿಪರದೆ 2019ರಲ್ಲೇ ಸರಿದು ಹೋಯಿತು; ಕೇಂದ್ರ ಸರಕಾರದ ಈ ಐತಿಹಾಸಿಕ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಕೂಡ ತನ್ನ ಅಂಗೀಕಾರದ ಮೊಹರು ಒತ್ತಿದೆ. ಈ ಮೂಲಕ ಕಾಶ್ಮೀರದ ಕಣಿವೆಯಲ್ಲಿ ಹೊಸ ಅರುಣೋದಯವಾಗಿದೆ.
ಅವಿಭಾಜ್ಯತೆ-ಅಖಂಡತೆಯ ದೃಢ ಸಂಕಲ್ಪ
ಭಾರತ ಸಂವಿಧಾನದ ಒಂದನೇ ವಿಭಾಗವೇ “ನಿರ್ಗಮನದ ದ್ವಾರ’ವನ್ನು ಸಂಪೂರ್ಣ ಮುಚ್ಚಿದ ವಾಸ್ತವಿಕತೆಯನ್ನು ಬಿಚ್ಚಿಟ್ಟಿದೆ. 1961ರಲ್ಲಿ ಗೋವಾ, ದಿಯು ದಾಮನ್, 1975ರಲ್ಲಿ ಸಿಕ್ಕಿಂ- ಹೀಗೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ “ಆಗಮನ’ಕ್ಕೆ ಮಾತ್ರ ನಮ್ಮ ರಾಜ್ಯಾಂಗ ಘಟನೆ ಸದಾ ತೋರಣ ರಚಿಸಿದೆ. ಆದರೆ 1947ರಿಂದ ಆಜಾದ್ ಕಾಶ್ಮೀರದ ಎಲ್ಲ ಸೊಲ್ಲುಗಳನ್ನೂ ಇಲ್ಲವಾಗಿಸಿದ ನೆಲೆಯಲ್ಲಿ ಇದೀಗ ಇನ್ನೊಂದು ಹೆಜ್ಜೆ ಮುಂದು ವರಿಸಲಾಗಿದೆ. 370ನೇ ವಿಧಿಯ ರದ್ಧತಿಯೊಂದಿಗೇ ವರ್ತಮಾನದ ವರ್ತಮಾನ ಎನಿಸಿದ “ನಯಾ ಕಾಶ್ಮೀರ ಮಸೂದೆ’ ಎಂದೇ ವರ್ಣಿಸಲಾದ ಜಮ್ಮು ಮತ್ತು ಕಾಶ್ಮೀರ ಪುನರ್ ಸಂಘಟನೆ (ತಿದ್ದುಪಡಿ) ಮಸೂದೆ ಹಾಗೂ ಜಮ್ಮು ಮತ್ತು ಕಾಶ್ಮೀರ ಮೀಸಲು (ತಿದ್ದುಪಡಿ) ಮಸೂದೆ ಸಮಗ್ರತೆಯ ಅಶೋಕ ಚಕ್ರವನ್ನು ಭಾರತದ ಭೂಶಿರದ ಮೇಲೆ ರಾರಾಜಿಸಿದೆ.
ಕಳೆದ ನಿನ್ನೆಗಳ ರಾಜಕೀಯವೇ ಬರಲಿರುವ ನಾಳೆಗಳ ಇತಿಹಾಸ.
ಯಾವುದೇ ರಾಷ್ಟ್ರದ ನೇತಾರರ ಹೆಜ್ಜೆ ಪ್ರಮಾದ ಎನಿಸಿದಾಗ ಪಕ್ಷಾ ತೀತವಾಗಿ ಪ್ರಶ್ನಾರ್ಹ ಎನಿಸುತ್ತದೆ; ಚರಿತ್ರೆ ಅದನ್ನೇ ಯಥಾವತ್ತಾಗಿ ದಾಖಲಿಸಿಯೇ ತೀರುತ್ತದೆ. ಪಾಕಿಸ್ಥಾನದ ಸೇನೆ, ಗುಡ್ಡಗಾಡು ಜನರೊಂದಿಗೆ ಸೇರಿ ಕಾಶ್ಮೀರವನ್ನು ಆಕ್ರಮಿಸಿ ದಾಗ ಅದನ್ನು ಹಿಮ್ಮೆಟ್ಟಿಸಲು ಜನರಲ್ ತಿಮ್ಮಯ್ಯ ಹಾಗೂ ಜನರಲ್ ಆತ್ಮರಾಮ್ರ ನೇತೃತ್ವದಲ್ಲಿ ತ್ರಿವರ್ಣ ಧ್ವಜವನ್ನು ಪ್ರಪ್ರಥಮ ಬಾರಿಗೆ ಮುಂದಿರಿಸಿ ನಮ್ಮ ಸೈನ್ಯ 1947ರಲ್ಲಿ ಮುನ್ನುಗ್ಗುತ್ತಿತ್ತು. ರಭಸದಿಂದ, ವೀರಾವೇಶ ದಿಂದ ಕಾದಾಡಿ ಜಯದ ಮೆಟ್ಟಿಲೇರುತ್ತಿ¨ªಾ ಗಲೇ ಏಕಾಏಕೀ “ಯುದ್ಧ ಸ್ಥಂಭನ’ದ ಆಜ್ಞೆ ಹೊಸದಿಲ್ಲಿಯ ನೆಹರೂ ನೇತಾರಿಕೆಯ ಮಧ್ಯಾವಧಿ ಸರಕಾರದಿಂದ ಅಪ್ಪಳಿಸಿತು! “ದಯವಿಟ್ಟು ಇನ್ನು ಸ್ವಲ್ಪ ಅವಕಾಶ ಕೊಡಿ; ವೈರಿಯನ್ನು ಹಿಮ್ಮೆಟ್ಟಿಸಿ ಸಮಗ್ರ ಕಾಶ್ಮೀರವನ್ನು ನಮ್ಮದಾಗಿಸುತ್ತೇವೆ’ ಎಂದು ಅಂಗಲಾಚಿ ಬೇಡಿದರೂ ಸಮ್ಮತಿಯ ಮೊಹರು ಸಿಗಲಿಲ್ಲ! ತತ್ಪರಿಣಾಮ- ಇಂದಿಗೂ ಸುಮಾರು ಮೂರನೇ ಒಂದು ಭಾಗ “ಪಾಕ್ ಆಕ್ರಮಿತ ಕಾಶ್ಮೀರ” ಆಗಿಯೇ ಉಳಿದಿದೆ; ಅತ್ತ ಪಾಕಿಸ್ಥಾನ ಆ ಭೂಪ್ರದೇಶವನ್ನು “ಆಜಾದ್ ಕಾಶ್ಮೀರ’ ಎಂಬುದಾಗಿ ಘೋಷಿಸಿ ತನ್ನ “ಕಪಿಮುಷ್ಟಿ’ಯೊಳಗೆ ಇರಿಸಿದೆ! ಇದೊಂದು ಸ್ವಯಂಕೃತ ಅಪರಾಧವಲ್ಲದೆ ಮತ್ತೇನು? ಅಷ್ಟೇ ಅಲ್ಲ, ಕಾಶ್ಮೀರ ಸಮಸ್ಯೆ ಎಂಬ ಕೂಸನ್ನು ಹುಟ್ಟುಹಾಕಿ ವಿಶ್ವಸಂಸ್ಥೆಯ ತೊಟ್ಟಿಲಲ್ಲಿ ಇಟ್ಟು, ಜಗಜ್ಜಾಹೀರುಗೊಳಿಸಿ, ಕೈ ತೊಳೆದುಕೊಳ್ಳ ಲಾಯಿತು!
ಹೀಗೆ ಅಂದಿನ ಐತಿಹಾಸಿಕ ಪ್ರಮಾದಕ್ಕೆ ಇಂದು ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನ ಮುಂದೆ ಇರಿಸಿದ ಮಸೂದೆಗಳ ಪ್ರಸ್ತಾವದಲ್ಲಿ ಒಂದು ದಿಟ್ಟ ನಡೆ ಅನಾವರಣ ಗೊಂಡಂತಾಗಿದೆ. ಪಾಕಿಸ್ಥಾನದ ಅಧೀನದಲ್ಲಿನ ಪಿ.ಒ.ಕೆ. ಯ ಪ್ರತಿನಿಧಿತ್ವಕ್ಕೆಂದೇ ವಿಧಾನಸಭೆಯಲ್ಲಿ 24 ಶಾಸಕ ಸ್ಥಾನಗಳು ಮೀಸಲು! ಇದೊಂದು ಸ್ವತಂತ್ರ ಭಾರತದ ವಿಲಕ್ಷಣ ಎನಿಸಿದರೂ ಭವಿಷ್ಯ ಬಾಗಿಲಿಗೆ ಭವ್ಯ ತೋರಣ ರಚಿಸಲು ಶಕ್ತ ಎನಿಸಿದ ಗಟ್ಟಿ ಹೆಜ್ಜೆ! ಎಂದೇ ವ್ಯಾಖ್ಯಾನಿಸ ಬಹುದು. ಚುನಾವಣೆ ಮುಗಿದ ಬಳಿಕ ಆ 24 ಸ್ಥಾನಗಳೂ “ಖಾಲಿ’ ಎಂದೇ ಘೋಷಿಸುವ ಚುನಾವಣ ಆಯೋಗದ ಪ್ರಕ್ರಿಯೆ ಸಾಗಲಿದೆ! ಮುಂದೊಂದು ದಿನ “ನಾವೂ ಭಾರತದ ಪ್ರಜಾತಂತ್ರೀಯ ಚೌಕಟ್ಟಿನೊಳಗೆ, ವಿಶಾಲ ಭಾರತದೊಳಗೆ ನೆಮ್ಮದಿಯ ಬಾಳು- ಬೆಳಕು ಹೊಂದಲು ಸಾಧ್ಯ’ ಎಂಬ ಆಶಯ ಅಭಿವ್ಯಕ್ತಗೊಳ್ಳಲು ಪಿ.ಒ.ಕೆ. ಜನತೆಗೆ ಇದು ಸುವರ್ಣ ಪಥ ಎನಿಸಲಿದೆ.
ತಾವಾಗಿಯೇ, ವಿಲೀನತೆಗೆ ಹೋರಾಟದ ಮಜಲು ನಿರ್ಮಿಸಲು ಗಡಿಯಾಚೆಗಿನ ಕಾಶ್ಮೀರಿಗಳಿಗೆ “ನಯಾ ಪಥ’ ಈ “ನಯಾ ಕಾಶ್ಮೀರ ಮಸೂದೆ’ ಸೃಜಿಸಬಲ್ಲುದು. ಈ ಮರ್ಮ ಪ್ರಾಯಶಃ ಪ್ರಚಲಿತ ರಾಜಕೀಯದ ಅತ್ಯಂತ ರೋಚಕ ಹಾಗೂ ನಾಜೂಕಿನ ದೃಷ್ಟಿ, ಸೃಷ್ಟಿ ಎಂದೇ ರಾಜ್ಯಶಾಸ್ತ್ರಜ್ಞರು ವ್ಯಾಖ್ಯಾನಿಸಬಹುದಾಗಿದೆ.
ಇದರೊಂದಿಗೆ ಕೇಂದ್ರ ಸರಕಾರ ಏಕಕಾಲ ದಲ್ಲಿ ಇನ್ನೂ ಎರಡು ಸಂಕೇತಗಳನ್ನು, ದೃಢ ನಿರ್ಧಾರಗಳನ್ನು ಜಗದಗಲ ಸೂಚ್ಯವಾಗಿ ಸಾರಲು ಮುಂದಾಗಿದೆ. ಒಂದು, ಅದು ಕೆನಡಾದ ನೆಲವಿರಲಿ, ಪಾಶ್ಚಾತ್ಯ ಜಗತ್ತೇ ಇರಲಿ, ಅಲ್ಲೆಲ್ಲ ಸಂಘಟಿಸಿ ಪ್ರತ್ಯೇಕ “ಖಲಿಸ್ಥಾನ’ದ ಧ್ವಜ ಪಂಜಾಬಿನಲ್ಲಿ ಹಾರಿಸಲು “ದಿಡ್ಡಿ ಬಾಗಿಲು ಹಾಕಿದ್ದೇವೆ’ ಎಂಬುದೇ ಇಲ್ಲಿನ ಸಂಜ್ಞೆ; ಎರಡನೆ ಯದಾಗಿ 1986ರಲ್ಲಿ ಸಮಗ್ರ ಅರುಣಾಚಲ ಪ್ರದೇಶವನ್ನೇ ತಮ್ಮ ಭೂಪಟದಲ್ಲಿ ಛಾಪಿಸಿ, ಅಲ್ಲಿ ಇಲ್ಲಿ ಕಿರಿಕ್ ಮಾಡಲು ಹವಣಿಸುತ್ತಿರುವ ಡ್ರಾಗನ್ ಚೀನಕ್ಕೆ “ಕೆಂಪು ಸಂಕೇತ’ವೂ ಇಲ್ಲಿ ಗೋಚರಿಸುತ್ತಿದೆ. ಇವೆರಡಕ್ಕಿಂತ ಭಿನ್ನವಾಗಿ 3ನೇ ವಿಚಾರ ಇಲ್ಲಿ ಗುಪ್ತಗಾಮಿನಿಯಾಗಿ ಹರಿದು ಬರುತ್ತಿದೆ.
ಕಾಶ್ಮೀರಿ ಪಂಡಿತರ ನಿರಂತರ ಹತ್ಯೆ ಹಾಗೂ ಸಾಮೂಹಿಕ ವಲಸೆಯಿಂದ ಜರ್ಝರಿತಗೊಂಡ ಜನತೆಗೆ ನೆಮ್ಮದಿಯ ಬದುಕಿನ ಆಸರೆ ಇಲ್ಲಿ ಅಭಿವ್ಯಕ್ತಗೊಂಡಿದೆ. ಕಾಶ್ಮೀರದ ಕಣಿವೆ ಕಲ್ಲು ಬೀಸುವವರ “ಸ್ವರ್ಗ’ ಎನಿಸದಿರಲಿ, ಉಗ್ರಗಾಮಿಗಳ “ಆಡುಂಬೊಲ’ ಎನಿಸದಿರಲಿ ಎಂಬ ಎಚ್ಚರವೂ ಪ್ರತಿಫಲಿಸಿದೆ. ಜನತಂತ್ರೀಯ ಪಥದಲ್ಲಿ ಸರಿದು ಹಸುರು, ತಂಪಿನ ತಾಣವೆನಿಸಲು, ಕೇಸರಿ, ಸೇಬು ಬೆಳೆಸುವ ಗುಡ್ಡ ಕಣಿವೆ ಎಣಿಸಲು, ಜಗದಗಲ ಪ್ರವಾಸಿಗರಿಂದ “ದೋಣಿ ಮನೆ’ ತುಂಬಿ ತುಳುಕುವಂತಾಗಲಿ ಎಂಬ ಆಶಯವೂ ಇಲ್ಲಿ ಟಿಸಿಲೊಡೆದಿದೆ. ಕಾಶ್ಮೀರಿ ವಲಸಿಗರಿಗೆಂದೇ ನಾಮ ನಿರ್ದೇಶಿತ 2 ಸ್ಥಾನ ಮೀಸಲು ಹಾಗೂ ಈ ಪೈಕಿ ಒಂದು ಸ್ಥಾನ ಮಹಿಳೆಗೆ ಇರಿಸಿದುದೂ ಗಮನಾರ್ಹ ಅಂಶ. ಹೀಗೆ ರಾಷ್ಟ್ರೀಯ ಸಮಗ್ರತೆ ಹಾಗೂ ಅಭಿವೃದ್ಧಿಯ ಮುಂಬೆಳಕಾಗಿ, ಉತ್ತಮ ಪಥವಾಗಿ ಉತ್ತರದ ತುತ್ತ ತುದಿಯಲ್ಲಿ ಹೊಸ ಮಜಲು ನಿರ್ಮಾಣಗೊಳ್ಳುತ್ತಿರುವಿಕೆ ಅತ್ಯಂತ ಸ್ವಾಗತಾರ್ಹ.
ಡಾ| ಪಿ.ಅನಂತಕೃಷ್ಣ ಭಟ್, ಮಂಗಳೂರು