India V/s Qatar: ಗಲ್ಲು ರಾಜಕೀಯ
Team Udayavani, Oct 27, 2023, 11:36 PM IST
ಭಾರತದ ಅತ್ಯಂತ ಪರಮಾಪ್ತ ದೇಶವೆಂದೇ ಗುರುತಿಸಿಕೊಂಡಿರುವ ಕತಾರ್ನಲ್ಲಿ ಭಾರತದ ನೌಕಾಪಡೆಯ ಎಂಟು ನಿವೃತ್ತ ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದ್ದು, ವಿದೇಶಾಂಗ ಇಲಾಖೆ ತೀವ್ರ ಆಘಾತ ವ್ಯಕ್ತಪಡಿಸಿದೆ. ಕಳೆದೊಂದು ವರ್ಷದಿಂದಲೂ ಈ ಪ್ರಕರಣದ ಬಗ್ಗೆ ತೀವ್ರ ಚರ್ಚೆಗಳು ನಡೆದಿದ್ದು, ಸರಿಯಾಗಿ ವಾದ ಮಂಡನೆಗೂ ಅವಕಾಶ ಸಿಕ್ಕಿಲ್ಲ ಎಂಬ ವಾದಗಳಿವೆ. ಈಗ ಎಂಟೂ ಅಧಿಕಾರಿಗಳಿಗೂ ಮರಣದಂಡನೆ ವಿಧಿಸಲಾಗಿದ್ದು, ಮುಂದೇನು ಎಂಬುದು ನಿಗೂಢವಾಗಿದೆ.
ಯಾರಿವರು ಅಧಿಕಾರಿಗಳು?
- ಕ್ಯಾಪ್ಟನ್ ನವ್ತೇಜ್ ಸಿಂಗ್ ಗಿಲ್ 2. ಕ್ಯಾಪ್ಟನ್ ಸೌರಭ್ ವಸಿಷ್u 3. ಕಮಾಂಡರ್ ಪೂರ್ಣೇಂದು ತಿವಾರಿ 4. ಕ್ಯಾಪ್ಟನ್ ಬಿರೇಂದರ್ ಕುಮಾರ್ ವರ್ಮ 5. ಕಮಾಂಡರ್ ಸುಗುಣಾಕರ್ ಪಕೇಲ
- ಕಮಾಂಡರ್ ಸಂಜೀವ್ ಗುಪ್ತ 7. ಕಮಾಂಡರ್ ಅಮಿತ್ ನಾಗಾ³ಲ್ 8. ಸೈಲರ್ ರಾಗೇಶ್
ಅಲ್ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸರ್ವೀಸಸ್
ಇದು ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಗಳು ಕೆಲಸ ಮಾಡುತ್ತಿದ್ದ ಸ್ಥಳ. ಈ ಕಂಪೆನಿಯನ್ನು ಒಮಾನ್ನ ರಾಯಲ್ ಒಮಾನ್ ಏರ್ ಫೋರ್ಸ್ನ ನಿವೃತ್ತ ಸ್ವಾéಡ್ರನ್ ಲೀಡರ್ ಖಾಮೀಸ್ ಅಲ್ ಅಜ್ಮಿ ಎಂಬಾತ ಸ್ಥಾಪಿಸಿದ್ದ. ಈತನನ್ನೂ 2022ರ ಆಗಸ್ಟ್ನಲ್ಲಿಯೇ ಬಂಧಿಸಲಾಗಿದ್ದರೂ, ಎರಡು ತಿಂಗಳಾದ ಮೇಲೆ, ಅಂದರೆ ನವೆಂಬರ್ನಲ್ಲಿ ಬಿಡುಗಡೆ ಮಾಡಲಾಯಿತು. ಈ ಕಂಪೆನಿಯಲ್ಲಿ ಕಮಾಂಡರ್ ಪೂರ್ಣೇಂದು ತಿವಾರಿ ಅವರು ಮ್ಯಾನೇಜಿಂಗ್ ಡೈರಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಕಂಪೆನಿಯು ಕತಾರ್ನ ಸಶಸ್ತ್ರ ಸೇನೆಗೆ ತರಬೇತಿ ಸಂಬಂಧಿತ ಸೇವೆಯನ್ನು ಒದಗಿಸುತ್ತಿತ್ತು. ಸದ್ಯ ಈ ಕಂಪೆನಿಯ ಹೆಸರು ಬದಲಾಗಿದ್ದು, ಹಿಂದಿನ ಕಂಪೆನಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದರೆ ಭಾರತದ ಹಿಂದಿನ ರಾಯಭಾರಿ ಮತ್ತು ಈಗಿನ ರಾಯಭಾರಿಯ ಪ್ರಶಂಸಾ ಪತ್ರ ಮಾತ್ರ ಕಂಪೆನಿಯ ವೆಬ್ಸೈಟ್ನಲ್ಲಿದೆ.
ಉತ್ತಮ ಅಧಿಕಾರಿಗಳು
ಈ ಎಲ್ಲ ಅಧಿಕಾರಿಗಳು ಭಾರತೀಯ ನೌಕಾಪಡೆಯಲ್ಲಿ ಅತ್ಯುನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅಂದರೆ ಸುಮಾರು 20 ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರಲ್ಲಿ ಕೆಲವು ಅಧಿಕಾರಿಗಳು ನೌಕಾಪಡೆಯಲ್ಲಿ ಇನ್ಸ್ಟ್ರಕ್ಟರ್ ಕೂಡ ಆಗಿದ್ದರು. ನೌಕಾಪಡೆಯಲ್ಲಿ ಇವರೆಲ್ಲರ ಸೇವಾ ಕಾರ್ಯ ಅತ್ಯುನ್ನತವಾಗಿದೆ.
ವಿಶೇಷವೆಂದರೆ, ಕಮಾಂಡರ್ ತಿವಾರಿ ಅವರಿಗೆ 2019ರಲ್ಲಿ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದು ವಿದೇಶಗಳಲ್ಲಿರುವ ಭಾರತೀಯರಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದ್ದು, ಕತಾರ್ ಮತ್ತು ಭಾರತದ ನಡುವಿನ ಸಂಬಂಧದ ಹಿನ್ನೆಲೆಯಲ್ಲಿ ನೀಡಲಾಗಿತ್ತು. ಅಂದರೆ ಭಾರತದ ಕೀರ್ತಿಯನ್ನು ವಿದೇಶಗಳಲ್ಲಿ ಹೆಚ್ಚಿಸಿದ ಕಾರಣಕ್ಕಾಗಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಅಧಿಕಾರಿಗಳ ವಿರುದ್ಧದ ಆರೋಪವೇನು?
ಕತಾರ್ ಆಗಲಿ, ಕೇಂದ್ರ ಸರಕಾರವಾಗಲಿ ಈ ಎಂಟು ಅಧಿಕಾರಿಗಳ ವಿರುದ್ಧ ಆರೋಪವೇನು ಎಂಬುದರ ಬಗ್ಗೆ ಬಹಿರಂಗಗೊಳಿಸಿಲ್ಲ. ಕೆಲವು ಮೂಲಗಳ ಪ್ರಕಾರ, ಇಸ್ರೇಲ್ ಪರ ಗೂಢಚಾರಿಕೆ ನಡೆಸಿದ್ದರ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಅಂದರೆ ಕತಾರ್, ಇಟಲಿ ಜತೆ ಮಾಡಿಕೊಂಡ ರಹಸ್ಯ ಸಬ್ಮೆರಿನ್ ಒಪ್ಪಂದವನ್ನು ಇವರೆಲ್ಲರೂ ಇಸ್ರೇಲ್ಗೆ ಸೋರಿಕೆ ಮಾಡಿದ್ದರು. ಈ ಸಬ್ಮೆರಿನ್ಗಳು ಅತ್ಯಂತ ಸುಧಾರಿತ ತಂತ್ರಜ್ಞಾನ ಹೊಂದಿದ್ದವು. ಆದರೆ ಈ ಬಗ್ಗೆಯೂ ಅಧಿಕೃತವಾಗಿ ಯಾರೂ ಹೇಳಿಲ್ಲ. ಅಲ್ಲದೆಈ ಅಧಿಕಾರಿಗಳ ಕುಟುಂಬ ಸದಸ್ಯರು ಕೂಡ ಇದುವರೆಗೆ ಯಾವುದೇ ಆರೋಪದ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಇವರನ್ನು ಏಕಾಂತ ಜೈಲಿನಲ್ಲಿ ಇರಿಸಿದಾಗ, ಅಧಿಕಾರಿಗಳ ವಿರುದ್ಧ ರಕ್ಷಣ ಇಲಾಖೆಗೆ ಸಂಬಂಧಿಸಿದ ಆರೋಪಗಳಿರಬಹುದು ಎಂಬ ವಾದಗಳೂ ಇದ್ದವು.
ಕೇಂದ್ರ ಸರಕಾರದ ಅಭಿಪ್ರಾಯವೇನು?
ಸದ್ಯ ಕೇಂದ್ರ ಸರಕಾರ ಗಲ್ಲುಶಿಕ್ಷೆಯನ್ನು ಅತ್ಯಂತ ಆಘಾತಕಾರಿ ಎಂದು ಕರೆದಿದೆ. ಜತೆಗೆ ಕತಾರ್ ಜತೆಗೆ ಸರ್ವರೀತಿಯಲ್ಲೂ ಮಾತುಕತೆ ನಡೆಸುತ್ತಿರುವುದಾಗಿಯೂ ತಿಳಿಸಿದೆ. ಸದ್ಯ ನಾವು ಕೋರ್ಟ್ನ ತೀರ್ಪಿನ ಪ್ರತಿ ನೋಡಿಲ್ಲ. ಅದು ಬಂದಾದ ಮೇಲೆ ನಾವು ಮುಂದಿನ ದಾರಿ ನೋಡುತ್ತೇವೆ. ನಾವು ಅಂತಾರಾಷ್ಟ್ರೀಯ ಮತ್ತು ಕತಾರ್ ನೆಲದ ಕಾನೂನುಗಳ ಬಗ್ಗೆಯೂ ನೋಡುತ್ತೇವೆ. ಇದಾದ ಮೇಲೆ ರಾಜತಾಂತ್ರಿಕ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಕತಾರ್ ಮತ್ತು ಭಾರತದ ಸಂಬಂಧ
ಕಳೆದ ಎರಡು ಮೂರು ದಶಕಗಳಿಂದಲೂ ಕತಾರ್ ಮತ್ತು ಭಾರತದ ನಡುವೆ ಅತ್ಯುತ್ತಮ ಸಂಬಂಧವಿದೆ. 2008ರ ನವೆಂಬರ್ನಲ್ಲಿ ಆಗಿನ ಪ್ರಧಾನಿ ಡಾ| ಮನಮೋಹನ್ ಸಿಂಗ್ ಅವರು ಕತಾರ್ಗೆ ಭೇಟಿ ನೀಡಿದ್ದರು. 2015ರಲ್ಲಿ ಎಮಿರ್ ಆಫ್ ಕತಾರ್ ಶೇಕ್ ತಮಿಮ್ ಬಿನ್ ಹಮದ್ ಅಲ್ ಥಾನಿ ಭಾರತಕ್ಕೆ ಭೇಟಿ ನೀಡಿದ್ದರು. 2016ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕತಾರ್ಗೆ ಭೇಟಿ ನೀಡಿದ್ದರು. ವಿದೇಶಾಂಗ ಸಚಿವ ಜೈಶಂಕರ್ ಅವರು ಕನಿಷ್ಠ ಮೂರು ಬಾರಿ ಈ ದೇಶಕ್ಕೆ ಹೋಗಿದ್ದಾರೆ. 2018ರಲ್ಲಿ ಸುಷ್ಮಾ ಸ್ವರಾಜ್ ಕೂಡ ಕತಾರ್ಗೆ ಹೋಗಿ ಬಂದಿದ್ದರು. ಪ್ರಧಾನಿಯಾಗಿ ಮನಮೋಹನ್ ಸಿಂಗ್ ಅವರದ್ದು ಮೊದಲ ಪ್ರವಾಸವಾದರೆ, ವಿದೇಶಾಂಗ ಸಚಿವೆಯಾಗಿ ಸುಷ್ಮಾ ಅವರು ಮೊದಲ ಬಾರಿಗೆ ಈ ದೇಶಕ್ಕೆ ಭೇಟಿ ನೀಡಿದ್ದರು.
2008ರಿಂದ ಈಚೆಗೆ ಎರಡೂ ದೇಶಗಳ
ನಡುವಿನ ಸಂಬಂಧ ಉತ್ತಮವಾಗಿದೆ. 2021ರ ವೇಳೆಗೆ ಕತಾರ್ನ ಮೊದಲ ನಾಲ್ಕು ರಫ್ತು ಮಾಡುವ ದೇಶಗಳಲ್ಲಿ ಭಾರತವೂ ಒಂದಾಗಿತ್ತು. ಎರಡು ದೇಶಗಳ ದ್ವಿಪಕ್ಷೀಯ ಸಂಬಂಧ 15 ಬಿಲಿಯನ್ ಅಮೆರಿಕನ್ ಡಾಲರ್ನಷ್ಟಿದೆ. 13 ಬಿಲಿಯನ್ ಅಮೆರಿಕನ್ ಡಾಲರ್ನಷ್ಟು ಎಲ್ಎನ್ಜಿ ಮತ್ತು ಎಲ್ಪಿಜಿ ಕತಾರ್ನಿಂದ ಭಾರತಕ್ಕೆ ರಫ್ತಾಗುತ್ತಿದೆ.
ಇದಷ್ಟೇ ಅಲ್ಲ, ಉಭಯ ದೇಶಗಳ ನಡುವೆ ರಕ್ಷಣ ವಲಯದ ವ್ಯವಹಾರವೂ ಹೆಚ್ಚಿದೆ. 2008ರ ಅನಂತರ ರಕ್ಷಣ ವಲಯದಲ್ಲಿನ ಸಂಬಂಧ ಹೆಚ್ಚು ಸುಧಾರಣೆಯಾಗಿದೆ. ಹೀಗಾಗಿಯೇ ನೌಕಾ ಪಡೆ ಅಧಿಕಾರಿಗಳು ಕತಾರ್ನಲ್ಲಿ ತಮ್ಮ ಸಂಸ್ಥೆ ಮೂಲಕ ರಕ್ಷಣೆಗೆ ಸಂಬಂಧಿಸಿದ ಸೇವೆ ಒದಗಿಸುತ್ತಿದ್ದರು.
ಭಾರತದ ಮುಂದಿರುವ ಆಯ್ಕೆಗಳು
ಭಾರತದ ಮುಂದೆ ಹಲವಾರು ಆಯ್ಕೆಗಳಿವೆ. ಇದರಲ್ಲಿ ಕಾನೂನಾತ್ಮಕವಾಗಿ ಹೋರಾಟವೂ ಒಂದು. ಇದರ ಜತೆಗೆ ಪ್ರಧಾನಿಗಳೇ ನೇರವಾಗಿ ಮಾತುಕತೆ ನಡೆಸಿ ಕ್ಷಮೆ ನೀಡುವಂತೆ ಕೋರಬಹುದು.
- ಕಾನೂನಾತ್ಮಕವಾಗಿ ಹೋರಾಟ ನಡೆಸುವುದು
- ರಾಜತಾಂತ್ರಿಕವಾಗಿ ಇತ್ಯರ್ಥಪಡಿಸುವುದು
- ರಾಜಕೀಯ ಮಧ್ಯಸ್ಥಿಕೆ – ಪ್ರಧಾನಿ ಮಟ್ಟದಲ್ಲಿ ಮಾತುಕತೆ ನಡೆಸುವುದು
- ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಂದೋಲನ ನಡೆಸಿ ಒತ್ತಡ ಹೇರುವುದು
ಕತಾರ್ ಮತ್ತು ಗಲ್ಲುಶಿಕ್ಷೆ
ಗಲ್ಲು ಶಿಕ್ಷೆ ವಿಚಾರದಲ್ಲಿ ಕತಾರ್ ದೇಶ ಅಷ್ಟೇನೂ ಕಠಿನವಾಗಿಲ್ಲ. ಸದ್ಯ ಈ ದೇಶದಲ್ಲಿ 15 ಮಂದಿ ಮಾತ್ರ ಗಲ್ಲು ಶಿಕ್ಷೆ ಎದುರಿಸುತ್ತಿದ್ದಾರೆ. 2003ರ ಮಾರ್ಚ್ನಲ್ಲಿ ಒಂದು ಮತ್ತು 2020ರಲ್ಲಿ ಒಬ್ಬರಿಗೆ ಮಾತ್ರ ಗಲ್ಲುಶಿಕ್ಷೆಯನ್ನು ಜಾರಿ ಮಾಡಲಾಗಿತ್ತು. 2021 ಮತ್ತು 2022ರಲ್ಲಿ ಯಾರಿಗೂ ಗಲ್ಲು ಶಿಕ್ಷೆ ಜಾರಿಯಾಗಿಲ್ಲ. ಸಾಮಾನ್ಯವಾಗಿ ಕತಾರ್ ದೇಶದ ರಾಜರು, ರಮ್ಜಾನ್ ಅವಧಿಯಲ್ಲಿ ಗಲ್ಲುಶಿಕ್ಷೆಯನ್ನು ಮಾಫಿ ಮಾಡುವ ಅವಕಾಶಗಳಿರುತ್ತವೆ.
2022ರ ಆಗಸ್ಟ್ 30
ಕತಾರ್ನ ಗುಪ್ತಚರ ಇಲಾಖೆಯಿಂದ ಭಾರತದ ನೌಕಾಪಡೆಯ ಎಂಟು ನಿವೃತ್ತ ಅಧಿಕಾರಿಗಳ ಬಂಧನ. ಬಂಧಿಸಿದಾಗ ಇವರ ವಿರುದ್ಧ ಯಾವುದೇ ಆರೋಪ ಹೊರಸಲಾಗಿರಲಿಲ್ಲ. ಬಳಿಕ ಗೂಢಚಾರಿಕೆ ಆರೋಪ ಹೊರಿಸಲಾಯಿತು.
2022ರ ಸೆಪ್ಟಂಬರ್
ಅಧಿಕಾರಿಗಳ ಬಂಧನವಾದ ಒಂದು ತಿಂಗಳ ಬಳಿಕ ಜಾಮೀನು ಅರ್ಜಿ ಸಲ್ಲಿಕೆ ಮಾಡಲಾಯಿತು. ಆದರೆ ಸ್ಥಳೀಯ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಈ ಅಧಿಕಾರಿಗಳನ್ನು ಏಕಾಂತವಾಗಿ ಜೈಲಿನಲ್ಲಿ ಇರಿಸಲಾಗಿತ್ತು. ಇದೇ ತಿಂಗಳ ಅಂತ್ಯದಲ್ಲಿ ಈ ಅಧಿಕಾರಿಗಳ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡಲಾಗಿತ್ತು.
2022ರ ನವೆಂಬರ್
ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಎಂಟೂ ಅಧಿಕಾರಿಗಳನ್ನು ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಭೇಟಿ ಮಾಡಿದರು. ಈ ಅಧಿಕಾರಿಗಳಿಗೆ ಎಲ್ಲ ರೀತಿಯ ನೆರವನ್ನು ನೀಡುವುದಾಗಿ ರಾಯಭಾರ ಕಚೇರಿ ಹೇಳಿತ್ತು.
2023ರ ಜನವರಿ
ಕತಾರ್ನಲ್ಲಿರುವ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಈ ಎಲ್ಲ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ವಕೀಲರ ಮೂರನೇ ಬಾರಿಯ ಭೇಟಿ ವೇಳೆ ಈ ಮುಖಾಮುಖೀಯಾಗಿತ್ತು.
2023ರ ಮಾರ್ಚ್
ಮಾರ್ಚ್ 29ರಂದು ಮೊದಲ ಬಾರಿಗೆ ವಿಚಾರಣೆ ಆರಂಭವಾಯಿತು. ಡಿಫೆನ್ಸ್ ವಕೀಲರೂ ಈ ವೇಳೆ ಹಾಜರಿದ್ದರು.
2023ರ ಜೂನ್
ಎರಡನೇ ಬಾರಿ ವಿಚಾರಣೆ ನಡೆದ ತಿಂಗಳು.
2023ರ ಅ.1: ಜೈಲಿನಲ್ಲಿಯೇ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಅವರಿಂದ ಭೇಟಿ.
2023ರ ಅ.26
ಎಲ್ಲ ಎಂಟು ಅಧಿಕಾರಿಗಳಿಗೂ ಮರಣದಂಡನೆ ಶಿಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ