ಇನ್ನೂ ಕೈಗೂಡದ ಶಾಲಾ ಶಿಕ್ಷಕರ ನೇಮಕಾತಿ- ಪ್ರಾಥಮಿಕ ಶಾಲೆಗಳಲ್ಲಿ 40 ಸಾವಿರ ಶಿಕ್ಷಕರ ಕೊರತೆ!
Team Udayavani, Dec 11, 2023, 12:41 AM IST
ಮಂಗಳೂರು: ಸರಕಾರಿ ಶಾಲೆಗಳನ್ನು ಬಲಪಡಿಸುವುದು ತನ್ನ ಆದ್ಯತೆ ಎಂದು ಸರಕಾರ ಆಗಾಗ ಹೇಳಿಕೊಳ್ಳುತ್ತದೆಯಾದರೂ ಖಾಯಂ ಶಿಕ್ಷಕರ ಕೊರತೆಯನ್ನು ನೀಗಿಸಲು ಮುಂದಾಗುತ್ತಿಲ್ಲ. ಪರಿಣಾಮವಾಗಿ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಮಂಜೂರಾಗಿರುವ 1,88,531 ಶಿಕ್ಷಕ ಹುದ್ದೆಗಳ ಪೈಕಿ 1,48,501 ಭರ್ತಿಯಾಗಿದ್ದರೆ 40,030 ಖಾಯಂ ಹುದ್ದೆಗಳು ಖಾಲಿಯಿವೆ.
2015ಕ್ಕಿಂತ ಹಿಂದೆ ಖಾಲಿ ಇದ್ದ ಅನುದಾನಿತ ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳು ಭರ್ತಿಯಾಗುತ್ತಿವೆ. ಆದರೆ ಬಹಳಷ್ಟು ವರ್ಷಗಳಿಂದ ಖಾಲಿ ಇರುವ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆ ಭರ್ತಿಯಾಗುತ್ತಿಲ್ಲ.
“ಶಿಕ್ಷಣ ಕ್ಷೇತ್ರದ ಸುಧಾರಣೆಗೆ ವಿಶೇಷ ಒತ್ತು ನೀಡಲಾಗುವುದು’ ಎಂದು ಸರಕಾರ ಪದೇ ಪದೆ ಹೇಳುತ್ತಿದ್ದರೂ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ನೇಮಕಾತಿಯನ್ನು ಮಾತ್ರ ಸುಸೂತ್ರವಾಗಿ ನಡೆಸದಿರುವುದು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ. ರಾಜ್ಯದ 5 ಜಿಲ್ಲೆಗಳಲ್ಲಿ ಗರಿಷ್ಠ ತಲಾ 2 ಸಾವಿರಕ್ಕೂ ಅಧಿಕ ಶಿಕ್ಷಕ ಹುದ್ದೆಗಳು ಖಾಲಿ ಇವೆ. ಬೆಳಗಾವಿಯ ಚಿಕ್ಕೋಡಿಯಲ್ಲಿ 2,639, ಕಲಬುರ್ಗಿ 2,244, ಕೊಪ್ಪಳ 2,208, ರಾಯಚೂರು 3,763, ಯಾದಗಿರಿಯಲ್ಲಿ 2,645 ಶಿಕ್ಷಕರ ಕೊರತೆ ಇದೆ. 9 ಜಿಲ್ಲೆಗಳಲ್ಲಿ ತಲಾ 1 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆ ಖಾಲಿ ಇವೆ.
ಬಾಗಲಕೋಟೆಯಲ್ಲಿ 1,471, ಬೆಳಗಾವಿ 1,729, ಬೆಂಗಳೂರು ದಕ್ಷಿಣ 1,114, ದಕ್ಷಿಣ ಕನ್ನಡ 1,160, ಹಾವೇರಿ 1,190, ಮೈಸೂರು 1,147, ವಿಜಯಪುರ 1,691, ಬಳ್ಳಾರಿ 1,603, ವಿಜಯನಗರದಲ್ಲಿ 1,126 ಹುದ್ದೆಗಳು ಖಾಲಿ ಇವೆ. ಕೊರತೆಯನ್ನು ಸರಿದೂಗಿಸಲು ಶಿಕ್ಷಣ ಇಲಾಖೆಯು ಅತಿಥಿ ಶಿಕ್ಷಕರನ್ನು ನೇಮಿಸಿ ತಾತ್ಕಾಲಿಕ ಕ್ರಮ ಕೈಗೊಂಡಿದೆಯಾದರೂ ಖಾಯಂ ಹುದ್ದೆ ಭರ್ತಿ ಕಾಲ ಕಾಲಕ್ಕೆ ನಡೆಯದಿರುವುದು ವಿಪರ್ಯಾಸ.
ಪ್ರಾಥಮಿಕ ಶಾಲೆಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,160 ಹಾಗೂ ಉಡುಪಿಯಲ್ಲಿ 379, ಪ್ರೌಢಶಾಲೆಗಳ ಪೈಕಿ ದ.ಕ. ಜಿಲ್ಲೆಯಲ್ಲಿ 318, ಉಡುಪಿಯಲ್ಲಿ 192 ಹುದ್ದೆಗಳು ಖಾಲಿ ಇವೆ.
ಪ್ರೌಢಶಾಲೆಯಲ್ಲಿ 10 ಸಾವಿರ ಹುದ್ದೆ ಖಾಲಿ!
ಸರಕಾರಿ ಪ್ರೌಢಶಾಲೆಗಳಲ್ಲಿಯೂ ಶಿಕ್ಷಕರ ಹುದ್ದೆ ಖಾಲಿಯಿವೆ. ಒಟ್ಟು 44,341 ಹುದ್ದೆ ಗಳು ಮಂಜೂರಾಗಿದ್ದರೆ 34,186 ಹುದ್ದೆ ಮಾತ್ರ ಭರ್ತಿಯಾಗಿವೆ. 10,155 ಹುದ್ದೆ ಖಾಲಿ ಇವೆ. ಇದರಲ್ಲಿ ಬೆಂಗಳೂರು ವಿಭಾಗ -2,197, ಧಾರವಾಡ -2,213, ಕಲ್ಯಾಣ ಕರ್ನಾಟಕ-3,495 ಮತ್ತು ಮೈಸೂರು ವಿಭಾಗದಲ್ಲಿ 2,250 ಹುದ್ದೆ ಸೇರಿವೆ.
ಖಾಲಿ ಇರುವ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಈಗಾಗಲೇ ಸರಕಾರದ ಗಮನ ಸೆಳೆಯಲಾಗಿದೆ. ಸರಕಾರ ಇಲಾಖೆಗೆ ಅನುಮತಿ ನೀಡಿದರೆ ಹುದ್ದೆ ಭರ್ತಿ ನಡೆಯಲಿದೆ. -ದಯಾನಂದ ನಾಯಕ್, ಗಣಪತಿ, ಡಿಡಿಪಿಐ, ದ.ಕ., ಉಡುಪಿ
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು