ಆಗ ಬ್ರಿಟಿಷರು, ಈಗ ನಾವೇ ಎಲ್ಲ ಸಮಸ್ಯೆಗಳಿಗೂ ಕಾರಣರು!
Team Udayavani, Apr 28, 2021, 7:00 AM IST
ಈಗ ಕೊರೊನಾ ಸೋಂಕಿನ ಕಾಲಘಟ್ಟದಲ್ಲಿದ್ದೇವೆ. 1918ರಲ್ಲಿ ಸ್ಪಾನಿಶ್ ಫ್ಲೂ ಸೋಂಕಿನ ಮಾದರಿಯಲ್ಲಿ ನೂರು ವರ್ಷಗಳ ಬಳಿಕ ನೇಚರ್ ಕೊರೊನಾ ವೈರಸ್ನ್ನು ರವಾನೆ ಮಾಡಿದೆ. ಈ ವೇಳೆ ಗಾಂಧೀಜಿಯವರಿಗೆ ಸ್ಪಾನಿಶ್ ಫ್ಲೂ ಬಾರದಿದ್ದರೂ ಬೇರೆ ಅನಾರೋಗ್ಯ ಕಾಡಿತ್ತು. ಆದರೆ ಆ ಸಂದರ್ಭ ಆಶ್ರಮದ ಸ್ವಯಂಸೇವಕರಿಂದ ಜನರಲ್ಲಿ ಅರಿವು ಮೂಡಿಸಿದ್ದರು. ಸ್ಪಾನಿಶ್ ಫ್ಲೂ ಬರುವ ಮುನ್ನವೇ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಉಗುಳಬಾರದು, ಸಿಂಬಳ ಸುರಿಸಬಾರದು, ಮಲಮೂತ್ರ ವಿಸರ್ಜಿಸಬಾರದು. ಹೀಗೆ ಮಾಡಿದರೆ ರೋಗಾಣುಗಳು ಬೇರೆಯವರಿಗೆ ಹರಡುತ್ತದೆ ಮತ್ತು ಇದು ದೇವರ ಮತ್ತು ಮಾನವತೆ ವಿರುದ್ಧ ಎಸಗುವ ಪಾಪಗಳಾಗಿವೆ ಎಂದು ಎಚ್ಚರಿಸಿದ್ದರು. ಯಾವುದೇ ಅಧಿಕಾರವಿಲ್ಲದೆ ಇದನ್ನು ಹೇಳಿದ್ದು ಎಂಬುದು ಉಲ್ಲೇಖನೀಯ. ಇಲ್ಲಿ ಅಪ್ಪಟ ವೈಜ್ಞಾನಿಕ/ವೈಚಾರಿಕ (ತಾರ್ಕಿಕ) ಮತ್ತು ಧರ್ಮದ ಎರಡೂ ವ್ಯಾಖ್ಯಾನಗಳಿವೆ. ಒಂದು ಶತಕದ ಬಳಿಕ ಈಗ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ಕಾನೂನು ಕ್ರಮ ತೆಗೆದುಕೊಳ್ಳುವವರೆಗೆ ಮುಟ್ಟಿದ್ದೇವೆ.
ಸ್ವಾತಂತ್ರ್ಯಪೂರ್ವದಲ್ಲಿ ಚಳವಳಿಯ ಭಾಗವಾಗಿ ಮಂಗಳೂರಿನಲ್ಲಿ ನಿತ್ಯ “ಉಗ್ರ’ ಭಾಷಣವಿರುತ್ತಿತ್ತು. ಹೋರಾಟಗಾರರ ಆರ್ಭಟದ ಉಪನ್ಯಾಸ ಕೇಳಿ ರಾಷ್ಟ್ರಭಕ್ತಿ ಉಕ್ಕಿಹರಿ ಯುತ್ತಿತ್ತಲ್ಲದೆ ಅವರ ಮಾತುಗಳು ಕೇಳುಗರ ಪ್ರತಿಯೊಂದು ರಕ್ತನಾಳಗಳಲ್ಲಿಯೂ ತುಂಬಿ ಹರಿಯುತ್ತಿತ್ತು. ಮಹಾವೀರ ಎಂಬ ವಾಗ್ಮಿಗಳು “ಹಿಂದೂಸ್ಥಾನದ 33 ಕೋಟಿ ಜನರು ಸಿಂಬಳ ತೆಗೆದು ಸಿಡಿಸಿದರೆ ಅದರ ಪ್ರವಾಹದಲ್ಲಿ ಬ್ರಿಟಿಷರು ತೇಲಿ ಹೋದಾರು’ ಎಂದಾಗ ಪ್ರಚಂಡ ಕರತಾಡನ ಕೇಳುತ್ತಿತ್ತು. ಆಗ ಭಾಷಣಕಾರರಿಗೆ ಬ್ರಿಟಿಷರ ಅವಹೇಳನವೇ ತರ್ಕವಾಗಿತ್ತು. ಹೊಟ್ಟೆನೋವಿನಿಂದ ಹಿಡಿದು ಎಲ್ಲ ಸಾಮಾಜಿಕ ಕಾಯಿಲೆಗಳಿಗೂ ಹಿಂದೂಸ್ಥಾನಕ್ಕೆ ಸ್ವಾತಂತ್ರ್ಯ ಇಲ್ಲದಿರುವುದೇ ಕಾರಣ ಎಂಬುದು ವಿಷಯ ಬಂಡವಾಳವಾಗಿತ್ತು.
ಸ್ವಾತಂತ್ರ್ಯ ಚಳವಳಿ ನಾಯಕರ ಪೈಕಿ ರಾಷ್ಟ್ರ ನಿರ್ಮಾಣದ ಅಗತ್ಯವನ್ನು ಅತ್ಯಂತ ಸ್ಪಷ್ಟವಾಗಿ ಅರ್ಥ ಮಾಡಿಕೊಂಡವರು ಜವಾಹರಲಾಲ್ ನೆಹರೂ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲರು. 1947ರಲ್ಲಿ ದೇಶದ ಆಡಳಿತದ ಹೊಣೆ ವಹಿಸಿ
ಕೊಂಡ ನೆಹರೂ ಮತ್ತು ಪಟೇಲರಿಗೆ ಭಾರತದಲ್ಲಿ ಸ್ವರಾಜ್ಯ ಅಧಿಕಾರವನ್ನು ಬಲವಾಗಿ ಸ್ಥಾಪಿಸಿ ಅದನ್ನು ಶಕ್ತಿಶಾಲಿ ಆರೋಗ್ಯಕರ ಪ್ರಜಾಪ್ರಭುತ್ವದ ದೇಶವನ್ನಾಗಿ ರೂಪಿಸಬೇಕೆಂಬ ದೃಢನಿಶ್ಚಯವಿತ್ತು. ಗಾಂಧೀಜಿಯವರಿಗೆ ಪ್ರತಿಯೊಬ್ಬರ ಅಂತರಾತ್ಮವನ್ನು ರೂಪಿಸಿ ಈ ಮೂಲಕ ರಾಷ್ಟ್ರದ ಅಧಿಕಾರಶಕ್ತಿಯನ್ನು ನಿಯಂತ್ರಿಸಬೇಕು ಎಂಬ ಹಂಬಲವಿತ್ತು ಎಂದು ಮೂವರು ಪ್ರಧಾನಿಗಳಿಗೆ ಮಾಧ್ಯಮ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದ ಎಚ್.ವೈ.ಶಾರದಾಪ್ರಸಾದ್ ಒಂದೆಡೆ ಹೇಳುತ್ತಾರೆ.
ಇಲ್ಲಿ ಎರಡೂ ಕಡೆಯವರ ಅಂತಿಮ ಗುರಿ ಒಂದೇ ಆಗಿದ್ದರೂ ಮಾರ್ಗ ಮಾತ್ರ ಬೇರೆ. ಆದರೆ ತುಳಿದ ಮಾರ್ಗವೂ ಫಲದಾಯಕವಾಗಲಿಲ್ಲ ಎನ್ನುವುದು ಅನುಭವವೇದ್ಯ.
ಶತಮಾನದ ಬಳಿಕ
ಈಗ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಸಲ್ಲುತ್ತಿವೆ. ದೇಶದಲ್ಲಿ ಬಹುಕಾಲ ಕಾಂಗ್ರೆಸ್, ಕೆಲವು ಕಾಲ ಬಿಜೆಪಿಯೂ, ಅಲ್ಪಕಾಲ ಇತರ ಪಕ್ಷಗಳೂ ದೇಶವನ್ನು ಅಳೆದವು ಅಥವಾ ಆಳಿದವು ಎಂದಿಟ್ಟುಕೊಳ್ಳಿ. ಈಗ ಕೊರೊನಾ ಸೋಂಕಿನ ಕಾಲಘಟ್ಟದಲ್ಲಿದ್ದೇವೆ. 1918ರಲ್ಲಿ ಸ್ಪಾನಿಶ್ ಫ್ಲೂ ಸೋಂಕಿನ ಮಾದರಿಯಲ್ಲಿ ನೂರು ವರ್ಷಗಳ ಬಳಿಕ ನೇಚರ್ ಕೊರೊನಾ ವೈರಸ್ನ್ನು ರವಾನೆ ಮಾಡಿದೆ.
ವೈರಸ್ಗಳು ಹೇಗೆ ಹರಡುತ್ತವೆ? ಹೇಗೆ ವಿಕಾಸಗೊಳ್ಳುತ್ತವೆ? ಹೇಗೆ ಮರಣವನ್ನು ತಂದೊಡ್ಡುತ್ತವೆ ಎಂಬುದನ್ನು ವೈಜ್ಞಾನಿಕ, ಸತಾರ್ಕಿಕವಾಗಿ ಮಂಡಿಸಬಲ್ಲ ಮೇಧಾವಿಗಳೂ ಇದ್ದಾರೆ. ಉಳಿದ ವಿಷಯಗಳಿಗಿಂತ ಅತೀ ಸುಲಭದಲ್ಲಿ ಅರ್ಥವಾಗುವುದೆಂದರೆ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುತ್ತದೆ, ಅನಗತ್ಯವಾಗಿ ಓಡಾಡದೆ ಇರುವುದು, ಇತರರನ್ನು ಸಂಪರ್ಕಿಸದೆ ಇರುವುದು ಇತ್ಯಾದಿಗಳು. ಇದಕ್ಕೇನು ಪಿಎಚ್.ಡಿ. ಪ್ರಬಂಧ ಮಂಡಿಸುವ, ಐಎಎಸ್, ಐಪಿಎಸ್ ಪರೀಕ್ಷೆಗಳನ್ನು ಪಾಸು ಮಾಡುವ ಬುದ್ಧಿಮತ್ತೆ ಬೇಕಿಲ್ಲ. ಆದರೆ ಇದನ್ನೇ ಡಾಕ್ಟರ್, ಐಎಎಸ್,ಐಪಿ ಎಸ್ ಮಹಾಶಯರು ಹೇಳಬೇಕಾಗಿದೆ. ಹಿಂದೆ
ಸಾಂಪ್ರದಾಯಿಕರು ವೈಯಕ್ತಿಕ ಅಂತರ ಕಾಪಾಡಿ ಎಂದು ಶೌಚದ ಹೆಸರಿನಲ್ಲಿ ಹೇಳುವಾಗ ಇದಕ್ಕೆ ಒಂದು ವರ್ಗ ಟೀಕೆಗಳ ಸುರಿಮಳೆಯನ್ನೇ ಸುರಿಸುವುದು ಹೊಸ ವಿಷಯವಲ್ಲ. ಈಗ ಅಕಾಡೆಮಿಕ್ ಆಗಿ ಕಲಿತ ಆಧುನಿಕವಾದಿಗಳು ಅದನ್ನೇ ಉರು ಹೊಡೆಯುತ್ತಿದ್ದರೂ ಕೇಳುಗರು ಬೇರೆಯವರ ಸಂಪರ್ಕಕ್ಕೆ ಒಳಗಾಗಿ ಸೋಂಕಿತರಾಗುತ್ತಿದ್ದಾರೆನ್ನುವಾಗ ಅತ್ತ ಗಾಂಧೀಜಿಯವರ ಪ್ರತಿಯೊಬ್ಬರ ಆತ್ಮವಿಕಾಸದ ಕನಸೂ ಜಾರಿಗೊಂಡಿಲ್ಲ, ಮತ್ತೂಂದೆಡೆ ಅಭಿವೃದ್ಧಿಯುತ ರಾಷ್ಟ್ರದ ಚುಕ್ಕಾಣಿ ಮೂಲಕ ಎಲ್ಲವನ್ನು ಸಾಧಿಸಬಹುದೆಂಬ ನೆಹರೂ, ಪಟೇಲರ ಕನಸೂ ನನಸಾಗಿಲ್ಲ ಎಂದೆನಿಸುತ್ತದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಎಲ್ಲ ಸಮಸ್ಯೆಗಳಿಗೂ ಬ್ರಿಟಿಷರು ಏಕೈಕ ಕಾರಣರಾಗಿದ್ದರು ಎಂಬುದನ್ನು ಸ್ವಾತಂತ್ರ್ಯ ಹೋರಾಟಗಾರರು ಕಂಡು ಹಿಡಿದಿದ್ದರು. ಒಮ್ಮೆ ಗಾಂಧೀಜಿಯವರು ಒಂದೇ ವರ್ಷದಲ್ಲಿ ಸ್ವಾತಂತ್ರ್ಯ ತಂದು ಕೊಡುತ್ತೇವೆ ಎಂದು ಹೇಳಿದ್ದನ್ನು ತಾಜಾ ನಂಬಿದ, ಸ್ವಾತಂತ್ರ್ಯ ಹೋರಾಟಕ್ಕಾಗಿ ತನ್ನ ಸರ್ವಸ್ವವನ್ನೂ ಕಳೆದುಕೊಂಡ ಕಾರ್ನಾಡು ಸದಾಶಿವ ರಾಯರು, ಒಂದು ವರ್ಷದ ಬಳಿಕ ಸ್ವಾತಂತ್ರ್ಯ ಸಿಗದೆ ಹೋದುದಕ್ಕೆ ಬಹಳ ನೊಂದುಕೊಂಡರಂತೆ. ಅಷ್ಟರ ಮಟ್ಟಿಗೆ ಗಾಂಧೀಜಿ ಮಾತನ್ನು ನಂಬುವವರಾಗಿದ್ದರು ಅವರು. ಸ್ವತಂತ್ರ ಭಾರತದಲ್ಲಿ ಅವರ ಸ್ಥಿತಿ ಹೇಗೆ ಬಂತೆಂದರೆ ಸಕಲವನ್ನೂ ದಾನ ಮಾಡಿದ ಅವರು ಬೇರೆಯವರ ದಾನದಿಂದ ಬದುಕು ಸವೆಸಬೇಕಾಯಿತು. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಕ್ಕುವ ಎಲ್ಲ ಅರ್ಹತೆ ಇದ್ದರೂ ಅದನ್ನು ಪಡೆಯುವಲ್ಲಿ ವಿಫಲರಾದರೂ ಒಂದಿನಿತೂ ಬೇಸರ ವ್ಯಕ್ತಪಡಿಸದೆ ಇಹಲೋಕ ತ್ಯಜಿಸಿದರು.
ಸ್ವಾತಂತ್ರ್ಯ ಬಳಿಕ 50-60-70 ವರ್ಷಗಳಾದರೂ ಹಾಲಿ ಎಲ್ಲ ಸಮಸ್ಯೆಗಳಿಗೂ ಆಡಳಿತ ಪಕ್ಷದವರು ವಿರೋಧ ಪಕ್ಷದವರನ್ನೂ ಅದೇ ವಿಪಕ್ಷದವರು ಆಡಳಿತ ಪಕ್ಷದವರಾದಾಗ ಮಾಜಿ ಆಡಳಿತ ಪಕ್ಷದವರನ್ನೂ ಬೆಟ್ಟು ಮಾಡಿದ / ಬೆಟ್ಟು ಮಾಡುತ್ತಿರುವ ಇತಿಹಾಸ ನಮ್ಮೆದುರಿಗೆ ಇದೆ. ಆಗ ಬ್ರಿಟಿಷರು, ಬಳಿಕ ಭಾರತೀಯರೇ ಭಾರತೀಯರಿಗೆ ಸಮಸ್ಯೆಗಳ ಮೂಲ ಕಾರಣ ಕರ್ತರಾಗಿ ಕಾಣಿಸುತ್ತಾರೆ. ಆಗಲಾದರೂ ಬ್ರಿಟಿಷ ರಾದರೂ ಬೈಯಲು ಸಿಗುತ್ತಿದ್ದರು, ಈಗ ನಮ್ಮನ್ನೇ ನಾವು ಬೈಸಿಕೊಳ್ಳಬೇಕಾಗಿದೆಯಲ್ಲ? ಇದೆಂಥ ವಿಪರ್ಯಾಸ?
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ