ಅರಿವು ಹೆಚ್ಚಿದರೆ ಶೀಘ್ರ ಚಿಕಿತ್ಸೆ, ಉತ್ತಮ ಫ‌ಲಿತಾಂಶ

ಇಂದು ವಿಶ್ವ ಸ್ಕಿಝೊಫ್ರೀನಿಯಾ ದಿನಾಚರಣೆ

Team Udayavani, May 24, 2020, 5:45 AM IST

ಅರಿವು ಹೆಚ್ಚಿದರೆ ಶೀಘ್ರ ಚಿಕಿತ್ಸೆ, ಉತ್ತಮ ಫ‌ಲಿತಾಂಶ

ವಿಶ್ವಾದ್ಯಂತ ಪ್ರತೀ ವರ್ಷ ಮೇ 24ನ್ನು ಸ್ಕಿಝೊಫ್ರೀನಿಯಾ ದಿನವನ್ನಾಗಿ ಆಚರಿಸಲಾಗುತ್ತದೆ. ಶತಮಾನಗಳಿಂದಲೂ ಈ ಕಾಯಿಲೆಯು ಕಂಡುಬರುತ್ತಿದ್ದರೂ ಜನಸಮುದಾಯದಲ್ಲಿ ಇದರ ಬಗೆಗೆ ಅರಿವು ಕಡಿಮೆ ಇದೆ. ಜಾಗತಿಕವಾಗಿ ಶೇ.0.8ರಿಂದ ಶೇ.1ರಷ್ಟು ಮಂದಿಯಲ್ಲಿ ಸ್ಕಿಝೊಫ್ರೀನಿಯಾ ಕಂಡುಬರುತ್ತದೆ. ವಿಶ್ವ ಸ್ಕಿಝೊಫ್ರೀನಿಯಾ ದಿನಾಚರಣೆಯ ಹಿನ್ನೆಲೆಯಲ್ಲಿ ಇದರ ಬಗೆಗೆ ಕೆಲವು ಮಾಹಿತಿಗಳು ಇಲ್ಲಿವೆ.

ವಿಮಲಾ (ನೈಜ ಹೆಸರಲ್ಲ) 24 ವರ್ಷ ವಯಸ್ಸಿನ ಯುವತಿ, ತನ್ನ ತಾಯ್ತಂದೆಗೆ ಮೂರನೇ ಮಗಳು. ಬಾಲ್ಯದಿಂದಲೂ ಏಕಾಂಗಿಯಾಗಿರುವುದು ಆಕೆಯ ಸ್ವಭಾವ, ಕಲಿಕೆಯಲ್ಲೂ ಸಾಧಾರಣ ಹುಡುಗಿ. ಆಕೆಗೆ ಸುಮಾರು 17 ವರ್ಷ ವಯಸ್ಸಾಗುವಾಗ ಆಕೆ ಇನ್ನಷ್ಟು ಪ್ರತ್ಯೇಕವಾಗಿರುವುದು ಮತ್ತು ತುಂಬಾ ಮೌನಿಯಾಗುತ್ತಿರುವುದನ್ನು ಆಕೆಯ ಹೆತ್ತವರು ಗಮನಿಸಿದರು. ಆಕೆಯ ಶೈಕ್ಷಣಿಕ ಸಾಧನೆ, ಅಂಕಗಳೂ ಕಡಿಮೆಯಾಗಲು ಆರಂಭವಾಯಿತು. ಕುಟುಂಬ ಮತ್ತು ಗೆಳೆಯ ಗೆಳತಿಯರೊಂದಿಗೆ ಆಟಪಾಠ, ಮಾತುಕತೆ ಎಲ್ಲವೂ ಕಡಿಮೆಯಾಯಿತು. 19 ವರ್ಷ ವಯಸ್ಸಾಗುವ ಹೊತ್ತಿಗೆ ಜನರು ತನಗೇನೋ ಮಾಡಿಬಿಡುತ್ತಾರೆ ಎಂಬ ನಿಷ್ಕಾರಣ ಭಯ ಆಕೆಯಲ್ಲಿ ಕಾಣಿಸಿಕೊಳ್ಳಲಾರಂಭಿಸಿತು. ತನ್ನ ಕೊಠಡಿಯ ಕಿಟಕಿ ಬಾಗಿಲುಗಳನ್ನು ಹಾಕಿಕೊಳ್ಳುವುದು, ಯಾರಾದರೂ ಕೊಠಡಿಯ ಒಳಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆಯೇ ಎಂಬುದಾಗಿ ಪದೇಪದೇ ಪರೀಕ್ಷಿಸುವುದು ಆರಂಭವಾಯಿತು. ಪುರುಷರು ಮತ್ತು ಮಹಿಳೆಯರ ಸಹಿತ ಹಲವರು ತನ್ನನ್ನು ಹೇಗೆ ಕೊಲ್ಲುವುದು ಎಂಬ ಬಗ್ಗೆ ಮಾತನಾಡಿಕೊಳ್ಳುವ ಧ್ವನಿ ತನಗೆ ಸ್ಪಷ್ಟವಾಗಿ ಕೇಳಿಸುತ್ತಿದೆ ಎಂಬುದಾಗಿಯೂ ಆಕೆ ಹೇಳಲಾರಂಭಿಸಿದಳು. ಸುತ್ತಮುತ್ತ ಯಾರೂ ಇಲ್ಲ ಎಂಬುದಾಗಿ ಕುಟುಂಬ ಸದಸ್ಯರು ಆಕೆಗೆ ಸ್ಪಷ್ಟಪಡಿಸಿದರೂ ಆಕೆ ನಂಬುತ್ತಿರಲಿಲ್ಲ; ಯಾರೋ ತನಗೆ ಹಾನಿ ಉಂಟು ಮಾಡಲಿದ್ದಾರೆ ಎಂದೇ ಆಕೆ ನಂಬುತ್ತಿದ್ದಳು. ಆಕೆಯ ನಿದ್ದೆ, ಹಸಿವು, ಸ್ವಂತ ಕಾಳಜಿ ಕಡಿಮೆಯಾಗಲು ಪ್ರಾರಂಭವಾದಾಗ ಹೆತ್ತವರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದರು. ಆದರೆ ತನಗೇನೂ ಆಗಿಲ್ಲ, ಸರಿಯಾಗಿಯೇ ಇದ್ದೇನೆ ಎಂಬುದು ಆಗಲೂ ಆಕೆಯ ವಾದವಾಗಿತ್ತು.

ಸ್ಕಿಝೊಫ್ರೀನಿಯಾ: ಕಾರಣಗಳು
ಸ್ಕಿಝೊಫ್ರೀನಿಯಾಕ್ಕೆ ಯಾವುದಾದರೂ ಒಂದು ಎಂಬಂತಹ ಕಾರಣವಿಲ್ಲ. ಹಲವು ಅಂಶಗಳು ಒಂದುಗೂಡಿ ಸ್ಕಿಝೊಫ್ರೀನಿಯಾ ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತವೆ. ಡೋಪಮಿನ್‌ನಂತಹ ಮಿದುಳಿನ ರಾಸಾಯನಿಕ ತೊಂದರೆಯೂ ಅಪಾಯಾಂಶಗಳಲ್ಲಿ ಒಂದು ಎನ್ನಲಾಗುತ್ತದೆ. ಕುಟುಂಬದಲ್ಲಿ ಇನ್ಯಾರಿಗಾದರೂ ಸ್ಕಿಝೊಫ್ರೀನಿಯಾ ಇರುವುದು, ಮಾದಕದ್ರವ್ಯಗಳ ಅತಿಬಳಕೆ ಇತ್ಯಾದಿಗಳು ಈ ಕಾಯಿಲೆಯು ಉಂಟಾಗುವ ಅಪಾಯವನ್ನು ಹೆಚ್ಚಿಸಬಹುದಾಗಿದ್ದು, ಅತಿಯಾದ ಒತ್ತಡಯುಕ್ತ ಘಟನೆ ಅಥವಾ ದ್ರವ್ಯ ಬಳಕೆಯಿಂದ ಈ ಅನಾರೋಗ್ಯ ಆರಂಭವಾಗಬಹುದು.

ಸ್ಕಿಝೊಫ್ರೀನಿಯಾ ಚಿಹ್ನೆಗಳು
– ಭ್ರಮೆಗಳು (ನೈಜವಲ್ಲದ ಧ್ವನಿಗಳು ಕೇಳುವುದು ಅಥವಾ ವಾಸ್ತವವಲ್ಲದ ವಸ್ತುಗಳು ಕಾಣಿಸುವುದು)
– ಯೋಚನಾ ಪ್ರಕ್ರಿಯೆಯಲ್ಲಿ ಅಸಹಜತೆ (ಇತರರಿಗೆ ರೋಗಿಯ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ)
– ದೈನಿಕ ಚಟುವಟಿಕೆ/ ಹವ್ಯಾಸಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು
– ಕುಟುಂಬ, ಗೆಳೆಯ ಗೆಳತಿಯರು, ಸಾಮಾಜಿಕ ಸಮಾರಂಭಗಳಿಂದ ದೂರವಾಗುವುದು
– ಹಿಂದಿನಂತೆ ಶೈಕ್ಷಣಿಕ/ ಉದ್ಯೋಗ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅಸಮರ್ಥವಾಗುವುದು

ಸ್ಕಿಝೊಫ್ರೀನಿಯಾ: ಸುಳ್ಳು ನಂಬಿಕೆಗಳು

1. ಸ್ಕಿಝೊಫ್ರೀನಿಯಾ ಕಾಯಿಲೆಗೆ ಚಿಕಿತ್ಸೆ ಇಲ್ಲ – ಸುಳ್ಳು ನಂಬಿಕೆ
ಔಷಧ ಮತ್ತು ಪುನರ್ವಸತಿ ಸಹಿತ ಬಹುವಿಧಾನದ ಚಿಕಿತ್ಸೆಗಳು ಈಗ ಲಭ್ಯವಿವೆ. ಅನೇಕ ರೋಗಿಗಳು ಚಿಕಿತ್ಸೆಗೆ ಸ್ಪಂದಿಸುತ್ತಾರೆ ಮತ್ತು ಹೆಚ್ಚು ಕಷ್ಟವಿಲ್ಲದೆ ತಮ್ಮ ದೈನಂದಿನ ಬದುಕನ್ನು ಮುಂದುವರಿಸುವುದು ಅವರಿಗೆ ಸಾಧ್ಯವಾಗುತ್ತದೆ. ಎಷ್ಟು ಬೇಗನೆ ಚಿಕಿತ್ಸೆ ಆರಂಭವಾಗುತ್ತದೆಯೋ ಅಷ್ಟು ಒಳ್ಳೆಯದು.

2. ಸ್ಕಿಝೊಫ್ರೀನಿಯಾ ರೋಗಿಗಳು ಉಗ್ರ ಸ್ವಭಾವದವರಾಗಿರುತ್ತಾರೆ – ಸುಳ್ಳು ನಂಬಿಕೆ
ಸಿನೆಮಾಗಳಲ್ಲಿ ಸಾಮಾನ್ಯವಾಗಿ ಸ್ಕಿಝೊಫ್ರೀನಿಯಾ ರೋಗಿಗಳನ್ನು ಅನ್ಯರಿಗೆ ಅಪಾಯಕಾರಿಯಾಗಿ, ಉಗ್ರ ಸ್ವಭಾವದವರಂತೆ ಚಿತ್ರಿಸಲಾಗುತ್ತದೆ. ಸ್ಕಿಝೊಫ್ರೀನಿಯಾ ರೋಗಿಗಳು ಅನಿರೀಕ್ಷಿತವಾದ, ನಿರ್ಧರಿಸಲು ಸಾಧ್ಯವಾಗಲಾರದ ವರ್ತನೆಯನ್ನು ಹೊಂದಿರಬಹುದು. ಆದರೆ ಉಗ್ರ ಸ್ವಭಾವ ಹೊಂದಿರುವುದು ಅತ್ಯಂತ ಅಪರೂಪ. ಆದಷ್ಟು ಬೇಗನೆ ಚಿಕಿತ್ಸೆಗೆ ಒಳಪಡಿಸುವುದರಿಂದ ರೋಗ ಲಕ್ಷಣಗಳಿಂದ ರೋಗಿಗೆ ಉಂಟಾಗಬಹುದಾದ ತೊಂದರೆಯನ್ನು ತಪ್ಪಿಸಬಹುದು.

3. ಸ್ಕಿಝೊಫ್ರೀನಿಯಾ ರೋಗಿಗಳು ಭಿನ್ನ/ಬಹು ವ್ಯಕ್ತಿತ್ವ ಹೊಂದಿರುತ್ತಾರೆ – ಸುಳ್ಳು ನಂಬಿಕೆ
ಇದು ಕೂಡ ಸಿನೆಮಾಗಳಲ್ಲಿ ಚಿತ್ರಿತವಾಗುವಂಥ ದೃಷ್ಟಿಕೋನ. ಸ್ಕಿಝೊಫ್ರೀನಿಯಾ ರೋಗಿಗಳು ಬಹು ವ್ಯಕ್ತಿತ್ವ ಹೊಂದಿರುತ್ತಾರೆ ಎನ್ನುವುದು ಸುಳ್ಳು. ಅವರು ವಾಸ್ತವದ ವಿಚಿತ್ರ ಅರಿವನ್ನು ಹೊಂದಿರುತ್ತಾರೆಯೇ ವಿನಾ ಬಹು ವ್ಯಕ್ತಿತ್ವವನ್ನು ಹೊಂದಿರುವುದಿಲ್ಲ.

4. ಸ್ಕಿಝೊಫ್ರೀನಿಯಾ ರೋಗಿಗಳನ್ನು ಮನೆಯಲ್ಲಿ ನಿಭಾಯಿಸುವುದಕ್ಕಾಗುವುದಿಲ್ಲ; ಹೀಗಾಗಿ ಅವರು ಆಸ್ಪತ್ರೆಯಲ್ಲಿ ಉಳಿಯಬೇಕಾಗುತ್ತದೆ – ಸುಳ್ಳು ನಂಬಿಕೆ
ಸ್ಕಿಝೊಫ್ರೀನಿಯಾ ರೋಗಿಗಳು ಮನೆಯಲ್ಲಿ ತಮ್ಮ ಕುಟುಂಬ, ಗೆಳೆಯ ಗೆಳತಿಯ ರೊಂದಿಗೆ ಇದ್ದು, ದೈನಂದಿನ ಚಟುವಟಿಕೆಗಳಲ್ಲಿ ತೊಡಗಬಹುದು; ಕೆಲಸ ಮಾಡಿ ಆದಾಯವನ್ನೂ ಗಳಿಸಬಹುದು. ನಿಯಮಿತ ಚಿಕಿತ್ಸೆ, ಮನೋಸಾಮಾಜಿಕ ಚಿಕಿತ್ಸೆ ಮತ್ತು ಮನಶಾÏಸ್ತ್ರಜ್ಞರ ಪುನರ್‌ಭೇಟಿಗಳು ಈ ವಿಚಾರದಲ್ಲಿ ಸಹಾಯ ಮಾಡುತ್ತವೆ.

ಸ್ಕಿಝೊಫ್ರೀನಿಯಾಕ್ಕೆ ಚಿಕಿತ್ಸೆ
ರೋಗ ಲಕ್ಷಣಗಳು ಮಾಯವಾದ ಬಳಿಕವೂ ಸ್ಕಿಝೊಫ್ರೀನಿಯಾಕ್ಕೆ ದೀರ್ಘ‌ಕಾಲಿಕ ಚಿಕಿತ್ಸೆಯ ಅಗತ್ಯವಿರುತ್ತದೆ. ಔಷಧಗಳ ಮತ್ತು ಮನೋಸಾಮಾಜಿಕ ಚಿಕಿತ್ಸೆಗಳ ಮೂಲಕ ಈ ಅನಾರೋಗ್ಯವನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು. ಕೆಲವು ಪ್ರಕರಣಗಳ ಆರಂಭಿಕ ಹಂತಗಳಲ್ಲಿ ಅಥವಾ ರೋಗ ಮರುಕಳಿಸಿದ ಸಂದರ್ಭದಲ್ಲಿ ನಿರ್ವಹಣೆಗಾಗಿ ಆಸ್ಪತ್ರೆ ವಾಸ ಅಗತ್ಯವಾಗಿ ಬರಬಹುದು.

ಸ್ಕಿಝೊಫ್ರೀನಿಯಾಕ್ಕೆ ಔಷಧ ಚಿಕಿತ್ಸೆಯಲ್ಲಿ ಆ್ಯಂಟಿಸೈಕೋಟಿಕ್ಸ್‌ಗಳನ್ನು ಉಪಯೋಗಿಸಲಾಗುತ್ತದೆ. ಇವುಗಳನ್ನು ಬಾಯಿಯ ಮೂಲಕ ದಿನಕ್ಕೆ ಒಂದು ಬಾರಿ (ಸಾಮಾನ್ಯವಾಗಿ ರಾತ್ರಿ) ಸೇವಿಸುವ ಔಷಧವಾಗಿ ನೀಡಲಾಗುತ್ತದೆ. ವಿಶೇಷವಾಗಿ, ಔಷಧ ಸೇವನೆಯ ಮೇಲೆ ನಿಗಾ ಇರಿಸುವುದು ಸಾಧ್ಯವಾಗದ ಕೆಲವು ರೋಗಿಗಳಲ್ಲಿ ಬಾಯಿಯ ಮೂಲಕ ಸೇವಿಸುವ ಔಷಧದ ಬದಲಾಗಿ ಇಂಜೆಕ್ಷನ್‌ ನೀಡಲಾಗುತ್ತದೆ. ಈ ಇಂಜೆಕ್ಷನ್‌ಗಳನ್ನು ತಿಂಗಳಿಗೆ ಒಂದು ಅಥವಾ ಎರಡು ಬಾರಿ ನೀಡಲಾಗುತ್ತದೆ.

ಸ್ಕಿಝೊಫ್ರೀನಿಯಾ ರೋಗ ನಿರ್ವಹಣೆಯಲ್ಲಿ ಮನೋಸಾಮಾಜಿಕ ಚಿಕಿತ್ಸೆಯು ಆವಶ್ಯಕ ಮತ್ತು ಅವಿಭಾಜ್ಯ ಅಂಗ. ಈ ಕಾಯಿಲೆಯ ಬಗ್ಗೆ ರೋಗಿ ಮತ್ತು ಅವರ ಕುಟುಂಬಕ್ಕೆ ಮಾಹಿತಿ ಮತ್ತು ಜ್ಞಾನ ಒದಗಿಸುವುದು, ಎಲ್ಲ ಸಂಶಯ ಮತ್ತು ತಪ್ಪು ಅಭಿಪ್ರಾಯಗಳನ್ನು ನಿವಾರಿಸುವುದು, ರೋಗಿಯು ಕೆಲಸಕಾರ್ಯಗಳ ವಿಚಾರದಲ್ಲಿ ಹೊಂದಿರುವ ಸಾಮರ್ಥ್ಯಗಳಿಗೆ ಒತ್ತು ನೀಡಿ ಪ್ರೋತ್ಸಾಹಿಸುವುದು ಮತ್ತು ಅವರು ಮರಳಿ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ತೊಡಗುವುದಕ್ಕೆ ಸಹಾಯ ಮಾಡುವುದು ಹಾಗೂ ಸಮುದಾಯದ ಜತೆಗೆ ಅವರು ಮತ್ತೆ ಬೆರೆತು ಒಂದಾಗುವಂತೆ ಮಾಡುವುದು ಈ ಚಿಕಿತ್ಸೆಯ ಕೆಲವು ಆಯಾಮಗಳಾಗಿವೆ.

ಸಮುದಾಯವು ಈ ಅನಾರೋಗ್ಯದ ಬಗ್ಗೆ ಸ್ಪಷ್ಟ ಅರಿವನ್ನು ಹೊಂದಿದ್ದರೆ ಯಾವುದೇ ವ್ಯಕ್ತಿಯಲ್ಲಿ ಈ ಅನಾರೋಗ್ಯವನ್ನು ಆದಷ್ಟು ಶೀಘ್ರವಾಗಿ ಕಂಡು ಹಿಡಿಯುವುದಕ್ಕೆ ಸಾಧ್ಯವಾಗುತ್ತದೆ; ಇದು ಚಿಕಿತ್ಸೆಯನ್ನು ಬೇಗನೆ ಆರಂಭ ಮಾಡುವುದಕ್ಕೆ ನೆರವಾಗುವ ಮೂಲಕ ಹೆಚ್ಚು ಉತ್ತಮ ಫ‌ಲಿತಾಂಶವನ್ನು ಪಡೆಯಲು ಕಾರಣವಾಗುತ್ತದೆ.

ಡಾ| ಸೋನಿಯಾ ಶೆಣೈ
ಅಸಿಸ್ಟೆಂಟ್‌ ಪ್ರೊಫೆಸರ್‌,
ಸೈಕಿಯಾಟ್ರಿ ವಿಭಾಗ, ಕೆಎಂಸಿ, ಮಣಿಪಾಲ

ಟಾಪ್ ನ್ಯೂಸ್

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.