“ಕೆಂಪೇಗೌಡರ ಮ್ಯೂಸಿಯಂ, ಟಿಪ್ಪುಸ್ಮಾರಕ ನಿರ್ಮಾಣ
Team Udayavani, Sep 5, 2017, 2:35 PM IST
ದೇವನಹಳ್ಳಿ: ಕೆಂಪೇಗೌಡ ಪೂರ್ವಜರ ಜನ್ಮಸ್ಥಳವಾಗಿರುವ ಆವತಿ ಗ್ರಾಮದಲ್ಲಿ ಕೆಂಪೇಗೌಡರ ಸಭಾ ಭವನ ಒಂದು ಎಕರೆ ಜಾಗದಲ್ಲಿ ಅವರ ಮಾಹಿತಿ ಇರುವಂತಹ ವಸ್ತುಸಂಗ್ರಹಾಲಯ ಹಾಗೂ ದೇವನಹಳ್ಳಿ ಟಿಪ್ಪು ಸುಲ್ತಾನ್ ಜನ್ಮ ಸ್ಥಳವಿದ್ದು, ಅದರ ಅಭಿವೃದ್ಧಿಗೆ ಒಂದು ಎಕರೆ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣ ಮಾಡಿ ಅಭಿವೃದ್ಧಿ ಪಡಿಸಲಾಗುವುದು ಎಂದು ಸಂಸದ ಎಂ.ವೀರಪ್ಪ ಮೊಯ್ಲಿ ತಿಳಿಸಿದರು.
ತಾಲೂಕಿನ ಆವತಿ ಗ್ರಾಮದಲ್ಲಿ ಆವತಿ ಜಿಪಂ ಕ್ಷೇತ್ರ ವ್ಯಾಪ್ತಿಯ ಆವತಿ ಬಿದಲೂರು ಕಾರಹಳ್ಳಿ ಕೊಯಿರಾ ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಗಳಲ್ಲಿ ವಿವಿಧ ಯೋಜನೆಯಡಿಯಲ್ಲಿ ಕಾಮಗಾರಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
18ರಂದು ಕೆರೆಗಳಿಗೆ ನೀರು: ತಾವು ಪೆಟ್ರೋಲಿಯಂ ಸಚಿವರಾಗಿದ್ದ ಪೆಟ್ರೋಲಿಯಂ ಇಲಾಖೆಯಿಂದ ದೇವನಹಳ್ಳಿ ಟಿಪ್ಪುಸ್ಮಾರಕ ಮತ್ತು ಕೆಂಪೇಗೌಡರ ಜನ್ಮ ಸ್ಥಳಗಳ ಅಭಿವೃದ್ಧಿಗೆ 6 ಕೋಟಿ ರೂ. ಮತ್ತು ಚಿಕ್ಕಬಳ್ಳಾಪುರ ತಾಲೂಕಿನ ಭೋಗನಂದಿಶ್ವರ ದೇವಾಲಯದ ಅಭಿವೃದ್ಧಿಗೆ 9 ಕೋಟಿ ರೂ. ಮಂಜೂರು ಮಾಡಲಾಯಿತು. ಇದೇ ಸೆ.18ರಂದು ನಾಗವಾರ-ಹೆಬ್ಟಾಳ ಕೆರೆಗಳಿಂದ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಕೆರೆಗಳಿಗೆ ಹರಿಸುವ ಯೋಜನೆಗೆ ಚಾಲನೆ ಕೊಡುವ ದಿನ ಭೋಗನಂದೀಶ್ವರ ದೇವಾಲಯದ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಕೆಂಪೇಗೌಡರ ಹೆಸರು ಜಗತ್ ಪ್ರಸಿದ್ಧಿ: ಟಿಪ್ಪು ಮತ್ತು ಕೆಂಪೇಗೌಡರ ಜನ್ಮಸ್ಥಳಗಳ ಅಭಿವೃದ್ಧಿಗೆ ಶಂಕುಸ್ಥಾಪನೆ ಅಕ್ಟೋಬರ್/ನವೆಂಬರ್ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರಿಂದ ಚಾಲನೆ ನೀಡಲಾಗವುದು. ದೇವನಹಳ್ಳಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬರಲು ಹಲವಾರು ಜನ ಅಡ್ಡಗಾಲು ಹಾಕಿದರು. ಮೈಸೂರು ರಸ್ತೆಗೆ ಹೋಗಬೇಕಾಗಿದ್ದ ವಿಮಾನ ನಿಲ್ದಾಣವನ್ನು ಈ ಭಾಗಕ್ಕೆ ತಂದುಕೊಟ್ಟಿದ್ದೇನೆ. ಈ ನಿಲ್ದಾಣ ದೇಶದಲ್ಲಿಯೇ ದೊಡ್ಡವಿಮಾನ ನಿಲ್ದಾಣವಾಗಿದೆ. ಎರಡು ರನ್ವೇಗಳಿಂದ ಕೂಡಿದ್ದು, ಯಾವುದೇ ವಿಮಾನ ನಿಲ್ದಾಣದಲ್ಲಿ ಎರಡು ರನ್ ವೇ ಇಲ್ಲ. ತಾವು ಕೇಂದ್ರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದಾಗ ಸಚಿವ ಸಂಪುಟ ಸಭೆಯಲ್ಲಿ ನಾಡ ಪ್ರಭು ಕೆಂಪೇಗೌಡರ ಹೆಸರು ಇಡಲು ಒತ್ತಾಯ ಮಾಡಿ ಅದರ ಬಗ್ಗೆ ಎಲ್ಲಾ ಸಚಿವರ ಗಮನಕ್ಕೆ ತಂದು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂಬ ಹೆಸರು ನಾಮಕರಣವಾಗಿದ್ದು, ದೇಶದಲ್ಲಿಯೇ ಕೆಂಪೇಗೌಡರ ಹೆಸರು ಜಗತಪ್ರಸಿದ್ಧಿಯಾಗಿದೆ ಎಂದು ಹೇಳಿದರು.
ಮುಂದಿನ ವರ್ಷ ಜಿಲ್ಲಾ ಸಂಕೀರ್ಣ ಲೋಕಾರ್ಪಣೆ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಚೇರಿಗಳಿಗೆ ಬೆಂಗಳೂರಿಗೆ ಹೋಗುವ ಸ್ಥಿತಿ ಇದ್ದ ವೇಳೆ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ದೇವನಹಳ್ಳಿ ತಾಲೂಕಿನ ಚಪ್ಪರದಕಲ್ಲು ಬಳಿ ಜಿಲ್ಲಾ ಸಂಕೀರ್ಣಗಳ ನಿರ್ಮಾಣಕ್ಕೆ 43 ಕೋಟಿ ರೂ. ವೆಚ್ಚದಲ್ಲಿ ದೇವನಹಳ್ಳಿ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿ ಜನವರಿ/ಫೆಬ್ರವರಿ ತಿಂಗಳಿನಲ್ಲಿ ಜಿಲ್ಲಾ ಸಂಕೀರ್ಣಗಳು ಲೋಕಾರ್ಪಣೆಯಾಗಲಿದೆ. ಈಗಾಗಲೇ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದು ತಿಳಿಸಿದರು.
3 ವರ್ಷದಲ್ಲಿ ಎಲ್ಲಾ ಕೆರೆಗಳಿಗೆ ನೀರು: ಎತ್ತಿನ ಹೊಳೆ ಯೋಜನೆಗೆ ಸರ್ಕಾರ 13 ಸಾವಿರ ಕೋಟಿ ರೂ. ಮಂಜೂರು ಮಾಡಿದೆ. ಈಗಾಗಲೇ ಹೇಮಾವತಿ ನದಿ ಮಾರ್ಗವಾಗಿ ದೊಡ್ಡ ಸೇತುವೆ ನಿರ್ಮಾಣಕ್ಕೆ 850 ಕೋಟಿ ರೂ.ವೆಚ್ಚದಲ್ಲಿ ತುಮಕೂರಿನ ಸಮೀಪದಲ್ಲಿ ನಿರ್ಮಾಣವಾಗುತ್ತಿದೆ. ಎತ್ತಿನಹೊಳೆ ಯೋಜನೆ ಕಾಮಗಾರಿ 45000 ಕೋಟಿಯಷ್ಟು ಕಾಮಗಾರಿ ಮುಗಿದಿದೆ. ಇನ್ನೂ 3 ವರ್ಷದೊಳಗಾಗಿ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವ ಕಾರ್ಯವಾಗುತ್ತದೆ ಎಂದು ತಿಳಿಸಿದರು.
ಹೊಸಕೋಟೆ-ನರಸಾಪುರ ಕೆರೆಗೆ ನವೆಂಬರ್ ಒಳಗಾಗಿ ನೀರು ಬರುವ ಕಾರ್ಯವಾಗಲಿದೆ. ಆವತಿ ಗ್ರಾಮಕ್ಕೆ ನಾಡ ಪ್ರಭು ಕೆಂಪೇಗೌಡರ ಪೂರ್ವಜರು ಇದ್ದ ಕುರುಹುಗಳು ಇರುವುದರ ಬಗ್ಗೆ ಗ್ರಾಮಸ್ಥರು ಹೇಳಿದ್ದು, ಕೂಡಲೇ ಪ್ರಾಚೀನ ಇಲಾಖೆಗೆ ಶಿಫಾರಸು ಮಾಡಿ ಉಳಿಸುವಂತೆ ಮಾಡಲಾಗುವುದು ಎಂದು ತಿಳಿಸಿದರು. ತಾಲೂಕಿನಲ್ಲಿ ಸಾಮಾನ್ಯ ವರ್ಗದ ವಸತಿ ರಹಿತ ಜನರಿಗೆ ಸೂರು ಕಲ್ಪಿಸಲು 1000 ಮನೆಗಳಿಗೆ ಫಲಾನುಭವಿಗಳಿಂದ ಪಡೆದು ಅರ್ಹ ಫಲಾನುಭವಿಗಳಿಗೆ ವಸತಿ ಅನುದಾನ ನೀಡಲಾಗುವುದು ಎಂದರು.
ಪಂಚಾಯತ್ ರಾಜ್ ಬಲವರ್ಧನೆ: ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಮಾತನಾಡಿ, ಆವತಿ ಜಿಪಂ ವ್ಯಾಪ್ತಿಯಲ್ಲಿ ಪಕ್ಷಾತೀತವಾಗಿ, ಜಾತ್ಯತೀತವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಪಂಚಾಯತ್ರಾಜ್ ವ್ಯವಸ್ಥೆಯಲ್ಲಿ 73 ಮತ್ತು 93 ತಿದ್ದುಪಡಿ ಮಾಡಿ ಪಂಚಾಯತ್ ರಾಜ್ ಬಲವರ್ಧನೆಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.
ಈ ವೇಳೆ ಮಾಜಿ ಶಾಸಕ ಮುನಿನರಸಿಂಹಯ್ಯ, ಕೆ.ವೆಂಕಟಸ್ವಾಮಿ, ಜಿಪಂ ಉಪಾಧ್ಯಕ್ಷೆ ಅನಂತ ಕುಮಾರಿ, ಸದಸ್ಯರಾದ ರಾಧಾಮ್ಮ , ಕೆ.ಸಿ.ಮಂಜುನಾಥ್, ತಾಪಂ ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷೆ ನಂದಿನಿ,ಆವತಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷೆ ನಾಗರತ್ನಮ್ಮ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎ.ಸಿ.ನಾಗರಾಜ್, ಮಾಜಿ ಪುರಸಭಾಧ್ಯಕ್ಷ ಸಿ.ಜಗನ್ನಾಥ್, ಎಂ.ನಾರಾಯಣಸ್ವಾಮಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಆರ್.ರವಿಕುಮಾರ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಶ್ರೀನಿವಾಸ ಗೌಡ, ಖಾದಿಬೋರ್ಡ್ ಅಧ್ಯಕ್ಷ ಲಕ್ಷ್ಮಣ್ ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರುತಿ, ಪ್ರಧಾನ ಕಾರ್ಯದರ್ಶಿ ಎಸ್.ಪಿ.ಮುನಿರಾಜ್, ಖಜಾಂಚಿ ಶಾಂತಕುಮಾರ್, ಬಿದಲೂರು ಗ್ರಾಪಂ ಅಧ್ಯಕ್ಷ ಎಸ್.ನಾಗೇಗೌಡ, ತಾಪಂ ಸದಸ್ಯೆ ಚೈತ್ರಾ, ಅನ್ನಪೂರ್ಣಮ್ಮ, ಶಶಿಕಲಾ, ಶೈಲಜಾ, ಎಸ್.ಮಹೇಶ್, ಮಂಜುನಾಥ್, ಕಾರಹಳ್ಳಿ ಶ್ರೀನಿವಾಸ್, ಕೊಯಿರಾ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಕಾರಹಳ್ಳಿ ಗ್ರಾಪಂ ಅಧ್ಯಕ್ಷ ಎ.ದೇವರಾಜ್, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಪಂ ಇಒ ಕೆ.ವಿ.ಶ್ರೀನಿವಾಸ ಮೂರ್ತಿ, ಪಿಡಿಒ ವೆಂಕಟೇಶ್, ಗ್ರಾಪಂ ಸದಸ್ಯರಾದ ಮುನಿರಾಜು, ಗೋಪಾಲಕೃಷ್ಣ, ವೆಂಕಟೇಶ್, ಕೆಂಪೇಗೌಡ, ರಾಜಶೇಖರ್, ನರಸಿಂಹಮೂರ್ತಿ, ಪ್ರಸನ್ನಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ನಾಗೇಶ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಆರ್.ಸುಮಂತ್, ಜಿಲ್ಲಾ ಕಾಂಗ್ರೆಸ್ ಎಸ್ಸಿ ವಿಭಾಗದ ಅಧ್ಯಕ್ಷ ಎಂ.ಲೋಕೆಶ್, ಬ್ಲಾಕ್ ಕಾಂಗ್ರೆಸ್ ಎಸ್ಸಿ ವಿಭಾಗದ ಅಧ್ಯಕ್ಷ ಬೈಚಾಪುರದ ರಾಜಣ್ಣ, ಜಿಲ್ಲಾ ಕಾಂಗ್ರೆಸ್ ಎಸ್ಸಿ ವಿಭಾಗದ ಅಧ್ಯಕ್ಷ ಎ.ಚಿನ್ನಪ್ಪ ಮತ್ತಿತರರು ಇದ್ದರು.