ಲಂಚಕೋರರ ಬಗ್ಗೆ ಮಾಹಿತಿ ಕೊಡಿ
Team Udayavani, Aug 1, 2018, 3:31 PM IST
ನೆಲಮಂಗಲ: ಲಂಚಪಡೆಯುವ ಅಧಿಕಾರಿಗಳು, ರಾಜಕಾರಣಿಗಳ ಬಗ್ಗೆ ಮಾಹಿತಿ ನೀಡಲು ಆತಂಕವಿದ್ದರೆ ನಿಮ್ಮ ಹೆಸರನ್ನು ತಿಳಿಸದೆ ಗುಪ್ತವಾಗಿ ಅಂಚೆ ಮೂಲಕ ಅಥವಾ ಕಚೇರಿಗೆ ಭೇಟಿ ನೀಡುವ ಮೂಲಕ ಮಾಹಿತಿ ನೀಡಿದರೆ ತಕ್ಷಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಕೋದಂಡರಾಮ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಆಯೋಜಿಸಲಾಗಿದ್ದ ಸಾರ್ವಜನಿಕರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭರವಸೆ: ಸಾರ್ವಜನಿಕರು ಯಾವುದೇ ಭ್ರಷ್ಟ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿದರೆ ಅವರ ವಿರುದ್ಧ ಕ್ರಮ ಕೈಗೊಂಡು ದೂರುದಾರರ ಕೆಲಸವನ್ನು ಶೀಘ್ರದಲ್ಲಿ ಮಾಡಿಸಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.
ರಕ್ಷಣೆ: ಲಂಚ ಪಡೆಯುವ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿದವರ ಕೆಲಸವನ್ನು ತಕ್ಷಣ ಮಾಡಿಕೊಡುವುದಲ್ಲದೆ ಅವರಿಗೆ ಸೂಕ್ತವಾದ ರಕ್ಷಣೆ ನೀಡಲಾಗುತ್ತದೆ. 24 ಗಂಟೆ ಸಾರ್ವಜನಿಕರು ನೇರವಾಗಿ ತನಗೆ ಕರೆ ಮಾಡಿ ಸಮಸ್ಯೆ ಬಗ್ಗೆ ತಿಳಿಸಬಹುದು ಎಂದರು.
ಅಧಿಕಾರಿಗೆ ತರಾಟೆ: ಕಳೆದ ಮೂರು ತಿಂಗಳ ಹಿಂದೆ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಶಶಿಕಲಾ ಎಂಬವವರು ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದು ಜೈಲಿಗೆ ಹೋಗಿ ಬಂದಿದ್ದಾರೆ.
ಆದರೆ, ದೂರುದಾರರ ಕೆಲಸವನ್ನು ಅಧಿಕಾರಿಗಳು ದಬ್ಭಾಳಿಕೆ ಮಾಡುವಂತೆ ಮಾತನಾಡುತ್ತಾ ಮೂರು ತಿಂಗಳಾದರೂ ಮಾಡಿಲ್ಲ ಎಂಬ ದೂರಿನ ಕುರಿತಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಶಿರಸ್ಥೆದಾರ್ ಕೆಂಪೇಗೌಡ ಅವರನ್ನು ಡಿವೈಎಸ್ಪಿ ಕೋದಂಡರಾಮ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಹಣ ನೀಡಿದ್ದರೆ ಅವರ ಕೆಲಸ ವಾಗುತ್ತಿತ್ತು. ಆದರೆ, ಅಧಿಕಾರಿಗಳ ಭ್ರಷ್ಟತೆ ತಿಳಿಸಿ ದ್ದಕ್ಕೆ ನೀವು ಕೆಲಸ ಮಾಡಿಕೊಟ್ಟಿಲ್ಲವಾ, ವಾರದಲ್ಲಿ ಕೆಲಸವಾಗದಿದ್ದರೆ ತಹಶೀಲ್ದಾರರು ಸೇರಿ ಇಲಾಖೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದೂರು ನೀಡಲು ಆತಂಕವಿದ್ದರೆ ನಿಮ್ಮ ಹೆಸರು ಹೇಳಲು ಇಚ್ಚಿಸದವರು (ಹೆಸರನ್ನು ತಿಳಿಸದೆ) ಅರ್ಜಿಯನ್ನು ಅಂಚೆ ಮೂಲಕ ಎಸಿಬಿ ಬೆಂಗಳೂರು ಕಚೇರಿಗೆ ಕಳುಹಿಸಿ. ನಾವು ಆ ಸಮಸ್ಯೆ ಬಗ್ಗೆ ಸೂಕ್ತ ಕ್ರಮಕೈಗೊಳ್ಳುತ್ತೇವೆ.
ಕೋದಂಡರಾಮ, ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ