ಶುರುವಾಯ್ತು ಮುಂಗಾರು ಮಳೆ…
Team Udayavani, Jun 9, 2018, 11:04 AM IST
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಶುಕ್ರವಾರ ನಸುಕಿನಿಂದಲೇ ಸುರಿಯುತ್ತಿರುವ ಮುಂಗಾರು ಆಗಮನದ ಸೋನೆ ಮಳೆ ಭೀಕರ ಬರ ಹಾಗೂ ಬಿಸಿಲಿನಿಂದ ಕಂಗೆಟ್ಟಿರುವ ಇಳೆಯನ್ನು ತಂಪಾಗಿಸಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಗುರುವಾರ ರಾತ್ರಿಯೇ ಮೃಗಶಿರ ಮಳೆಯ ಆಗಮನ ವಾಸನೆ ಎಂಬಂತೆ ಮೋಡ ಕವಿದುಕೊಂಡಿದ್ದ ವಾತಾವರಣ ಶುಕ್ರವಾರ ಬೆಳಗ್ಗೆ ಮಳೆ ರೂಪದಲ್ಲಿ ನೆಲಕ್ಕೆ ಇಳಿದಿತ್ತು. ಮುಂಗಾರು ಪೂರ್ವ ಸುರಿದಿದ್ದ ಮಳೆಯಿಂದ ಅದಾಗಲೇ ಕೊಂಚ ತಣಿದಿದ್ದ ಜಮೀನುಗಳಲ್ಲಿ ಶುಕ್ರವಾರದ ಮಳೆ ಬಹುತೇಕ ಭೂಮಿಯನ್ನು ತಣ್ಣಗಾಗಿಸಿದೆ.
ಮುಂಗಾರು ಮಳೆ ಆಗಮನದಿಂದ ಮೂಲೆ ಸೇರಿದ್ದ ಛತ್ರಿಗಳು, ಗೋಣಿ ಚೀಲದ ಮೂಲೆ ಕುಂಚಿಗೆಗಳು, ಕಂಬಳಿ ಹೊದಿಕೆಗಳು, ಆಧುನಿಕ ಆವಿಷ್ಕಾರ ಪ್ಲಾಸ್ಟಿಕ್ನ ಹೊದಿಕೆಗಳನ್ನು ಹೊದ್ದಿದ್ದ ಜನರು ಮಳೆಯಲ್ಲೂ ಸಂಭ್ರಮದಿಂದ ಓಡಾಡುತ್ತಿದ್ದರು. ಬಹುತೇಕರು ಸೋನೆ ಮಳೆಗೆ ಮನೆಯಿಂದ ಆಚೆ ಬರದೇ ಮನೆಯಲ್ಲೇ ಇದ್ದು ಮಳೆಯ ಮೋಜು ಅನುಭವಿಸುತ್ತಿದ್ದರು.
ವಿಜಯಪುರ ನಗರದ ಮಹಾತ್ಮ ಗಾಂಧೀಜಿ ವೃತ್ತದ ವಾಣಿಜ್ಯ ಕೇಂದ್ರ ಪರಿಸರ ಸುತ್ತಲೂ ಹಾಗೂ ಬೀದಿ ಬೀದಿಗಳಲ್ಲಿ ಛತ್ರಿ ಹಾಗೂ ಮಳೆಯಿಂದ ರಕ್ಷಿಸಿಕೊಳ್ಳುವ ಪ್ಲಾಸ್ಟಿಕ್ ಕೋಟು, ಹೊದಿಕೆಗಳ ಮಾರಾಟವೂ ಜೋರಾಗಿತ್ತು.
ಮಳೆಯಲ್ಲೂ ಮನೆಯಿಂದ ಹೊರ ಬಂದವರು, ಶಾಲೆಗೆ ಹೊರಟು ನಿಂತ ಮಕ್ಕಳು, ಕಚೇರಿಗೆ ಹೊರಟ ಅಧಿಕಾರಿ,
ಸಿಬ್ಬಂದಿ, ಹೊಟ್ಟೆ ಪಾಡಿನ ಅನಿವಾರ್ಯಕ್ಕೆ ಬೀದಿಗೆ ಇಳಿಯಲೇಬೇಕಾದ ಜನರೆಲ್ಲ ಛತ್ರಿಗಳನ್ನು ಹಿಡಿದು ಮಳೆಯಲ್ಲೂ ಮಂದಹಾಸದಿಂದಲೇ ಓಡಾಡುತ್ತಿದ್ದರು. ಮಳೆಯಿಂದ ರಕ್ಷಿಸಿಕೊಳ್ಳಲು ಛತ್ರಿ ಹಿಡಿದೇ ಓಡಾಡುತ್ತಿದ್ದ ದೃಶ್ಯ, ಸೋನೆ ಮಳೆಗೆ ರಸ್ತೆಯಲ್ಲಿ ಹರಿಯುತ್ತಿದ್ದ ತಿಳಿ ನೀರಿನ ಝರಿಗಳು ಮಲೆನಾಡಿನ ಮಳೆಗಾಲದ ಹಿತಾನುಭವ ನೀಡಿತ್ತು