ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ
Team Udayavani, Jun 22, 2018, 3:47 PM IST
ತಾಳಿಕೋಟೆ: ಪಟ್ಟಣದ ಜನರಿಗೆ ಆಗುತ್ತಿರುವ ಕುಡಿವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹರಿಸಲು
ನಾರಾಯಣಪುರ ಜಲಾಶಯದಿಂದ ಪುರಸಭೆಯ ಮಾಳನೂರ ಕೆರೆವರೆಗೆ ಪೈಪ್ಲೈನ್ ಜೋಡಿಸಲು ಕೂಡಲೇ ಕ್ರಿಯಾಯೋಜನೆ ಸಿದ್ಧಪಡಿಸಿ ವರದಿ ಸಲ್ಲಿಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ಎ.ಬಿ. ಕಲಾಲ್ಗೆ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಸೂಚಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಳಿಕೋಟೆ ಪುರಸಭೆಯ ಕೆರೆ 22 ಎಕರೆ ಇದ್ದರೂ ಸಹ ಪಟ್ಟಣದ ಜನದಟ್ಟನೆಗೆ ಕುಡಿವ ನೀರು ಸಾಕಾಗುತ್ತಿಲ್ಲ. ಜನರ ಮುಂದಿನ ಭವಿಷ್ಯದ ದೃಷ್ಟಿಯಿಂದ ನಾರಾಯಣಪುರ ಜಲಾಶಯದಿಂದ ಪೈಪ್ಲೈನ್ ಕಾರ್ಯ ಮಾಡುವುದು ಸೂಕ್ತವಾಗಿದೆ.
ಈ ಕಾರ್ಯ ಸಮರ್ಪಕವಾಗಿ ಜಾರಿಬಂದರೆ 24×7 ಕುಡಿಯುವ ನೀರನ್ನು ಒದಗಿಸಲು ಸಹಾಯಕಾರಿಯಾಗಲಿದೆ.
ಇದಕ್ಕೆ ಸಂಬಂಧಪಟ್ಟ ಎಂಜಿನಿಯರ್ಗಳಿಂದ ನೀಲನಕ್ಷೆ ಹಾಗೂ ಕ್ರಿಯಾಯೋಜನೆ ಸಿದ್ಧಪಡಿಸಿ ವಾರದೊಳಗೆ ವರದಿ ಸಲ್ಲಿಸಿ ಇದಕ್ಕೆ ತಗಲುವ ವೆಚ್ಚವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸುತ್ತೇನೆ. ಅಭಿವೃದ್ಧಿ ವಿಷಯದಲ್ಲಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕೆಂದು ಸೂಚಿಸಿದರು.
ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಪುರಸಭೆ ಆಡಳಿತ ಮಂಡಳಿಯವರು ಹಾಗೂ ವಿರೋಧ ಪಕ್ಷದವರು ಪಕ್ಷ ಭೇದ ಮರೆತು ಅಭಿವೃದ್ಧಿ ಕಾರ್ಯ ಮಾಡಲು ಸಹಕರಿಸಬೇಕು. ಯಾವುದೋ ವಿಷಯಕ್ಕೆ ತಮ್ಮ ತಮ್ಮ ನಡುವೆ ತಿಕ್ಕಾಟಗಳಿದ್ದರೆ ವೈಯಕ್ತಿಕವಾಗಿ ಇಟ್ಟುಕೊಳ್ಳಲಿ. ಅಭಿವೃದ್ಧಿ ವಿಷಯದಲ್ಲಿ ಸಹಕರಿಸದಿದ್ದರೆ ನೇರವಾಗಿ ಜಿಲ್ಲಾಡಳಿತದಿಂದಲೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮುಂದಾಗಬೇಕಾಗುತ್ತದೆ.
ಈಗಾಗಲೇ ಪಟ್ಟಣದಲ್ಲಿ ಒಳಚರಂಡಿ ಯುಜಿಡಿ ಕಾರ್ಯ ಮುಕ್ತಾಯವಾಗಿದ್ದು ಪುರಸಭೆಗೆ ಹಸ್ತಾಂತರ ಪಡೆದುಕೊಳ್ಳಿ ಸೂಚಿಸಿದರು. ತಾಳಿಕೋಟೆ ನಗರದಲ್ಲಿ ನಗರೋತ್ಥಾನ ಯೋಜನೆಯಡಿ ಈಗಾಗಲೇ ರಸ್ತೆ ಕಾಮಗಾರಿ
ನಡೆದಿದ್ದು ಗುತ್ತಿಗೆದಾರನು ಚೇಂಬರ್ಗಳನ್ನು ಒಡೆದು ಹಾಕಿದ್ದಾನೆ. ಆ ಚೇಂಬರ್ಗಳನ್ನು ತಾನೇ ಮಾಡಲು
ಮುಂದಾಗಿದ್ದಾನೆ.
ರಸ್ತೆ ಮಾಡುವ ಗುತ್ತಿಗೆದಾರ ಒಳಚರಂಡಿ ಚೇಂಬರ್ ಕಾರ್ಯ ಮಾಡುವುದು ಎಷ್ಟು ಸರಿ? ಕೂಡಲೇ ಆ ನಗರೋತ್ಥಾನ ಕಾಮಗಾರಿ ಸ್ಥಗಿತಗೊಳಿಸಿ ಎಷ್ಟು ಚೇಂಬರ್ಗಳು ಒಡೆದಿವೆಯೋ ಅಷ್ಟು ಚೇಂಬರ್ಗಳ ಕ್ರಿಯಾಯೋಜನೆ ಸಿದ್ಧಪಡಿಸಿ ಕರ್ನಾಟಕ ನೀರು ಸರಬರಾಜು ಒಳಚರಂಡಿ ಮಂಡಳಿಗೆ ಗುತ್ತಿಗೆದಾರಿಗೆ ದುಡ್ಡು ಕಟ್ಟಲು ಸೂಚಿಸಿ ನಗರಾಭಿವೃದ್ಧಿ ಕೋಶದ ಅಭಿಯಂತರ ಕಲಾಲ್ ಅವರಿಗೆ ದೂರವಾಣಿ ಮುಖಾಂತರವೇ ತರಾಟೆಗೆ ತೆಗೆದುಕೊಂಡ ಶಾಸಕ ನಡಹಳ್ಳಿ, ಚೇಂಬರ್ ನಿರ್ಮಾಣವಾದ ನಂತರ ಕಾಮಗಾರಿ ಕೈಗೊಳ್ಳಲು ಸೂಚಿಸಿ ಇಂತಹ ಬೇಕಾಬಿಟ್ಟಿ ಕಾಮಗಾರಿ ಕೈಗೊಂಡರೆ ಸುಮ್ಮನ್ನಿರಲ್ಲ, ಕೂಡಲೇ ಕಾಮಗಾರಿ ಸ್ಥಗಿತಗೊಳಿಸಿ ಎಂದು ಸೂಚಿಸಿದರು.
ತಾಳಿಕೋಟೆ ಪುರಸಭೆ ವ್ಯಾಪ್ತಿಯ ಬಹುತೇಕ ಕಡೆ ಸ್ವಚ್ಚತೆಯಿಲ್ಲ, ಏಕೆ ಕಸ ವಿಲೇವಾರಿಯಾಗುತ್ತಿಲ್ಲ ಎಂದು ಮುಖ್ಯಾಧಿಕಾರಿಗೆ ಪ್ರಶ್ನಿಸುವಾಗಲೇ ಮುಖ್ಯಾಧಿಕಾರಿ ಕಲಾಲ್ ಅವರು, ಕಸ ಸ್ವಚ್ಚತೆಗೆ ಸಿಬ್ಬಂದಿಗಳ ಕೊರತೆಯಿದೆ. 35 ಸಿಬ್ಬಂದಿ ಭರ್ತಿಗೆ ಈಗಾಗಲೇ ಮಂಜೂರಾತಿಗೆ ಕಳುಹಿಸಲಾಗಿದೆ. ಮನೆ ಮನೆಗೆ ಕಸ ಸಂಗ್ರಹಣ ಬುಟ್ಟಿಗಳನ್ನು ನೀಡಲಾಗಿದೆ. ಸಂಗ್ರಹಿಸಿದ ಕಸ ತರಲು ವಾಹನಗಳ ಚಾಲಕರ ಅವಶ್ಯಕತೆ ಇದೆ.
ಎಲ್ಲ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿಗೆ ಕಳುಹಿಸಿದ್ದರೂ ಇನ್ನೂ ಮಂಜೂರಾತಿ ಸಿಕ್ಕಿಲ್ಲಾವೆಂದಾಗ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಲಾಲ್ ಅವರಿಗೆ ಸಂಪರ್ಕಿಸಿದ ಶಾಸಕ ನಡಹಳ್ಳಿ, ಕಸ ಸ್ವಚ್ಚಗೊಳಿಸುವ ಸಿಬ್ಬಂದಿಗಳ ಹುದ್ದೆಗಳನ್ನು ತುಂಬಿಕೊಳ್ಳಲು ಎಷ್ಟು ದಿನ ಬೇಕು. ವರ್ಷಗಟ್ಟಲೆ ಅನುಮತಿಗೆ ನಿಂತರೆ ಪಟ್ಟಣ ಕಸದಿಂದ ತುಂಬುತ್ತದೆ. ಕೂಡಲೇ ಒಂದು ದಿನದಲ್ಲಿ ಸಿಬ್ಬಂದಿಗಳ ನೇಮಕಕ್ಕೆ ಅನುಮತಿಕೊಟ್ಟು ಕಳಿಸಿ. ಇಲ್ಲದಿದ್ದರೆ ನಾನೇ ನೇರವಾಗಿ ನಿಮ್ಮ ಆಫೀಸಿಗೆ ಬಂದು ಕುಳಿತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆಶ್ರಯ ಮನೆಗಳ ಹಂಚಿಕೆ ವಿಷಯವಾಗಿ ಈಗಾಗಲೇ 300 ಜನರಿಗೆ ಅಲಾಟ್ಮೆಂಟ್ ಆಗಿದೆ. ಅವರೆಲ್ಲರಿಗೂ ಮನೆಗಳನ್ನು ಕಟ್ಟಿಸಿಕೊಡಲು ಕ್ರಿಯಾಯೋಜನೆ ನೀಲ ನಕ್ಷೆ ಸಿದ್ಧಪಡಿಸಿ ನೀಡಲು ಲ್ಯಾಂಡ್ ಆರ್ಮಿಯ ತಿಮ್ಮರಾಜಪ್ಪ ಅವರಿಗೆ ಸೂಚಿಸಿದ ಅವರು, ಮನೆಗಳ ಹಂಚಿಕೆ ವಿಷಯದಲ್ಲಿ ಪಕ್ಷ ಭೇದ ಬೇಡ. ಯಾವುದೇ ಪಕ್ಷದವರಾಗಿರಲಿ ಅತಿ ಕಡು ಬಡವರಿರಬೇಕು, ನಿರ್ಗತಿಕರಿರಬೇಕು. ಅಂತವರಿಗೆ ಮನೆಗಳನ್ನು ಒದಗಿಸುವಂತಹ ಕಾರ್ಯವಾಗಬೇಕು.
ಇದರಲ್ಲಿ ಏನಾದರೂ ಹಸ್ತಕ್ಷೇಪವಾಗಿ ಮನೆಗಳಿಂದ ನಿರ್ಗತಿಕ ಬಡವರು ವಂಚಿತರಾದರೆ ನಾನು ಸುಮ್ಮನಿರಲ್ಲ ಎಂದು ಮುಖ್ಯಾಧಿಕಾರಿಗಳಿಗೆ ಎಚ್ಚರಿಸಿದರು. ನಂತರ ಆಶ್ರಯ ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಜಾಗೆಯನ್ನು ಶಾಸಕ ನಡಹಳ್ಳಿ ಪರಿಶೀಲನೆ ನಡೆಸಿದರು. ಈ ವೇಳೆ ಕರ್ನಾಟಕ ನೀರು ಸರಬರಾಜು ಒಳಚರಂಡಿ ಮಂಡಳಿ ಅಧಿಕಾರಿ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ರಾಜುಗೌಡ ಗುಂಡಕನಾಳ, ರಾಘು ಚವ್ಹಾಣ, ವಾಸುದೇವ ಹೆಬಸೂರ, ಪುರಸಭೆ ಸದಸ್ಯ
ಪ್ರಕಾಶ ಹಜೇರಿ, ಮಾನಸಿಂಗ್ ಕೊಕಟನೂರ, ಮುತ್ತಪ್ಪ ಚಮಲಾಪುರ, ಅಮಿತ ಮನಗೂಳಿ, ಪ್ರಭು ಬಿಳೇಭಾವಿ, ಸಂತು ವಿಜಾಪುರ, ಕಾಶೀನಾಥ ಮುರಾಳ, ಎಸ್.ಎ. ಘತ್ತರಗಿ, ಅಶೋಕ ಚಿನಗುಡಿ, ಸುರೇಶ ಗುಂಡಣ್ಣವರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್