ಕಳ್ಳತನಕ್ಕೆ ಹೋಗಿ ಹೊಟ್ಟೆ ಬಿರಿಯುವಂತೆ ತಿಂದರು!
Team Udayavani, Sep 1, 2018, 5:14 AM IST
ದೆಹಲಿಯ ರಾಜು ಸಿಂಗ್ ಹಾಗೂ ಬಾಬಿ ಸಿಂಗ್, ಸರಿತಾ ವಿಹಾರದಲ್ಲಿರುವ ರೆಸ್ಟೋರೆಂಟ್ ನಿತ್ಯ ಗ್ರಾಹಕರು. ಅಲ್ಲಿನ ಬಿರಿಯಾನಿ ಅವರ ನಾಲಿಗೆಗೆ ರುಚಿ ಹತ್ತಿಸಿತ್ತು. ಇಷ್ಟೆಲ್ಲ ಬಿರಿಯಾನಿ ಮಾರುವವ ಎಷ್ಟು ದುಡ್ಡು ಮಾಡಿರಬಹುದು ಎಂದು ಯೋಚಿಸಿದವರೇ ಒಂದು ರಾತ್ರಿ ರೆಸ್ಟೋರೆಂಟ್ ಬಾಗಿಲು ಹಾಕಿದ ಮೇಲೆ ಮುಖವಾಡ ಧರಿಸಿ ಕಳ್ಳತನಕ್ಕೆ ನುಗ್ಗಿದರು. ಕ್ಯಾಶ್ ಕೌಂಟರ್ನಲ್ಲಿ ಒಂದೇ ಒಂದು ರೂಪಾಯಿಯೂ ಇರಲಿಲ್ಲ. ಈ ಸಿಟ್ಟನ್ನೆಲ್ಲ ಬಿರಿಯಾನಿ ಮೇಲೆ ತೀರಿಸಿದ ಇಬ್ಬರೂ, ಹೊಟ್ಟೆ ಬಿರಿಯುವಂತೆ ತಿಂದರು. ಇನ್ನುಳಿದಿದ್ದನ್ನೆಲ್ಲ ಚೆಲ್ಲಾಡಿದರು. ಹೊಟ್ಟೆ ತಂಪಾಯಿತು. ಜೇಬು ತಂಪು ಮಾಡಿಕೊಳ್ಳೋಣ ಎಂದು ಕೊನೆಗೆ ಕ್ಯಾಶ್ ಕೌಂಟರಿನಲ್ಲಿದ್ದ ಲ್ಯಾಪ್ಟಾಪನ್ನೇ ಎತ್ತಿಕೊಂಡು ಹೊರಟರು.
ಬಿರಿಯಾನಿ ತಿಂದ ರಭಸಕ್ಕೆ ಮರುದಿನ ಮಧ್ಯಾಹ್ನ ಎಚ್ಚರಾದಾಗ ಲ್ಯಾಪ್ಟಾಪ್ ಮಾರಿ ಕಾಸು ಮಾಡಿಕೊಳ್ಳೋಣ ಎಂದು ಹೊರಟರೆ ಈ ಲ್ಯಾಪ್ಟಾಪ್ನ ಜಾಡು ಹಿಡಿದು ಬಂದ ಪೊಲೀಸರ ಕೈಗೆ ಸಿಕ್ಕಿಕೊಂಡಿದ್ದಾರೆ.