ಟಿಡಿಎಸ್‌ ಮತ್ತು ಟ್ಯಾಕ್ಸ್‌ ನಡುವಿನ ಭಯಂಕರ ಗೊಂದಲ!


Team Udayavani, Mar 5, 2018, 6:00 AM IST

Tax-052018.jpg

ಟಿಡಿಎಸ್‌ ಎನ್ನುವುದು ಮೂರಕ್ಷರದ ಒಂದು ಪ್ರೇತದ ಹಾಗೆ ಗೋಚರಿಸುತ್ತದೆ ಮತ್ತು ಈ ಭೂತದ ಉಚ್ಛಾಟನೆಗಾಗಿ ಮಂತ್ರ ವಾದಿಯನ್ನು ಕಂಡು ಉರ್ಕು ಕಟ್ಟಿಸಿಕೊಳ್ಳುವ ಇರಾದೆ ಅವರಿಗೆ ಇರುತ್ತದೆ. ಅಥವಾ ಚಿಕನ್‌ ಪಾಕ್ಸ್‌ಗೆ ಮಾಡುವಂತೆ ಒಂದು ಲಸಿಕೆ ಚುಚ್ಚಿಸಿಕೊಂಡು ಅದು ಮತ್ತೆ ಬಾರದಂತೆ ನೋಡಿಕೊಳ್ಳುವ ಐಡಿಯಾ ಇರುತ್ತದೆ.

ಕಾಸು ಕುಡಿಕೆ ಅಂಕಣವನ್ನು ಸತತವಾಗಿ ಓದುವವರಿಗೆ ಇಲ್ಲಿ ನಡೆಯುವ ಸಣ್ಣಪುಟ್ಟ ಶೀತಲ ಸಮರದ ಬಗ್ಗೆ ಗೊತ್ತೇ ಇರುತ್ತದೆ. ಕಳೆದ ವಾರವಷ್ಟೇ ರಾಯರಿಗೆ ಮತ್ತು ಅವರ ಸೊಸೆಯ ನಡುವೆ ಗುರುಗುಂಟಿ ನಿಲಯದಲ್ಲಿ ನಡೆದ ಕೋಲ್ಡ… ವಾರಿನ ವಿವರಗಳು ಸಿಕ್ಕಿರಬಹುದು. ವೆಲ…, ಇದೀಗ ತಾನೇ ಬಂದ ಹೊಸ ಬ್ರೇಕಿಂಗ್‌ ನ್ಯೂಸ್‌ ಪ್ರಕಾರ ಆ ಸಮರ ಈಗ ಕೊನೆಗೊಂಡು ಮನೆಯಲ್ಲಿ ಶಾಂತಿ ನೆಲೆಸಿದೆ. 

ಈ ವಾರದ ಎಪಿಸೋಡಿನಲ್ಲಿ ರಾಯರ ಮನೆ ಲವಲವಿಕೆಯಿಂದ ಕೂಡಿದೆ. ಹುಮ್ಮಸ್ಸಿನಿಂದ ರಾಯರು ಮನೆಯಲ್ಲಿ ಓಡಾಡುತ್ತಿದ್ದಾರೆ. ತಮ್ಮ ರೂಮಿನ ಬೀರುವನ್ನು ತೆರೆದು ಎಲ್ಲಾ ಬ್ಯಾಂಕ್‌ ಠೇವಣಿಗಳ ಪುರಾವೆಗಳನ್ನು ಹೊರ ತೆಗೆದಿಟ್ಟಿದ್ದಾರೆ. ರಾಯರ ಎಫ್.ಡಿ. ಠೇವಣಿಯ ರಶೀದಿಗಳು ಹಾಸಿಗೆಯಿದ್ದಷ್ಟೂ ಕಾಲು ಚಾಚಿ ಅವರ ಬೆಡ್ಡಲ್ಲಾ ಹರಡಿಕೊಂಡಿವೆ. ಎಲ್ಲಾರಶೀದಿಗಳನ್ನೂ ಒಂದೊಂದಾಗಿ ಪರಿಶೀಲಿಸಿ ಎತ್ತಿ ಇಡುತ್ತಾ ಅವುಗಳ ವಿವರಗಳನ್ನು ಒಂದು ಬಿಳಿ ಹಾಳೆಯಲ್ಲಿ ದಾಖಲು ಮಾಡುತ್ತಿದ್ದಾರೆ. ನಡುನಡುವೆ ಬಹೂರಾಣಿಯ ಚಹಾ ಸಮಾರಾಧನೆ ನಡೆಯುತ್ತಲೇ ಇದೆ. ಈ ರೀತಿ ಗುರುಗುಂಟಿರಾಯರು ತಮ್ಮ ಪೆನ್ಶನ್‌ ದುಡ್ಡನ್ನು ಇಪ್ಪತ್ತೈದು ಬ್ಯಾಂಕಿನಲ್ಲಿ ಇಟ್ಟು ಪಡುವ ಪಾಡಲನ್ನು ಕಂಡು ಬಹೂರಾಣಿಗೆ ನಗು ಬಂತು. ಯಾಕೆ ಮಾವಾ ಈ ದ್ರಾವಿಡ ಪ್ರಾಣಾಯಾಮ? ಎಲ್ಲಾ ದುಡ್ಡನ್ನೂ ನೀಟಾಗಿ ಒಂದೆರಡು ಕಡೆ ಹಾಕ್ಬಾರ್ದಾ? ಅಂತ ನೆಗೆಯಾಡಿದಳು. 

ಇಲ್ಲಾ ಮಗೂ ಎಲ್ಲಾ ಒಂದೇ ಕಡೆ ಹಾಕಿದ್ರೆ ಟ್ಯಾಕ್ಸ್‌ ಕಟ್‌ ಆಗ್ತದೆ. ಟ್ಯಾಕ್ಸ್‌ ಉಳಿಸ್ಲಿಕ್ಕೆ ಸ್ಪ್ಲಿಟ್‌ ಮಾಡಿ ಬೇರೆ ಬೇರೆ ಕಡೆ ಎಫಿx ಮಾಡ್ಬೇಕು- ಬಡ್ಡಿ ಹತ್ಸಾವ್ರ ದಾಟದ ಹಾಗೆ, ಸಮಜಾಯಿಷಿ ನೀಡಿದರು ರಾಯರು. ಹತ್ತು ಸಾವಿರ ದಾಟದಿದ್ದರೆ ನಾವು ಬದುಕಿದ ಹಾಗೆಯೇ; ಅದಕ್ಕೆ ಟ್ಯಾಕ್ಸ್‌ ಇಲ್ಲ. ಹತ್ಸಾವ್ರ ದಾಟಿದರೆ ಬಡ್ಡಿ ಮೇಲೆ ಟ್ಯಾಕ್ಸ್‌ ಬರುತ್ತೆ. ಮೊದಲೇ ಬರೋದು ಜುಜುಬಿ ಏಳೆಂಟು ಪರ್ಸೆಂಟ್‌ ಬಡ್ಡಿ. ಅದರಲ್ಲೂ ಇಂಕಂ ಟ್ಯಾಕ್ಸ್‌ ಅಂದ್ರೆ? ಒಟ್ಟಿನಲ್ಲಿ ನಿವೃತ್ತರನ್ನು ಕೇಳ್ಳೋರೇ ಇಲ್ಲ, ವಯಸ್ಸಿಗೆ ಮರ್ಯಾದೆ ಇಲ್ಲ ಅಂತ ನೇರವಾಗಿ ತಮ್ಮ ವಯಸ್ಸೆಂಬ ಕಾರ್ಡನ್ನು ಎಸೆದು ತಮ್ಮ ಮಾಮೂಲಿ ಭಾಷಣಕ್ಕೆ ಇಳಿದರು. ಕೆಲವರಿಗೆ ಹೀಗೇನೇ; ಜಗತ್ತಿನಲ್ಲಿ ಆಗುತ್ತಿರುವ ಎಲ್ಲಾ ಸಮಸ್ಯೆಗಳಿಗೂ ತಮ್ಮ ವಯಸ್ಸೇ ಕಾರಣ ಎಂಬಂತೆ ಡಯಲಾಗ್‌ ಹೊಡೆದು ಸಿಂಪತಿ ಗಿಟ್ಟಿಸುವ ಹುನ್ನಾರದಲ್ಲಿರುತ್ತಾರೆ. ನಮ್ಮ ರಾಯರೂ ಅದಕ್ಕೆ ಹೊರತಾಗಿಯೇನೂ ಇಲ್ಲ. 
***
“ಟಿಡಿಎಸ್‌’ ಅಥವಾ ಟ್ಯಾಕ್ಸ್‌ ಡಿಡಕ್ಟೆಡ್‌ ಅಟ್‌ ಸೋರ್ಸ್‌ ಮತ್ತು “ಟ್ಯಾಕ್ಸ್‌’ ನಡುವೆ ಭಾರೀ ಭಯಂಕರ ಗೊಂದಲವಿದೆ. ನನಗೆ ಬರುವ ಫೋನ್‌ ಕಾಲ್‌ಗ‌ಳಲ್ಲಿ ಸುಮಾರು ಕಾಲುವಾಶಿ ಈ ಗೊಂದಲದಿಂದ ಉದ್ಭವವಾದುವುಗಳೇ ಆಗಿರುತ್ತವೆ. ಹೀಗೆ ಮಾಡಿದರೆ ಅಥವಾ ಹಾಗೆ ಮಾಡಿದರೆ ಟ್ಯಾಕ್ಸ್‌ ಡಿಡಕ್ಟ್ ಮಾಡ್ತಾರಾ? ಮತ್ತು ಟ್ಯಾಕ್ಸ್‌ ಕಟ್‌ ಆಗದೆ ಇರುವ ಹಾಗೆ ಎಂತ ಮಾಡಬೇಕು? ಎಂಬಿತ್ಯಾದಿ ಟ್ಯಾಕ್ಸ್‌ ಕಡಿತದ ಬಗ್ಗೆ ಪ್ರಶ್ನೆಗಳು. ಬೇರೇನಾದರು ಕೇಳಿದರೂ ಕೂಡಾ ಸುತ್ತಿ ಬಳಸಿ ಮತ್ತೆ ಕೊನೆಗೆ ಬರುವುದು ಈ ಪ್ರಶ್ನೆಗಳಿಗೇ. ಇವರಿಗೆಲ್ಲಾ ಟಿಡಿಎಸ್‌ ಎನ್ನುವುದು ಮೂರಕ್ಷರದ ಒಂದು ಪ್ರೇತದ ಹಾಗೆ ಗೋಚರಿಸುತ್ತದೆ ಮತ್ತು ಈ ಭೂತದ ಉಚ್ಛಾಟನೆಗಾಗಿ ಮಂತ್ರವಾದಿಯನ್ನು ಕಂಡು ಉರ್ಕು ಕಟ್ಟಿಸಿಕೊಳ್ಳುವ ಇರಾದೆ ಅವರಿಗೆ ಇರುತ್ತದೆ. ಅಥವಾ ಚಿಕನ್‌ ಫಾಕ್ಸ್‌, ಮಟನ್‌ ಫಾಕ್ಸ್‌ಗಳಿಗೆ ಮಾಡುವಂತೆ ಒಂದು ಲಸಿಕೆ ಚುಚ್ಚಿಸಿಕೊಂಡು ಅದು ಮುಂದಕ್ಕೆ ಬಾರದಂತೆ ನೋಡಿಕೊಳ್ಳುವ ಐಡಿಯಾ ಇರುತ್ತದೆ. ಒಟ್ಟಾರೆ, ಟಿಡಿಎಸ್‌ ಅನ್ನೇ ಅಂತಿಮ ಟ್ಯಾಕ್ಸ್‌ ಎಂದು ಪರಿಗಣಿಸಿ ಅದರಿಂದ ತಪ್ಪಿಸಿಕೊಳ್ಳಲು ಏನೆಲ್ಲಾ ಮಾಡಬೇಕೋ ಮತ್ತು ಏನೆಲ್ಲಾ ಮಾಡಬಾರದೋ ಅವನ್ನೆಲ್ಲಾ ಮಾಡಿಕೊಂಡು ತಾವೇ “ಕರ’ವೀರರಂತೆ ಬಿಲ್ಡಪ್‌ ಕೊಟ್ಟುಕೊಂಡು ತಿರುಗಾಡುತ್ತಿರುತ್ತಾರೆ. 

ಆದರೆ ಅಸಲಿನಲ್ಲಿ ಟಿಡಿಎಸ್‌ ಎನ್ನುವುದು ಅಂತಿಮವಾದ ಟ್ಯಾಕ್ಸ್‌ ಅಲ್ಲವೇ ಅಲ್ಲ. ಅದು ಏನಿದ್ದರೂ ಬರೇ ಒಂದು “ಟೆಂಪರರಿ’ ಏರ್ಪಾಡು ಮಾತ್ರ. ಮೊತ್ತ ಮೊದಲಾಗಿ ನಾವು ಟಿಡಿಎಸ್‌ ಮತ್ತು ಟ್ಯಾಕ್ಸ್‌ ಮಧ್ಯೆ ವ್ಯತ್ಯಾಸವನ್ನು ಅರಿತುಕೊಳ್ಳಬೇಕು. ಓರ್ವ ವ್ಯಕ್ತಿಗೆ ನಿಗದಿತ ರಿಯಾಯಿತಿಗಳ ಬಳಿಕ (ಸೆಕ್ಷನ್‌ 80ಸಿ ಅಡಿಯಲ್ಲಿ 1.5 ಲಕ್ಷ ಇತ್ಯಾದಿ) ಬರುವ ಆದಾಯವು ಕನಿಷ್ಠ ಆದಾಯ ತೆರಿಗೆ ಮಿತಿಯನ್ನು ಮೀರಿದರೆ ತೆರಿಗೆ ಕಟ್ಟತಕ್ಕದ್ದು. ಈ ಮಿತಿಯು ಸಾಮಾನ್ಯ ನಾಗರಿಕರಿಗೆ ರೂ. 2.5 ಲಕ್ಷ, ಹಿರಿಯ ನಾಗರಿಕರಿಗೆ (ವಯಸ್ಸು 60-80) ರೂ. 3 ಲಕ್ಷ ಹಾಗೂ ಅತಿಹಿರಿಯ ನಾಗರಿಕರಿಗೆ (ವಯಸ್ಸು 80 ಮೀರಿ) 5 ಲಕ್ಷ ಆಗಿದೆ. ಇದು ಮತ್ತು ಇದು ಮಾತ್ರ ಅಂತಿಮವಾಗಿ ನಮಗೆ ಭಾದಿಸುವ ತೆರಿಗೆ ಕಾನೂನು. 

ಬದಲಿಗೆ ಟಿಡಿಎಸ್‌ ಅಥವಾ ಟ್ಯಾಕ್ಸ್‌ ಡಿಡಕ್ಟೆಡ್‌ ಅಟ್‌ ಸೋರ್ಸ್‌ ಎಂಬುದು ಮೂಲದಲ್ಲಿಯೇ ಸ್ವಲ್ಪ ತೆರಿಗೆ ಸಂಗ್ರಹ ಮಾಡಲು ಸರಕಾರವು ಮಾಡಿಕೊಂಡ ಒಂದು ಆಡಳಿತಾತ್ಮಕ ವ್ಯವಸ್ಥೆ ಮಾತ್ರ. ಅದುವೇ ಅಂತಿಮವಲ್ಲ. ಜನತೆ ಕರ ತಪ್ಪಿಸುವುದಕ್ಕೆ ಉತ್ತರವಾಗಿ ಆರಂಭಿಸಿರುವ ಆಡಳಿತಾತ್ಮಕ ಹೆಜ್ಜೆ. ಉದಾಹರಣೆಗೆ, ಬ್ಯಾಂಕ್‌ ಬಡ್ಡಿಯ ಮೇಲೆ ರೂ. 10,000 ವಾರ್ಷಿಕ ಆದಾಯ ಮೀರಿದರೆ ಆ ಬ್ಯಾಂಕ್‌ ಕಾನೂನು ಪ್ರಕಾರ ಶೇ. 10 ಲೆಕ್ಕದಲ್ಲಿ ಟಿಡಿಎಸ್‌ ಕಳೆಯುತ್ತದೆ. (ಪ್ಯಾನ್‌ ಕಾರ್ಡ್‌ ಸಲ್ಲಿಸದೆ ಇದ್ದವರಿಗೆ ಇದು ಶೇ. 20). ಆದರೆ ಇದೊಂದು ತಾತ್ಕಾಲಿಕ ವ್ಯವಸ್ಥೆ. ನಿಜವಾಗಿಯೂ ಬ್ಯಾಂಕ್‌ ಎಫ್.ಡಿ. ಬಡ್ಡಿಯ ಪ್ರತಿಯೊಂದು ರೂಪಾಯಿಯೂ ಕರಾರ್ಹ. ವರ್ಷಾಂತ್ಯದಲ್ಲಿ ಅದನ್ನು ನಿಮ್ಮ ಒಟ್ಟು ಆದಾಯಕ್ಕೆ ಸೇರಿಸಿ ಕರ ಕಟ್ಟಬೇಕು. ಎಫ್.ಡಿ. ಬಡ್ಡಿಯ ಮೇಲೆ ಯಾವುದೇ ವಿನಾಯಿತಿ ಇಲ್ಲ. ಅಂತಿಮವಾಗಿ ಎಲ್ಲಾ ಆದಾಯನ್ನೂ ಸೇರಿಸಿ ನೋಡಿ ಸಲ್ಲಬೇಕಾದ ತೆರಿಗೆ ಈಗಾಗಲೇ ಕಟ್ಟಲ್ಪಟ್ಟ ಟಿಡಿಎಸ್‌ ಇತ್ಯಾದಿ ತೆರಿಗೆಗಳಿಂದ ಜಾಸ್ತಿಯಿದ್ದಲ್ಲಿ ವ್ಯತ್ಯಾಸವನ್ನು ಕಟ್ಟಬೇಕು. ಕಡಿಮೆಯಿದ್ದರೆ ಹೆಚ್ಚುವರಿ ಪಾವತಿಯನ್ನು ರಿಫ‌ಂಡ್‌ ಪಡಕೊಳ್ಳಬಹುದು. ಆದ ಕಾರಣ ಟಿಡಿಎಸ್ಸೇ ಅಂತಿಮವಲ್ಲ ಅದೊಂದು ಹಂತ ಮಾತ್ರ. ಹಾಗಾಗಿ ಅದರ ಬಗ್ಗೆ ಸಿಕ್ಕಾಪಟ್ಟೆ ಟೆನ್ಶನ್‌ ತಗೊಳ್ಳುವ ಅಗತ್ಯ ಇಲ್ಲ. ಒಟ್ಟು ಆದಾಯದ ಮೇಲೆ ಅಂತಿಮ ತೆರಿಗೆ ಎಷ್ಟು ಬರಬಹುದು ಎನ್ನುವುದರ ಮೇಲೆ ವರ್ಷ ಪೂರ್ತಿ ಒಂದು ಕಣ್ಣು ಇಟ್ಟಿರಲೇ ಬೇಕು. 

ಆದಾಗ್ಯೂ, ಒಟ್ಟು ಆದಾಯದ ಮೇರೆಗೆ ಏನೂ ತೆರಿಗೆ ಬಾರದೇ ಇದ್ದಲ್ಲಿ ಸುಖಾ ಸುಮ್ಮನೆ ಟಿಡಿಎಸ್‌ ಕಡಿಸಿಕೊಂಡು ಆಮೇಲೆ ಅದನ್ನೇ ರಿಫ‌ಂಡ್‌ ಪಡೆಯುವ ಕೆಲಸ ಯಾಕೆ ಬೇಕು? ಅದೊಂದು ಅನಗತ್ಯ ಕೆಲಸವಲ್ಲವೇ? ಅದೃಷ್ಟಾವಶಾತ್‌, ಸರಕಾರ ಇದನ್ನು ಒಪ್ಪುತ್ತದೆ ಮತ್ತು ಅಂತಹ ಅರ್ಥಹೀನ ಕೆಲಸ ಮಾಡುವುದರಿಂದ ನಮಗೆ ವಿನಾಯತಿ ಕೂಡಾ ನೀಡುತ್ತದೆ. ಅಂದರೆ ಯಾರು ಅಂತಿಮವಾಗಿ ಕರಾರ್ಹರಲ್ಲವೋ ಅವರಿಗೆ ಈ ಟಿಡಿಎಸ್‌ ಪ್ರಕ್ರಿಯೆಯಿಂದ ವಿನಾಯತಿಯನ್ನು ನೀಡಲಾಗಿದೆ. ಅಂತೆಯೇ ಯಾರು ಅಂತಿಮವಾಗಿ ಕರಾರ್ಹರೋ ಅವರು ಟಿಡಿಎಸ್‌ ಪ್ರಕ್ರಿಯೆಗೆ ತಲೆ ಒಡ್ಡಲೇ ಬೇಕು.
 
ಅದು ಸರಿ ಆದರೆ ಕರಾರ್ಹರಲ್ಲದವರಿಗೆ ಟಿಡಿಎಸ್‌ನಿಂದ ಮುಕ್ತಿ ಹೇಗೆ? ಒಂದು ಬ್ಯಾಂಕು ರೂ. 10,000 ಮೀರಿ ಬಡ್ಡಿ ಆದಾಯವಿದ್ದವರಿಂದ ಶೇ. 10 ಟಿಡಿಎಸ್‌ ಕಡಿತ ಮಾಡುವುದು ಕಾನೂನು. ಆದರೆ ತಾವು ಅಂತಿಮವಾಗಿಯೂ ಕರಾರ್ಹರಲ್ಲದೆ ಇದ್ದಲ್ಲಿ ಫಾರ್ಮ್ 15ಜಿ ಭರ್ತಿಗೊಳಿಸಿ ಬ್ಯಾಂಕಿನಲ್ಲಿ ನೀಡತಕ್ಕದ್ದು. 15ಜಿ ಎನ್ನುವುದು “ನಾನು ಕರಾರ್ಹನಲ್ಲ, ನನ್ನ ಡೆಪಾಸಿಟ್‌ ಮೇಲೆ ಟಿಡಿಎಸ್‌ ಕಡಿಯಬೇಡಿ’ ಎಂದು ಸ್ವಯಂ ಹೇಳಿಕೆ ಕೊಡುವ ಡಿಕ್ಲರೇಶನ್‌. ಹಿರಿಯ ನಾಗರಿಕರಿಗೆ ಈ ಫಾರ್ಮ್ ಸ್ವಲ್ಪ ಬದಲಾವಣೆಗಳೊಂದಿಗೆ 15ಎಚ್‌ ರೂಪದಲ್ಲಿ ಬರುತ್ತದೆ.

ಆದರೆ ನೆನಪಿರಲಿ, ಈ ಫಾರ್ಮುಗಳನ್ನು ಅವಕ್ಕೆ ಅರ್ಹರಾದವರು ಮಾತ್ರ ಸಲ್ಲಿಸತಕ್ಕದ್ದು. ಕರಭಾರ ಇರುವ ಜನತೆ ಇವನ್ನು ತುಂಬಿ ಕೊಟ್ಟರೆ ಅಪರಾಧವಾಗುತ್ತದೆ. ಕರಾರ್ಹ ತೆರಿಗೆ ಇಲ್ಲದವರು ಮಾತ್ರವೇ ಇವನ್ನು ಭರ್ತಿ ಮಾಡಲು ಅರ್ಹರು. 

15ಜಿ 
ಇದು ಕರಾರ್ಹ ಆದಾಯ ಇರದ 60 ವಯಸ್ಸಿನ ಒಳಗಿನ ಸಾಮಾನ್ಯ ಜನರು ತುಂಬ ಬಹುದಾದ ಡಿಕ್ಲರೇಶನ್‌. ಇದನ್ನು ತುಂಬಲು ಎಲ್ಲ ಮೂಲಗಳಿಂದ ಬರುವ ಒಟ್ಟು ಆದಾಯ ಎಲ್ಲ ಕರ ರಿಯಾಯತಿಗಳನ್ನು ಕಳೆದ ಬಳಿಕ ರೂ. 2.5 ಲಕ್ಷದ ಕರಾರ್ಹ ಮಿತಿಯನ್ನು ಮೀರಿರಬಾರದು. ಅದಲ್ಲದೆ ಇನ್ನೊಂದು ನಿಯಮವೂ ಇದೆ. ಅದೇನೆಂದರೆ ಕೇವಲ ಬಡ್ಡಿ ಆದಾಯವೂ ರೂ. 2.5 ಲಕ್ಷದ ಮಿತಿಯನ್ನು ಮೀರಿರಬಾರದು. ಈ ಎರಡೂ ನಿಯಮಗಳಡಿ ಅರ್ಹರಾದವರು ಮಾತ್ರ ಇದನ್ನು ತುಂಬಿ ಬ್ಯಾಂಕಿಗೆ ನೀಡಬಹುದು. ಅದರ ಆಧಾರದಲ್ಲಿ ಬ್ಯಾಂಕು ರೂ. 10,000 ಮೀರಿದರೂ ಬಡ್ಡಿಯ ಮೇಲೆ ಟಿಡಿಎಸ್‌ ಕಳೆಯುವುದಿಲ್ಲ. 

15ಎಚ್‌
ಇದು ಕರಾರ್ಹ ಆದಾಯ ಇರದ 60 ವಯಸ್ಸು ಮೀರಿದ ಹಿರಿಯ ನಾಗರಿಕರು ಮಾತ್ರ ತುಂಬಬಹುದಾದ ಡಿಕ್ಲರೇಶನ್‌. ಇದನ್ನು ತುಂಬಲು ಪ್ರಸ್ತುತ ತೆರಿಗೆ ದರ ಪ್ರಕಾರ 60-80 ವಯಸ್ಸಿನವರಿಗೆ ರೂ. 3 ಲಕ್ಷ ಹಾಗೂ 80 ರಿಂದ ಹೆಚ್ಚಿನ ವಯಸ್ಸಿನವರಿಗೆ ರೂ. 5 ಲಕ್ಷ ಮೀರದ ಕರಾರ್ಹ ಆದಾಯವಿರಬೇಕು. ಬಡ್ಡಿ ಆದಾಯದ ಬಗ್ಗೆ ಪ್ರತ್ಯೇಕ ನಿಯಮ ಈ ವರ್ಗದವರಿಗೆ ಇಲ್ಲ. ಹಾಗಾಗಿ ಎಲ್ಲ ರಿಯಾಯತಿಗಳ ಬಳಿಕದ ಕರಾರ್ಹ ಆದಾಯ ಈ ಮಿತಿಗಳೊಳಗೆ ಇದ್ದುಕೊಂಡು ಈ ಹೇಳಿಕೆ ಸಲ್ಲಿಸಿದವರಿಗೆ ಟಿಡಿಎಸ್‌ ಕಡಿತವಾಗುವುದಿಲ್ಲ. 

ಈ ರೀತಿ ಟಿಡಿಎಸ್‌ ಮತ್ತು ಟ್ಯಾಕ್ಸ್‌ ಮಧ್ಯೆ ಇರುವ ವ್ಯತ್ಯಾಸವನ್ನು ಸರಿಯಾಗಿ ಅರಿತುಕೊಂಡು ಅಂತಿಮವಾಗಿ ಕರಾರ್ಹ ಆದಾಯ ಇಲ್ಲದವರು ಮಾತ್ರ 15ಜಿ/ಎಚ್‌ ಫಾರ್ಮುಗಳನ್ನು ಸೂಕ್ತವಾಗಿ ಉಪಯೋಗಿಸಿಕೊಂಡು ಟಿಡಿಎಸ್‌ ಕಡಿತವನ್ನು ತಪ್ಪಿಸಿಕೊಳ್ಳಬಹುದು. ಕರಾರ್ಹ ಆದಾಯ ಇರುವವರು ಯಾವುದೇ ಫಾರ್ಮ್ ಉಪಯೋಗಿಸಿಕೊಂಡು ಈ ಟಿಡಿಎಸ್‌ನಿಂದ ತಪ್ಪಿಸಿಕೊಳ್ಳುವಂತಿಲ್ಲ. ಅದೂ ಅಲ್ಲದೆ ಟಿಡಿಎಸ್‌ ಕಡಿತವಾಗಿರಲಿ, ಕಡಿತವಾಗದೇ ಇರಲಿ ಅಂತಿಮ ಕರ ಸಂದಾಯ ಪ್ರತ್ಯೇಕವಾಗಿಯೇ ಸ್ಲಾಬಾನುಸಾರ ನಿರ್ಣಯವಾಗುತ್ತದೆ ಹಾಗೂ ಆ ಕರಭಾರದಿಂದ ಟಿಡಿಎಸ್‌ ಮೊತ್ತವನ್ನು ಕಳೆದು ಉಳಿದ ಕರವನ್ನು ಕಟ್ಟುವುದು/ರಿಫ‌ಂಡ್‌ ಪಡೆಯುವುದನ್ನು ಮಾಡಬಹುದು. 

ಇನ್ನು ಕೆಲವರು ಟಿಡಿಎಸ್‌ ತಪ್ಪಿಸುವ ಏಕೈಕ ಉದ್ದೇಶದಿಂದ ಬೇರೆ ಬೇರೆ ಬ್ಯಾಂಕುಗಳಲ್ಲಿ ಎಫಿx ಇಡುತ್ತಾರೆ. ಇದರಿಂದ ನೈಜವಾಗಿ ಟ್ಯಾಕ್ಸ್‌ ಇಲ್ಲದವರಿಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಆದರೆ ನೈಜವಾಗಿ ಟ್ಯಾಕ್ಸ್‌ ಕಟ್ಟಬೇಕಾಗಿದ್ದು ಅದನ್ನು ಸರಕಾರದಿಂದ ಕಣ್ತಪ್ಪಿಸುವ ಯೋಜನೆ ಇರುವವರು ಮಾತ್ರ ಇಂತಹ ಕೃತ್ಯಗಳಿಂದ ದುರ್ಲಾಭ ಪಡೆಯಲು ಪ್ರಯತ್ನಿಸುತ್ತಾರೆ. ಅದರೆ ತೆರಿಗೆ ತಪ್ಪಿಸುವುದು ಕಾನೂನು ಬಾಹಿರ ಹಾಗೂ ಸಿಕ್ಕಿ ಬಿದ್ದವರಿಗೆ ಬಡ್ಡಿ ಹಾಗೂ ತಪ್ಪು ದಂಡ ವಿದಿಸುತ್ತಾರೆ. ಟ್ಯಾಕ್ಸ್‌ ಕಟ್ಟುವಲ್ಲಿ ಕಟ್ಟಲೇ ಬೇಕು. ಇತ್ತೀಚೆಗೆ ಕರ ಇಲಾಖೆ ಎಲ್ಲವನ್ನೂ ಪ್ಯಾನ್‌ ನಂಬರ್‌ ಮೂಲಕ ಜಾಡು ಹಿಡಿಯುವ ಕಾರಣ ಸರಕಾರಕ್ಕೆ ಎಲ್ಲ ವ್ಯವಹಾರವೂ ಗೊತ್ತಾಗಿಯೇ ಆಗುತ್ತದೆ. ಇದನ್ನೂ ಗಮನದಲ್ಲಿ ಇಟ್ಟುಕೊಳ್ಳುವುದು ಮುಖ್ಯ. 

ಪ್ಯಾನ್‌ ಕೊಡದ ಕಾರಣಕ್ಕೋ, 15 ಜಿ/ಎಚ್‌ ಅಥವಾ ಇನ್ಯಾವುದೇ ಕಾರಣಕ್ಕೆ ಅಗತ್ಯಕ್ಕಿಂತ ಜಾಸ್ತಿ ಟಿಡಿಎಸ್‌ ಕಟ್ಟಿಹೋದಲ್ಲಿ ಅದನ್ನು ರಿಟರ್ನ್ ಫೈಲಿಂಗ್‌ ಮೂಲಕ ರಿಫ‌ಂಡ್‌ ಪಡೆಯಬಹುದಾಗಿದೆ. ಆನ್‌ಲೈನ್‌ ರಿಟರ್ನ್ ಫೈಲಿಂಗ್‌ ಮಾಡುವುದರಿಂದ ರಿಫ‌ಂಡ್‌ ಪ್ರಕ್ರಿಯೆ ಸುಲಭ ಮತ್ತು ಖಚಿತವೂ ಆಗಿದೆ. ಬಡ್ಡಿ ಸಹಿತ ನಿಮ್ಮ ದುಡ್ಡು ನಿಮಗೆ ವಾಪಾಸ್‌ ಬರುತ್ತದೆ.

ಒಟ್ಟಿನಲ್ಲಿ ಟಿಡಿಎಸ್‌ ಬಗ್ಗೆ ಅನಗತ್ಯ ಗೊಂದಲಗಳನ್ನು ಮಾಡಿಕೊಳ್ಳಲಾಗಿದೆ. ಮುಕ್ತವಾಗಿ ಕಾನೂನು ಬದ್ಧವಾಗಿ ವ್ಯವಹರಿಸುವುದೇ ಸುಲಭ ಮತ್ತು ಒಳ್ಳೆಯದು. 

(ವಿ.ಸೂ: ಈ ಕೊರೆತವನ್ನು ಸದ್ರಿ ವಿತ್ತ ವರ್ಷ 2017-18ಕ್ಕೆ ಅನ್ವಯವಾಗುವಂತೆ ಕೊರೆಯಲಾಗಿದೆ. ಇದೇ ಫೆ. 1ರಂದು ಮಂಡಿಸಲಾದ ಬಜೆಟ್‌ ಪ್ರಸ್ತಾಪಗಳು ಮುಂದಿನ ವಿತ್ತ ವರ್ಷ 2018-19ಕ್ಕೆ ಅನ್ವಯವಾಗುತ್ತವೆ. ದಯವಿಟ್ಟು ಎರಡನ್ನೂ ಒಟ್ಟಾಗಿಸಿ ಸಜ್ಜಿಗೆ – ಬಜಿಲ್‌ ಮಾಡಬಾರದಾಗಿ ವಿನಂತಿ.

ಟಾಪ್ ನ್ಯೂಸ್

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.