ಸುಮಲತಾ ಬಗ್ಗೆ ಹಗುರ ಮಾತು ಬೇಡ: ಬಿಎಸ್ವೈ
Team Udayavani, Mar 22, 2019, 2:19 AM IST
ಬೆಂಗಳೂರು: “ಸುಮಲತಾ ಅಂಬರೀಶ್ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಹಗುರವಾಗಿ ಮಾತನಾಡುವುದು ಸರಿಯಲ್ಲ. ಇದನ್ನು ಮಂಡ್ಯದ ಜನ ಸಹಿಸುವುದಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿ, ಅಂಬರೀಶ್ ಅವರು ವಿಧಿವಶರಾದಾಗ ಹೆಲಿಕಾಪ್ಟರ್ನಲ್ಲಿ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಿದ್ದವರು, ಈಗ ಸುಮಲತಾ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಬುಧವಾರ ಸುಮಲತಾ ಅವರು ಮಂಡ್ಯದಲ್ಲಿ ಸಮಾವೇಶ ನಡೆಸುವ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಹಾಗೂ ಕೇಬಲ್ ನೆಟ್ವರ್ಕ್ ಕಡಿತಗೊಳಿಸಿದ್ದು ಸರಿಯಲ್ಲ. ಇದು ಕುಮಾರಸ್ವಾಮಿಯವರ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಸುಮಲತಾ ಅವರು ಸರಿಯಾದ ಉತ್ತರವನ್ನೇ ನೀಡಿದ್ದಾರೆ. ಇದು ಮುಂಬರುವ ಚುನಾವಣೆಯಲ್ಲಿ ನೇರ ಪರಿಣಾಮ ಬೀರಲಿದೆ ಎಂದರು.