ಕೇರಳದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಂಗಳೂರಿನಲ್ಲಿ ವೋಟರ್ ಐಡಿ
Team Udayavani, Jan 23, 2018, 10:21 AM IST
ಮಂಗಳೂರು: ನಗರದ ಹಾಸ್ಟೆಲ್ನಲ್ಲಿ ವಾಸವಿರುವ ಕೇರಳ ಮೂಲದ ಕೆಲವು ವಿದ್ಯಾರ್ಥಿಗಳ ಹೆಸರನ್ನು ಮಂಗಳೂರಿನ ಮತದಾರರ ಪಟ್ಟಿಯಲ್ಲಿ ದಾಖಲೆ ರಹಿತವಾಗಿ ಸೇರ್ಪಡೆಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಮಂಗಳೂರು ದಕ್ಷಿಣ ಬಿಜೆಪಿ ಮುಖಂಡರು ಬದ್ರಿನಾಥ್ ಕಾಮತ್ ನೇತೃತ್ವದಲ್ಲಿ ಪಾಲಿಕೆಯ ಚುನಾವಣಾ ಶಾಖೆಗೆ ಸೋಮವಾರ ಮುತ್ತಿಗೆ ಹಾಕಿದರು. ಕಳೆದ ಚುನಾವಣೆ ಸಂದರ್ಭ ನಡೆದಿದ್ದ ಇಂಥ ಹುನ್ನಾರ ಈ ಬಾರಿಯೂ ನಡೆದಿದ್ದು, ಸಾಕ್ಷಿ ಸಹಿತ ಬಹಿರಂಗವಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿ, ಚುನಾವಣಾಧಿಕಾರಿಯನ್ನು ತರಾಟೆಗೆತ್ತಿಕೊಂಡರು.
ಈ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಹಾಗೂ ಕಳೆದ 15 ದಿನಗಳಿಂದ ಮತದಾರರ ಪಟ್ಟಿಗೆ ನೋಂದಣಿ ಮಾಡಿರುವ ಅರ್ಜಿಗಳನ್ನು ಮರು ಪರಿಶೀಲನೆ ನಡೆಸಬೇಕು ಎಂದು ಅವರು ಪಾಲಿಕೆಯ ಉಪ ಆಯುಕ್ತರನ್ನು ಆಗ್ರಹಿಸಿದ್ದಾರೆ.
ಕೇರಳ ಮೂಲದ ಹಾಸ್ಟೆಲ್ ವಿದ್ಯಾರ್ಥಿಗಳ ಹೆಸರನ್ನು ಆಧಾರ ರಹಿತ ವಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಬಿಜೆಪಿ ಪದಾಧಿಕಾರಿಗಳು ಸೋಮವಾರ ಮನಪಾ ಕಚೇರಿಯ ಚುನಾವಣಾ ಶಾಖೆಗೆ ತೆರಳಿದ್ದರು. ಆಗ ಅಲ್ಲಿ ಅಧಿಕಾರಿಯ ಎದುರು ಒಂದೇ ಹಾಸ್ಟೆಲ್ಗೆ ಸೇರಿದ ವಿದ್ಯಾರ್ಥಿಗಳ ಅರ್ಜಿ ರಾಶಿ ಕಂಡುಬಂದಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಚುನಾವಣಾ ಶಾಖೆಯ ಅಧಿಕಾರಿಯು ಸೂಕ್ತ ಉತ್ತರ ನೀಡಿರಲಿಲ್ಲ ಎನ್ನಲಾಗಿದೆ. ಈ ವೇಳೆ ಸಾರ್ವಜನಿಕರು ಆಗಮಿಸಿ ಅಧಿಕಾರಿಯ ಕ್ರಮವನ್ನು ಪ್ರಶ್ನಿಸಿದರು. ಇದರಿಂದಾಗಿ ಕೆಲವು ಹೊತ್ತು ಮನಪಾ ಕಚೇರಿಯಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.