ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ
Team Udayavani, Jan 18, 2019, 1:25 AM IST
ಚಿಕ್ಕೋಡಿ: ಕಳೆದ ಎರಡು ದಿನದ ಹಿಂದೆ ಸಿಕ್ಕಿಂನ ಘನಟೋರನಲ್ಲಿ ಗುಡ್ಡ ಕುಸಿದು ಮೃತಪಟ್ಟ ವೀರಯೋಧನ ಅಂತ್ಯಕ್ರಿಯೆ ಆಡಿ ಗ್ರಾಮದಲ್ಲಿ ನೆರವೇರಿತು. ನಿಪ್ಪಾಣಿ ತಾಲೂಕಿನ ಆಡಿ ಗ್ರಾಮದ ರೋಹಿತ ಸುನೀಲ ದೇವರಡೆ(25) ಜ.14ರಂದು ಸಿಕ್ಕಿಂನ ಘನಟೋರನಲ್ಲಿ ಕರ್ತವ್ಯದಲ್ಲಿದ್ದಾಗ ಗುಡ್ಡ
ಕುಸಿದು ಮೃತಪಟ್ಟಿದ್ದರು. ಯೋಧನ ಪಾರ್ಥಿವ ಶರೀರ ಪುಣೆ ಮಾರ್ಗವಾಗಿ ಗುರುವಾರ ಬೆಳಗ್ಗೆ
ಸ್ವಗ್ರಾಮಕ್ಕೆ ಆಗಮಿಸಿತು. ನಂತರ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆದಿದೆ.
ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಶಾಲಾ ಮಕ್ಕಳು ಜೈಕಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದರು. ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಿದ ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪೊಲೀಸರು ವೀರಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿ ಕಾರಿ ರವೀಂದ್ರ ಕರಲಿಂಗನ್ನವರ, ತಹಶೀಲ್ದಾರ ಎಂ.ಎಸ್.ಬಣಸಿ, ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಸೇರಿದಂತೆ ಅಪಾರ ಜನಸ್ತೋಮದ ಮಧ್ಯೆ ಅಂತ್ಯಕ್ರಿಯೆ ನಡೆಯಿತು.