ಮೈತ್ರಿ ಪಕ್ಷದ ಸದಸ್ಯರ ನಡುವೆ “ಜಗಳ್ಬಂದಿ
Team Udayavani, Oct 12, 2017, 5:38 PM IST
ಮೈಸೂರು: ರಾಜ್ಯಸರ್ಕಾರ ಜಾರಿಗೆ ತಂದಿರುವ ಮಾತೃಪೂರ್ಣ ಯೋಜನೆ ಪರ-ವಿರುದ್ಧ ಸ್ಥಾಯಿ ಸಮಿತಿ ಅಧ್ಯಕ್ಷರೇ ವಾಗ್ವಾದ ನಡೆಸಿದ ಘಟನೆ ಜಿಪಂ ಕೆಡಿಪಿ ಸಭೆಯಲ್ಲಿ ನಡೆಯಿತು. ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತೃಪೂರ್ಣ ಯೋಜನೆ ಬಗ್ಗೆ ಜೆಡಿಎಸ್ ಸದಸ್ಯರಾದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಹಾಗೂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು ವಿರೋಧ ವ್ಯಕ್ತಪಡಿಸಿದರು. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿಜೆಪಿ ಸದಸ್ಯ ಯೋಜನೆ ಪರವಾಗಿ ಮಾತನಾಡಿದರು. ಜೆಡಿಎಸ್ ಸದಸ್ಯರಾದ ಜಿಪಂ ಅಧ್ಯಕ್ಷರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಹಿಸಿದ್ದರು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ಮತ್ತು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಲಕ್ಷ್ಮೀ, ಗಾಂಧಿ ಜಯಂತಿಯಂದು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಾತೃಪೂರ್ಣ ಯೋಜನೆಗೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿಲ್ಲ.
ಯಾವುದೇ ಗರ್ಭಿಣಿ, ಬಾಣಂತಿಯರು ಅಂಗನವಾಡಿಗೆ ಬಂದು ಊಟ ಮಾಡುತ್ತಿಲ್ಲ. ಹೀಗಾಗಿ ಮಾಡಿದ ಅಡುಗೆ ವ್ಯರ್ಥವಾಗುತ್ತಿದೆ. ಹೀಗಾಗಿ ಯೋಜನೆ ವಿಫಲವಾಗುತ್ತಿದೆ ಎಂದರು.
ಜಿಪಂ ಸಿಇಒ ಪಿ.ಶಿವಶಂಕರ್, 4 ತಿಂಗಳ ಹಿಂದೆ ಎಚ್.ಡಿ.ಕೋಟೆ ತಾಲೂಕಿನಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಿ ಅದರ ಯಶಸ್ಸಿನ ಆಧಾರದ ಮೇಲೆ ಸರ್ಕಾರ ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡಿದೆ ಎಂದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ.ರಾಧಾ, ಹಳ್ಳಿಯಲ್ಲಿ 10 ಜನ ಗರ್ಭಿಣಿ-ಬಾಣಂತಿಯರಿದ್ದರೆ ಆ ಪೈಕಿ 5 ರಿಂದ 6 ಜನರು ಅಂಗನವಾಡಿಗೆ ಬಂದು ಊಟ ಮಾಡಿ ಹೋಗುತ್ತಿದ್ದಾರೆ. ಹೀಗಾಗಿ ಯೋಜನೆ ವಿಫಲವಾಗಿದೆ ಎಂದು ಹೇಳಲಾಗಲ್ಲ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ, ಮಾತೃಪೂರ್ಣ ಯೋಜನೆ ಯಶಸ್ವಿಯಾಗುತ್ತೆ ಕಾದು ನೋಡೋಣ ಎಂದು ಸರ್ಕಾರದ ಯೋಜನೆಯನ್ನು ಸಮರ್ಥಿಸಿಕೊಂಡರು.
ಆಹಾರ ಇಲಾಖೆ ಉಪ ನಿರ್ದೇಶಕ ಡಾ.ಕಾ. ರಾಮೇಶ್ವರಪ್ಪ, ಜಿಲ್ಲೆಯ 390 ನ್ಯಾಯಬೆಲೆ ಅಂಗಡಿಗಳಲ್ಲಿ ಪಿಒಎಸ್ ಅಳವಡಿಸಲಾಗಿದೆ. ಆದರೆ, ತೊಂದರೆ ಕುರಿತು ಹುಣಸೂರು, ಪಿರಿಯಾಪಟ್ಟಣ ಹಾಗೂ ಕೆ.ಆರ್.ನಗರ ತಾಲೂಕುಗಳ ಕೆಲ ನ್ಯಾಯಬೆಲೆ ಅಂಗಡಿಗಳವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ಈ ಬಗ್ಗೆ ಚರ್ಚೆ ಸರಿಯಲ್ಲ ಎಂದರು.
ಮಕ್ಕಳ ಸ್ನೇಹಿ ಶೌಚಾಲಯ ನಿರ್ಮಿಸಿ: ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಾಣ ಸಂಬಂಧ 60 ಲಕ್ಷ ಹಣ ನೀಡಿದರೂ ನಿರ್ಮಿತಿ ಕೇಂದ್ರದವರು ಕಾಮಗಾರಿ ಮಾಡದೆ, ಜಿಎಸ್ಟಿ ಜಾರಿಯಾದ ಮೇಲೆ 15 ಸಾವಿರ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗುವುದಿಲ್ಲ ಎಂದು ಹಣವನ್ನು ಕೆಆರ್ಐಡಿಎಲ್ಗೆ ಹಸ್ತಾಂತರಿಸಿರುವುದಕ್ಕೆ ಸಭೆ ಅಸಮಾಧಾನ ವ್ಯಕ್ತಪಡಿಸಿತು.
ಸಿಇಒ ಮಧ್ಯಪ್ರವೇಶಿಸಿ, ಘಟಕ ವೆಚ್ಚ ಸಾಲದಿದ್ದರೆ 14ನೇ ಹಣಕಾಸು ಆಯೋಗದ ಅನುದಾನ ಬಳಸಿ ಮಕ್ಕಳ ಸ್ನೇಹಿ ಶೌಚಾಲಯ ನಿರ್ಮಿಸಿ, ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಎಂದು ಸೂಚಿಸಿದರು. ವರದಿ ಕೊಡಿ: ಮೈಸೂರು ತಾಲೂಕಿನ ಕೆಲ ಗ್ರಾಮ
ಗಳಲ್ಲಿರುವ ಕೋಳಿ ಫಾರಂಗಳಿಂದಾಗಿ ನೊಣಗಳ ಹಾವಳಿ ಹೆಚ್ಚಾಗಿದೆ. ಜತೆಗೆ ಸತ್ತ ಕೋಳಿಗಳನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುವುದರಿಂದ ನಾಯಿಗಳು ರಸ್ತೆಗಳಲ್ಲೆಲ್ಲಾ ಸತ್ತಕೋಳಿಗಳನ್ನು ಎಳೆದೊಯ್ಯುತ್ತಿರುತ್ತವೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಪಶುಪಾಲನಾ ಇಲಾಖೆ ಉಪ ನಿರ್ದೇಶಕರು ಪರಿಶೀಲನೆ ನಡೆಸಿ ವರದಿ ಕೊಡಿ ಎಂದು ಸಿಇಒ ಸೂಚಿಸಿದರು.