ಗದ್ದಲಕ್ಕೆ ಬಲಿಯಾದ ಕಲಾಪ
Team Udayavani, Dec 14, 2018, 6:25 AM IST
ಹೊಸದಿಲ್ಲಿ: ರಫೇಲ್ ಡೀಲ್, ರಾಮಮಂದಿರ ನಿರ್ಮಾಣ ವಿವಾದ ಮತ್ತು ಕಾವೇರಿ ನದಿ ನೀರು ಸೇರಿ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ವಿಪಕ್ಷಗಳು ಗುರುವಾರವೂ ಪ್ರತಿಭಟನೆ ಮುಂದುವರಿಸಿದ್ದು, ಸತತ ಎರಡನೇ ದಿನವೂ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪ ಕೊಚ್ಚಿ ಹೋಯಿತು. ಚಳಿಗಾಲದ ಅಧಿವೇಶನ ಆರಂಭವಾಗಿ ಮೂರನೇ ದಿನವಾದ ಗುರುವಾರ, ತಮಿಳುನಾಡು ಸಂಸದರು ಕಾವೇರಿ ವಿಚಾರದಲ್ಲಿ ಪ್ರತಿಭಟನೆ ಹಾಗೂ ಗದ್ದಲ ನಡೆಸಿದ್ದರಿಂದ ಯಾವ ಚರ್ಚೆಯನ್ನೂ ನಡೆಸಲು ಸಾಧ್ಯವಾಗಲಿಲ್ಲ.
ಸಂಸತ್ ಭವನದ ಮೇಲೆ 2001ರಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಮೃತ 9 ವ್ಯಕ್ತಿಗಳಿಗೆ ಗೌರವ ನಮನವನ್ನು ಸದನ ಸಲ್ಲಿಸಿ, ಕಲಾಪ ಆರಂಭಿಸುತ್ತಿದ್ದಂತೆಯೇ ಎಐಎಡಿಎಂಕೆ ಮತ್ತು ಡಿಎಂಕೆ ಸಂಸದರು ಸ್ಪೀಕರ್ ಎದುರು ಧಾವಿಸಿ ಘೋಷಣೆ ಕೂಗಲು ಆರಂಭಿಸಿದರು. ಆಂಧ್ರಪ್ರದೇಶದ ಸಂಸದರೂ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಆರಂಭಿಸಿದರು. ಇದರಿಂದ ಕ್ರುದ್ಧಗೊಂಡ ಸಭಾಪತಿ ವೆಂಕಯ್ಯ ನಾಯ್ಡು, ‘ಸಂಸತ್ ಅನ್ನು ರಕ್ಷಿಸುವ ಸಲುವಾಗಿ 9 ಮಂದಿ ತಮ್ಮ ಪ್ರಾಣವನ್ನೇ ಬಲಿ ನೀಡಿದ್ದಾರೆ. ದಯವಿಟ್ಟು ಇವತ್ತು ಕಲಾಪಕ್ಕೆ ಅಡ್ಡಿ ಮಾಡಬೇಡಿ. ಇವತ್ತೂ ಕಲಾಪ ನಡೆಯದಿದ್ದರೆ ತಪ್ಪು ಸಂದೇಶ ರವಾನೆಯಾಗುತ್ತದೆ’ ಎಂದು ಮನವಿ ಮಾಡಿದರಾದರೂ, ಸಂಸದರು ಬಗ್ಗದ್ದರಿಂದ ಸದನವನ್ನು ಮುಂದೂಡಲಾಯಿತು. ಇದೇ ರೀತಿ ಲೋಕಸಭೆಯಲ್ಲೂ ಗದ್ದಲ ಉಂಟಾದ್ದರಿಂದ ಪ್ರಶ್ನೋತ್ತರ ವೇಳೆಯಲ್ಲೇ ಎರಡು ಬಾರಿ ಮುಂದೂಡಲಾಯಿತು. ನಂತರ ಶೂನ್ಯವೇಳೆಯಲ್ಲಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
5200 ಕೋಟಿ ರೂ. ಜಾಹೀರಾತು: ಸರಕಾರ 2014-15ರಿಂದ ಈವರೆಗೆ ಜಾಹೀರಾತಿಗಾಗಿ 5,200 ಕೋಟಿ ರೂ. ವೆಚ್ಚ ಮಾಡಿದೆ ಎಂದು ಲೋಕಸಭೆಗೆ ಮಾಹಿತಿ ಮತ್ತು ವಾರ್ತಾಪ್ರಸಾರ ಸಚಿವ ರಾಜ್ಯ ವರ್ಧನ ರಾಥೋಡ್ ಹೇಳಿದ್ದಾರೆ. 2014-15 ರಲ್ಲಿ 979.78 ಕೋಟಿ ರೂ. 2015-16 ರಲ್ಲಿ 1160.16 ಕೋಟಿ ರೂ., 2016-17 ರಲ್ಲಿ 1264.26 ಕೋಟಿ ರೂ ಮತ್ತು 2017-18 ರಲ್ಲಿ 1313.57 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದಿದ್ದಾರೆ.
ಅಗಲಿದ ಗಣ್ಯರಿಗೆ ಸಂತಾಪ: ಸಂಸತ್ ಮೇಲೆ ಉಗ್ರದಾಳಿಯಲ್ಲಿ ಹುತಾತ್ಮ ಯೋಧ ರಿಗೆ ಹಾಗೂ ಇತ್ತೀಚೆಗೆ ಅಗಲಿದ ಬಿಜೆಪಿ ಮುಖಂಡರಿಗೆ ಸಂಸದೀಯ ಪಕ್ಷದ ಸಭೆ ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದರು. ಸಂಸದರಾಗಿದ್ದ ಅನಂತಕುಮಾರ್, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಇತರ ಗಣ್ಯರಿಗೆ ಗೌರವ ನಮನ ಸಲ್ಲಿಸಲಾಯಿತು. ಈ ವೇಳೆ ಸಂಸದರನ್ನುದ್ದೇಶಿಸಿ ಮಾತನಾಡಿದ ಮೋದಿ, ಪಂಚರಾಜ್ಯ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಗ್ಗೆ ನೇರವಾಗಿ ಪ್ರಸ್ತಾಪ ವನ್ನೇ ಮಾಡಲಿಲ್ಲ.
ಯೋಧರ ಕೃತಕ ಅಂಗಾಂಗಕ್ಕೆ ಸರಕಾರ ವೆಚ್ಚ ಭರಿಸಲಿ: ಕೇಂದ್ರ ಸರ್ಕಾರ ಆರೋಗ್ಯ ಸ್ಕೀಮ್ ಅಡಿಯಲ್ಲಿ ಯೋಧರ ಕೃತಕ ಅಂಗಾಂಗ ಅಳವಡಿಕೆ ವೆಚ್ಚದಲ್ಲಿ ಶೇ. 30- 40ರಷ್ಟನ್ನು ಮಾತ್ರ ಸರಕಾರ ಭರಿಸುತ್ತಿದ್ದು, ಉಳಿದ ವೆಚ್ಚವನ್ನು ಸಿಆರ್ಪಿಎಫ್ ಭರಿಸುತ್ತಿದೆ. ಬದಲಿಗೆ ಸರಕಾರವೇ ಸಂಪೂರ್ಣ ವೆಚ್ಚ ಭರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ನೇತೃತ್ವದ ಸಂಸದೀಯ ಸಮಿತಿಯೊಂದು ಸೂಚಿಸಿದೆ.
ಮೋದಿ, ರಾಹುಲ್ ಮಾತಿಲ್ಲ
ಸಂಸತ್ ದಾಳಿಯಲ್ಲಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸುವ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಸಮೀಪದಲ್ಲೇ ಸಾಗಿದ್ದರೂ, ಇಬ್ಬರೂ ಉಭಯ ಕುಶಲೋಪರಿಯನ್ನೂ ನಡೆಸಿಲ್ಲ. ಆದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ರನ್ನು ಭೇಟಿ ಮಾಡಿ ಮೋದಿ ಮಾತನಾಡಿದರು. ಇದೇ ರೀತಿ ಸಚಿವ ವಿಜಯ್ ಗೋಯೆಲ್ ಹಾಗೂ ಸಚಿವ ರಾಮದಾಸ್ ಅಠಾವಳೆ ಅವರು ರಾಹುಲ್ ಜೊತೆಗೆ ಮಾತನಾಡಿದ್ದು ಕಂಡುಬಂತು.
ರಾಘವೇಂದ್ರ ಪ್ರಮಾಣ ಸ್ವೀಕಾರ
ಶಿವಮೊಗ್ಗ ಉಪಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾದ ಬಿ. ವೈ. ರಾಘವೇಂದ್ರ ಗುರುವಾರ ಲೋಕಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ತಂದೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ರಾಘವೇಂದ್ರ ಸ್ಪರ್ಧಿಸಿ ಗೆಲುವು ಕಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!