ಆರೆಸ್ಸೆಸ್, ಬಿಜೆಪಿಗರ ಹತ್ಯೆಗೆ ಸಿಎಂ ಪಿಣರಾಯಿಯೇ ಜವಾಬ್ದಾರ
Team Udayavani, Oct 3, 2017, 3:18 PM IST
ಕಣ್ಣೂರು : ಕೇರಳದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮಂಗಳವಾರ ಪಯ್ಯನೂರಿನಲ್ಲಿ ಜನರಕ್ಷಾ ಯಾತ್ರೆಗೆ ಚಾಲನೆ ನೀಡಿದ್ದು, ಈ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಕಿಡಿಕಾರಿದ್ದಾರೆ.
‘ಕೇರಳದಲ್ಲಿ 2001 ರಿಂದ ಇಲ್ಲಿಯವರಗೆ ಸುಮಾರು 120 ಮಂದಿ ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರ ಕಗ್ಗೊಲೆಗಳು ನಡೆದಿವೆ. ಈ ಹತ್ಯೆಗಳಿಗೆ ಯಾರು ಕಾರಣ ಎಂದು ಸಿಪಿಐ(ಎಂ) ನೇತೃತ್ವದ ಸರ್ಕಾರ ಜನರಿಗೆ ತಿಳಿಸಲಿ. ಈ ಬಗ್ಗೆ ಪಿಣರಾಯಿ ವಿಜಯನ್ಗೆ ನನ್ನ ನೇರ ಪ್ರಶ್ನೆ, ಅವರ ಸ್ವಕ್ಷೇತ್ರವಾದ ಕಣ್ಣೂರಿನಲ್ಲೆ 84 ಹತ್ಯೆಗಳು ನಡೆದಿವೆ. ಅವರು ಉತ್ತರ ನೀಡಲಿ, ಉತ್ತರ ಇಲ್ಲ ಅಂದಾದರೆ ಅವರೇ ಜವಾಬ್ದಾರರು ಎಂದರ್ಥ’ ಎಂದರು.
‘ಜನ ರಕ್ಷ ಯಾತ್ರೆ ರಾಜಕೀಯ ಹತ್ಯೆಗಳಿಗೆ ವಿರುದ್ಧವಾಗಿ ಅಹಿಂಸಾ ಮಾರ್ಗದ ಹೋರಾಟ. ಇದನ್ನು ಸಿಎಂ ತವರಿನಿಂದಲೇ ಆರಂಭಿಸಿದ್ದೇವೆ’ ಎಂದು ಶಾ ಹೇಳಿದರು.
ಜನ ರಕ್ಷ ಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದ್ದು ಅಕ್ಟೋಬರ್ 17 ರಂದು ತಿರುವನಂತಪುರಂನಲ್ಲಿ ಬೃಹತ್ ಸಮಾವೇಶದ ಮೂಲಕ ಮುಕ್ತಾಯಗೊಳ್ಳಲಿದೆ.