ತೆಲಂಗಾಣ: ಸರ್ಕಾರವನ್ನು ಟೀಕಿಸಿದ್ರೆ ಜಾಮೀನಿಲ್ಲದೆ ಜೈಲು
Team Udayavani, Jan 28, 2018, 11:48 AM IST
ಹೈದರಾಬಾದ್: ಇನ್ನು ಮುಂದೆ ತೆಲಂಗಾಣದಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು, ವಿಶೇಷವಾಗಿ ರಾಜ್ಯ ಸರ್ಕಾರವನ್ನು ಟೀಕಿಸಿದರೆ ಕಂಬಿ ಎಣಿಸಬೇಕಾದೀತು. ಮಾತ್ರವಲ್ಲ ಅಂಥ ತಪ್ಪಿಗೆ ಜಾಮೀನು ಕೂಡ ಸಿಗಲಾರದು. ಅಂಥವರನ್ನು ಕೋರ್ಟ್ ಒಪ್ಪಿಗೆಗೆ ಕಾಯದೇ ಬಂಧಿಸುವ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಒಪ್ಪಿಗೆ ನೀಡಿದ್ದಾರೆ.
ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಇತರ ವ್ಯವಸ್ಥೆಗಳಲ್ಲಿ ಸೂಕ್ತ ಹೆಸರುಗಳಿಲ್ಲದೆ ಕಟುವಾಗಿ ಟೀಕಿಸಿದರೆ ಭಾರತೀಯ ದಂಡ ಸಂಹಿತೆ (ಐಪಿಸಿ) 506 ಮತ್ತು 507ರ ಅನ್ವಯ ಬಂಧಿಸುವ ಅವಕಾಶ ಕಲ್ಪಿಸಲಾಗಿದೆ ಎಂದು “ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ. ಈ ಕಾನೂನಿನಡಿ ಅಪರಾಧಿಗಳಿಗೆ 2ರಿಂದ 7 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್)ನೇತೃತ್ವದ ಸರ್ಕಾರದ ಈ ಕ್ರಮಕ್ಕೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.