ಈಶಾನ್ಯ, ಉ.ಪ್ರ.,ಕೇರಳದಲ್ಲಿ ಮಳೆ ಅಬ್ಬರಕ್ಕೆ ಒಟ್ಟು 66 ಸಾವು
Team Udayavani, Jun 15, 2018, 10:03 AM IST
ತಿರುವನಂತಪುರ/ಗುವಾಹಟಿ: ಕೇರಳ ದಲ್ಲಿ ಮುಂಗಾರಿನ ಆರ್ಭಟ ಜೋರಾಗಿದೆ. ಕಲ್ಲಿಕೋಟೆ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಐವರು ಅಸುನೀಗಿದ್ದು ಸೇರಿದಂತೆ 19 ಸಾವಿಗೀಡಾಗಿದ್ದಾರೆ. ಇತರ ಹದಿನೆಂಟು ಮಂದಿ ನಾಪತ್ತೆಯಾಗಿದ್ದಾರೆ. ಇದೇ ವೇಳೆ ಮಳೆ ಸಂಬಂಧಿ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ದೇಶದಲ್ಲಿ 66ಕ್ಕೆ ಏರಿಕೆಯಾಗಿದೆ.
ಬುಧವಾರ ರಾತ್ರಿಯಿಂದಲೇ ಭಾರಿ ಮಳೆಯಾಗುತ್ತಿದ್ದು, ಆರು ಜಿಲ್ಲೆಗಳಲ್ಲಿ ಅದರ ಪ್ರಮಾಣ ಹೆಚ್ಚಾಗಿದೆ. ಕಲ್ಲಿಕೋಟೆ, ಮಲಪ್ಪುರಂ, ಕಣ್ಣೂರು, ವಯನಾಡ್, ಪಾಲಕ್ಕಾಡ್ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಭಾರಿ ಹಾನಿಯಾಗಿದೆ. ಇದೇ ವೇಳೆ ಈಶಾನ್ಯ ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗಿ ನಾಲ್ವರು ಅಸುನೀಗಿದ್ದಾರೆ. ಅಸ್ಸಾಂನಲ್ಲಿ ರೈಲು ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಉತ್ತರ ಪ್ರದೇಶದಲ್ಲಿ ಬೀಸಿದ ಧೂಳಿನ ಬಿರುಗಾಳಿಗೆ 15 ಮಂದಿ ಅಸುನೀಗಿ,28 ಮಂದಿಗೆ ಗಾಯಗಳಾಗಿವೆ.
ಇದೇ ವೇಳೆ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ ವ್ಯಾಪ್ತಿಯಲ್ಲಿ ಗುರುವಾರ ವಾಯು ಮಾಲಿನ್ಯ ಪ್ರಮಾಣ ಗಂಭೀರ ಪ್ರಮಾಣಕ್ಕೆ ತಲುಪಿದೆ. ಮುಂದಿನ ಕೆಲವು ದಿನಗಳ ವರೆಗೆ ಅದು ಮುಂದುವರಿಯಲಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ನಿಷೇಧ ಹೇರಲಾಗಿದೆ.