ಪಂಚಪೀಠಗಳಿಂದ ಒಗ್ಗೂಡಿಸುವ ಕಾರ್ಯ
Team Udayavani, Sep 4, 2017, 2:43 PM IST
ರಾಯಚೂರು: ಕಿಲ್ಲೆ ಬೃಹನ್ಮಠದ 108 ಸಾವಿರ ದೇವರ ಕೊಳಂಕಿ ಜೀವೈಕ್ಯ ಗುರುಪಾದ ಶಿವಯೋಗಿ
ಶಿವಾಚಾರ್ಯ ಮಹಾಸ್ವಾಮೀಜಿಯ 966ನೇ ಜಯಂತಿ ಪರ್ವ ಸಮಾರಾಧನೆ ನಿಮಿತ್ತ ಹಮ್ಮಿಕೊಂಡ
11ನೇ ವರ್ಷದ ಸದ್ಭಾವನಾ ಪಾದಯಾತ್ರೆಗೆ ರಂಭಾಪುರಿ ಜಗದ್ಗುರು ಶ್ರೀ ಡಾ| ವೀರಸೋಮೇಶ್ವರ
ಭಗವತ್ಪಾದರು ಚಾಲನೆ ನೀಡಿದರು.
ಮಠದ ಆವರಣದಿಂದ ಶುರುವಾದ ಪಲ್ಲಕ್ಕಿ ಜತೆಗೆ ಸದ್ಭಾವನಾ ಪಾದಯಾತ್ರೆ ಪ್ರಮುಖ ರಸ್ತೆಗಳ ಮೂಲಕ ಕೊಳಂಕಿವರೆಗೆ ನಡೆಯಿತು. ಶ್ರೀಮಠದ ನೂರಾರು ಭಕ್ತರು ಸದ್ಭಾವನಾ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಇದಕ್ಕೂ ಮುಂಚೆ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ರಂಭಾಪುರಿ ಶ್ರೀಗಳು, ಕಿಲ್ಲೆ ಬೃಹನ್ಮಠದಿಂದ
ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಧರ್ಮಜಾಗೃತಿ, ರಾಷ್ಟ್ರಭಕ್ತಿಯನ್ನು ಬೆಳೆಸುವ
ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಜೀವನ ವಿಕಾಸಕ್ಕೆ ಧರ್ಮ ದಿಕ್ಸೂಚಿಯಾಗಿದೆ. ವೀರಶೈವ
ಧರ್ಮದ ಪಂಚಪೀಠಗಳು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ
ಎಂಬ ತತ್ವದಡಿ ಸಮಾಜಮುಖೀಯಾಗಿ ಶ್ರಮಿಸುತ್ತಿವೆ ಎಂದು ನುಡಿದರು.
ಕೆಲವರು ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶಪಡಿಸಲು ಹುನ್ನಾರ ನಡೆಸುತ್ತಿದ್ದಾರೆ. ಹೇಳುವುದು ಒಂದು ಮಾಡುವುದು ಇನ್ನೊಂದು ಎನ್ನುವಂತೆ ಹಲವರು ನಡೆದುಕೊಳ್ಳುತ್ತಿರುವುದೇ ಸಮಾಜದಲ್ಲಿ ಅಶಾಂತಿ ಸ್ಟಷ್ಟಿಗೆ ಕಾರಣವಾಗುತ್ತಿದೆ. ಇಂಥ ವೇಳೆ ಪಂಚಪೀಠಗಳು ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತಿವೆ. ಸ್ವ ಧರ್ಮದಲ್ಲಿ ನಿಷ್ಠೆ, ಪರಧರ್ಮದಲ್ಲಿ ಸಹಿಷ್ಣುತೆ ಬೇಕು. ಅಂದಾಗ ಮಾತ್ರ ಶಾಂತಿ ಸಮೃದ್ಧಿ ಸದಾ ನೆಲೆಸಲು ಸಾಧ್ಯ ಎಂದರು.
ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ನೀಲಗಲ್ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಸಾಲೂರು ಗುರುಲಿಂಗ ಜಂಗಮ ಶಿವಾಚಾರ್ಯ, ಸಿದ್ದರಬೆಟ್ಟ ವೀರಭದ್ರ ಶಿವಾಚಾರ್ಯರು ಇತರರು ಉಪಸ್ಥಿತರಿದ್ದರು.