ಗುರುಗುಂಟಾ ಜಾತ್ರೆ: ಜಾನುವಾರು ಮಾರಾಟ ಜೋರು
Team Udayavani, Mar 5, 2018, 5:42 PM IST
ಹಟ್ಟಿ ಚಿನ್ನದ ಗಣಿ: ಸಮೀಪದ ಗುರುಗುಂಟಾ ಅಮರೇಶ್ವರ ಜಾತ್ರೆಯಲ್ಲಿ ಜಾನುವಾರುಗಳ ಮಾರಾಟ ಜೋರಾಗಿದೆ. ಜಾತ್ರೆಗೆ ಆಗಮಿಸಿದ್ದ ನೆರೆ ರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಎತ್ತುಗಳು, ಕೃಷಿ ಪರಿಕರಗಳು ರೈತರನ್ನು ಆಕರ್ಷಿಸುತ್ತಿದ್ದವು.
ಒಂದು ತಿಂಗಳು ನಡೆಯುವ ಜಾತ್ರೆಯಲ್ಲಿ ರೈತರಿಗೆ ಬಿತ್ತನೆ ಮತ್ತು ಕಟಾವಿಗೆ ಅಗತ್ಯವಾದ ಕೃಷಿ ಉಪಕರಣಗಳ ಪ್ರದರ್ಶನ ಏರ್ಪಡಿಸಲಾಗಿದೆ. ಕೋಠಾ, ಯಲಗಟ್ಟಾ, ರೋಡಲಬಂಡ. ಮೇದಿನಾಪುರ, ಆನ್ವರಿ, ನಿಲೋಗಲ್ ಸೇರಿ ವಿವಿಧ ಗ್ರಾಮದ ರೈತರು ತಮ್ಮ ಎತ್ತುಗಳನ್ನು ಮಾರಾಟಕ್ಕೆ ತಂದಿದ್ದಾರೆ. ನೇಗಿಲು, ಕುಂಟಿ, ಕೂರಿಗಿ, ಬುಕ್ಕ ತಲವು, ನಗ, ಬಾನಿ ಹೂಟಿ, ಹಗ್ಗ ಕೃಷಿಗೆ ಬೇಕಾಗುವ ಪರಿಕರಗಳನ್ನು ರೈತರು ಖರೀದಿಸುತ್ತಿದ್ದಾರೆ.
ಹೆಚ್ಚಿದ ಬೇಡಿಕೆ: ಐದು ದಿನಗಳವರೆಗೆ ನಡೆಯುವ ಜಾನುವಾರು ಜಾತ್ರೆಯಲ್ಲಿ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ಜಿಲ್ಲೆಗಳ ರೈತರು ಆಗಮಿಸಿ ಎತ್ತುಗಳನ್ನು ಖರೀದಿಸುತ್ತಿದ್ದರಿಂದ. ಆಯಾ ತಳಿಗನುಗುಣವಾಗಿ ಎತ್ತುಗಳಿಗೆ 25 ಸಾವಿರದಿಂದ 4 ಲಕ್ಷ ರೂ.ವರೆಗೂ ಬೆಲೆ ನಿಗದಿಪಡಿಸಲಾಗಿದೆ.
ರೈತರಿಗೆ ಸೌಲಭ್ಯ: ಜಾತ್ರಾ ಸಮಿತಿಯಿಂದ ಎತ್ತುಗಳ ಮಾರಾಟ ಮತ್ತು ಖರೀದಿಗೆ ಆಗಮಿಸಿರುವ ರೈತರಿಗೆ ಅನ್ನಸಂತರ್ಪಣೆ, ನೀರಿನ ವ್ಯವಸ್ಥೆ ಮಾಡಲಾಗಿದೆ. ಎತ್ತುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಗುರುಗುಂಟಾ ಜಾತ್ರೆಯಲ್ಲಿ ವಿವಿಧ ತಳಿಯ ಎತ್ತುಗಳು ಮಾರಾಟಕ್ಕಿವೆ ಎಂದು ಸಂಬಂಧಿಕರು ತಿಳಿಸಿದ್ದರಿಂದ ಎತ್ತುಗಳ ಖರೀದಿಗೆ ಆಗಮಿಸಿದ್ದೇನೆ.
ಮಲ್ಲಿಕಾರ್ಜುನ, ರೈತ ಯಾದಗಿರಿ ಜಿಲ್ಲೆ.
ಎತ್ತುಗಳನ್ನು ಪಾಲನೆ ಪೋಷಣೆ ಮಾಡಿ ದಷ್ಟಪುಷ್ಟವಾಗಿ ಬೆಳಸಿದ್ದೇವೆ. ಸೂಕ್ತ ಬೆಲೆ ದೊರೆತರೆ ಅವುಗಳನ್ನು ಮಾರುತ್ತೇವೆ.
ಹನುಮಂತ ಸುರಪುರ, ರೈತ ಯಲಗಟ್ಟಾ ಗ್ರಾಮ