ಶಿಸ್ತಿನ ಆಟಕ್ಕೆ ಸಂದ ಗೆಲುವು: ರೋಹಿತ್
Team Udayavani, Sep 21, 2018, 6:25 AM IST
ದುಬಾೖ: “ಇದು ಶಿಸ್ತಿನ ಆಟಕ್ಕೆ ಸಂದ ಗೆಲುವು…’ ಎಂಬುದಾಗಿ ಪಾಕಿಸ್ಥಾನ ವಿರುದ್ಧ ಮೊಳಗಿಸಿದ 8 ವಿಕೆಟ್ ಜಯಭೇರಿಯ ಬಳಿಕ ಭಾರತದ ನಾಯಕ ರೋಹಿತ್ ಶರ್ಮ ಪ್ರತಿಕ್ರಿಯಿಸಿದ್ದಾರೆ.
ಒಂದು ದಿನದ ಹಿಂದಷ್ಟೇ ಅನನುಭವಿ ಹಾಂಕಾಂಗ್ ವಿರುದ್ಧ ಗೆಲುವಿಗಾಗಿ ಪರದಾಡಿದ ಟೀಮ್ ಇಂಡಿಯಾ, ಬಲಿಷ್ಠ ಪಾಕಿಸ್ಥಾನದ ಎದುರು ಹೇಗೆ ಆಡುತ್ತದೋ, ಏನು ಮಾಡುತ್ತದೋ ಎಂಬ ಅಳುಕು ಭಾರತದ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆಮಾಡಿಕೊಂಡಿತ್ತು. ಆದರೆ ಎಲ್ಲರ ಅಂಜಿಕೆ, ಅನುಮಾನಗಳನ್ನೆಲ್ಲ ಹೋಗಲಾಡಿಸುವ ರೀತಿಯಲ್ಲಿ ರೋಹಿತ್ ಪಡೆ ಪಾಕ್ ಮೇಲೆ ಸವಾರಿ ಮಾಡಿ 8 ವಿಕೆಟ್ಗಳ ಗೆಲುವು ತನ್ನದಾಗಿಸಿತು. “ಎ’ ವಿಭಾಗದ ಅಜೇಯ ತಂಡವಾಗಿ ಸೂಪರ್-4 ಹಂತಕ್ಕೆ ಲಗ್ಗೆ ಇರಿಸಿತು.
ಭಾರತ-ಪಾಕಿಸ್ಥಾನ ನಡುವಿನ ಈ ಪಂದ್ಯದಲ್ಲಿ ಎಂದಿನ ಜೋಶ್, ಜಿದ್ದು ಕಂಡುಬರಲಿಲ್ಲ. ಏಕಪಕ್ಷೀಯವಾಗಿ ಸಾಗಿ ಭಾರತದ ಸುಲಭ ಜಯದೊಂದಿಗೆ ಸಮಾಪ್ತಿಯಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನವನ್ನು 43.1 ಓವರ್ಗಳಲ್ಲಿ 162ಕ್ಕೆ ಹಿಡಿದು ನಿಲ್ಲಿಸಿದ ಭಾರತ, ಬಳಿಕ 29 ಓವರ್ಗಳಲ್ಲಿ ಎರಡೇ ವಿಕೆಟಿಗೆ 164 ರನ್ ಬಾರಿಸಿ ಗೆಲುವು ಒಲಿಸಿಕೊಂಡಿತು.
ಅಮೋಘ ಬೌಲಿಂಗ್ ಸಾಧನೆ
“ಪಂದ್ಯದ ಆರಂಭದಿಂದಲೇ ನಾವು ಶಿಸ್ತಿನ ಪ್ರದರ್ಶನ ನೀಡಿದೆವು. ಹಿಂದಿನ ದಿನದ ತಪ್ಪುಗಳನ್ನು ತಿದ್ದಿಕೊಳ್ಳುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು. ಬೌಲಿಂಗ್ ಯೂನಿಟ್ ಪಾಲಿಗೆ ಇದೊಂದು ಸ್ಮರಣೀಯ ಪಂದ್ಯ. ಈ ಟ್ರ್ಯಾಕ್ ಮೇಲೆ ಹೇಗೆ ದಾಳಿ ಸಂಘಟಿಸಬೇಕೆಂದು ಯೋಜಿಸಿದ್ದೆವೋ ಅದು ಪಕ್ಕಾ ಆಯಿತು. ಪಾಕ್ ಬಳಿ ಕ್ವಾಲಿಟಿ ಬ್ಯಾಟಿಂಗ್ ಲೈನ್ಅಪ್ ಇದೆ. ಹೀಗಾಗಿ ಅರ್ಲಿ ಬ್ರೇಕ್ ನೀಡುವುದು ನಮ್ಮ ಉದ್ದೇಶವಾಗಿತ್ತು. ಇದನ್ನು ಭುವನೇಶ್ವರ್ ಸಾಕಾರಗೊಳಿಸಿದರು. ನಮ್ಮ ಸ್ಪಿನ್ ಬೌಲಿಂಗ್ ಕೂಡ ಬಿಗುವಿನಿಂದ ಕೂಡಿತ್ತು. ಕೇದಾರ್ ಜಾಧವ್ ತಮ್ಮ ಬೌಲಿಂಗನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಂಡರು…’ ಎಂಬುದಾಗಿ ರೋಹಿತ್ ಹೇಳಿದರು.
ಹಿಂದಿನ ದಿನವಷ್ಟೇ ಹಾಂಕಾಂಗ್ನ ಆರಂಭಿಕ ವಿಕೆಟಿಗೆ 174 ರನ್ ಬಿಟ್ಟುಕೊಟ್ಟಿದ್ದ ಭಾರತ, ಕೆಲವೇ ಗಂಟೆಗಳಲ್ಲಿ ಪಾಕಿಸ್ಥಾನವನ್ನು ಇದಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದ್ದು ಅಸಾಮಾನ್ಯ ಸಾಧನೆಯೇ ಆಗಿದೆ.
“ಆರಂಭವೇ ಆಘಾತಕಾರಿಯಾಗಿತ್ತು’
“ನಮ್ಮ ಆರಂಭವೇ ಆಘಾತಕಾರಿಯಾಗಿತ್ತು. 5 ಓವರ್ಗಳೊಳಗೆ 2 ವಿಕೆಟ್ ಕಳೆದುಕೊಂಡೆವು. ಅನಂತರವೂ ವಿಕೆಟ್ ಉರುಳುತ್ತ ಹೋಯಿತು. ಹೀಗಾಗಿ ಪಂದ್ಯಕ್ಕೆ ಮರಳಲು ನಮಗೆ ಸಾಧ್ಯವೇ ಆಗಲಿಲ್ಲ…’ ಎಂಬುದು ಪರಾಜಿತ ಪಾಕಿಸ್ಥಾನ ತಂಡದ ನಾಯಕ ಸಫìರಾಜ್ ಅಹ್ಮದ್ ಪ್ರತಿಕ್ರಿಯೆ.
“ನಾವು ಭಾರತದ ಇಬ್ಬರು ಪ್ರಧಾನ ಸ್ಪಿನ್ನರ್ಗಳನ್ನು ಎದುರಿಸಲು ಸಜ್ಜಾಗಿದ್ದೆವು. ಆದರೆ ತೃತೀಯ ಸ್ಪಿನ್ನರ್ ಕೇದಾರ್ ಜಾಧವ್ ತಂತ್ರವನ್ನು ಅರಿಯಲು ವಿಫಲರಾದೆವು. ಸೂಪರ್ ಫೋರ್ಗಿಂತ ಮೊದಲು ನಮ್ಮ ಪಾಲಿಗೆ ಇದೊಂದು ಎಚ್ಚರಿಕೆಯ ಗಂಟೆ’ ಎಂಬುದಾಗಿ ಸಫìರಾಜ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ