ಪಾತಾಳ ಗಂಗೆಗೆ ಪೆಟ್ಟು:ಯೋಜನೆ ಮರುಪರಿಶೀಲನೆಗೆ ಚಿಂತನೆ
Team Udayavani, May 16, 2017, 3:45 AM IST
ಬೆಂಗಳೂರು: ರಾಜ್ಯದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಭೂಗರ್ಭದಿಂದಲೇ ನೀರು ಮೇಲೆತ್ತಿ ಬಳಸುವ “ಪಾತಾಳಗಂಗೆ’ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆ ಬಗ್ಗೆ ಮರುಪರಿಶೀಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇದರಿಂದಾಗಿ ರಾಜ್ಯದ ಹತ್ತು ಪ್ರದೇಶಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಭೂಮಿಯ ಆಳಕ್ಕೆ ಕೊಳವೆಬಾವಿ ರೀತಿಯ ಬಾವಿ ತೋಡಿ ಭೂಗರ್ಭದ 3ರಿಂದ 8 ಸಾವಿರ ಮೀಟರ್ ಆಳದಲ್ಲಿರುವ ಜಲನಾಡಿಗಳಿಂದ ನೀರು ಮೇಲೆತ್ತಿ ಅದನ್ನು ಬಳಸಿಕೊಳ್ಳುವ ಪಾತಾಳ ಗಂಗೆ ಯೋಜನೆ ಜಾರಿಯಾಗುವುದು ಅನುಮಾನ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಆದರೆ, ಯೋಜನೆ ಕೈಬಿಡುವ ಕುರಿತು ಈಗಲೇ ನಿರ್ಧಾರ ಕೈಗೊಂಡಿಲ್ಲ. ಪರಿಸರವಾದಿಗಳು, ಭೂಗರ್ಭ ಶಾಸ್ತ್ರಜ್ಞರು, ವಿಜ್ಞಾನಿಗಳು ಎತ್ತಿದ ಕೆಲವು ಪ್ರಶ್ನೆಗಳ ಬಗ್ಗೆ ಯೋಜನೆ ಜಾರಿಗೊಳಿಸುವ ವಾಟರ್ ಕ್ವೆಸ್ಟ್ ಸಂಸ್ಥೆ ಜತೆ ಚರ್ಚಿಸಿ ಉತ್ತರ ಪಡೆಯಲಾಗುವುದು. ಕೇಂದ್ರ ಸರ್ಕಾರ ಮತ್ತು ನೀತಿ ಆಯೋಗದ ಅಭಿಪ್ರಾಯವನ್ನೂ ಕೇಳಲಾಗುವುದು. ಅಲ್ಲದೆ, ಭೂಗರ್ಭದಿಂದ ನೀರು ಮೇಲಕ್ಕೆತ್ತಬಹುದು ಎಂದು ಕೇಂದ್ರಕ್ಕೆ ಸಲಹೆ ಮಾಡಿದ್ದ ವಿಜ್ಞಾನಿ ಮಾಶಾಳ್ಕರ್ ಅವರ ಬಳಿ ಅಧಿಕಾರಿಗಳನ್ನು ಕಳುಹಿಸಿ ಅವರಿಂದಲೂ ಮಾಹಿತಿ ಪಡೆಯಲಾಗುವುದು. ಬಳಿಕ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಯೋಜನೆ ಜಾರಿಗೊಳಿಸಬೇಕೇ, ಬೇಡವೇ? ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಪಾತಾಳಗಂಗೆ ಯೋಜನೆ ಕುರಿತು ಸಾಕಷ್ಟು ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸೋಮವಾರ ಪರಿಸರವಾದಿಗಳು, ಭೂಗರ್ಭ ಶಾಸ್ತ್ರಜ್ಞರು, ವಿಜ್ಞಾನಿಗಳ ಜತೆ ಸಮಾಲೋಚನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಭೆಯಲ್ಲಿ ಎಲ್ಲಾ ಆಯಾಮಗಳಿಂದ ಯೋಜನೆ ಬಗ್ಗೆ ಮುಕ್ತವಾಗಿ ಚರ್ಚಿಸಲಾಗಿದೆ. ಕೆಲವರು ತಂತ್ರಜ್ಞಾನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸಬಹುದು ಎಂದು ಹೇಳಿದ್ದಾರೆ. ಇನ್ನು ಕೆಲವರು ಇದು ಪರಿಸರಕ್ಕೆ ಹಾನಿಕಾರಕ ಮಾತ್ರವಲ್ಲ, ನೀರು ಕೂಡ ಕುಡಿಯಲು ಯೋಗ್ಯವಲ್ಲ. ಆದ್ದರಿಂದ ಯೋಜನೆ ಬೇಡವೇ ಬೇಡ ಎಂಬ ವಾದ ಮಂಡಿಸಿದ್ದಾರೆ. ಪರಿಸರ ಮತ್ತು ಆರ್ಥಿಕ ಪರಿಣಾಮಗಳನ್ನು ಅಧ್ಯಯನ ಮಾಡಿ ತೀರ್ಮಾನ ಕೈಗೊಳ್ಳಬೇಕು ಎಂದು ಕೆಲವರು ಸಲಹೆ ಮಾಡಿದ್ದಾರೆ ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ತಂತ್ರಜ್ಞಾನ ಒದಗಿಸುವ ವಾಟರ್ ಕ್ವೆಸ್ಟ್ ಸಂಸ್ಥೆಯ ಜತೆ ಸಮಾಲೋಚನೆ ನಡೆಸಲಾಗುವುದು. ಅವರು ಎತ್ತಿದ ಅನುಮಾನಗಳಿಗೆ ಸ್ಪಷ್ಟೀಕರಣ ಪಡೆಯಲಾಗುವುದು. ಇನ್ನೊಂದೆಡೆ ಕೇಂದ್ರ ಸರ್ಕಾರ ಮತ್ತು ನೀತಿ ಆಯೋಗದ ಜತೆಗೂ ಯೋಜನೆ ಬಗ್ಗೆ ಮಾಹಿತಿ ಹಂಚಿಕೆ ಮಾಡಿಕೊಳ್ಳಲಾಗುವುದು. ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ಹೊರಬರುವ ಅಭಿಪ್ರಾಯದ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಯೋಜನೆ ಜಾರಿಗೊಳಿಸಬೇಕೇ, ಬೇಡವೇ? ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಯೋಜನೆಗೆ ಸಭೆಯಲ್ಲಿ ತೀವ್ರ ವಿರೋಧ
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಪಾತಾಳ ಗಂಗೆ ಯೋಜನೆ ಬಗ್ಗೆ ಪರಿಸರವಾದಿಗಳು, ಭೂಗರ್ಭ ಶಾಸ್ತ್ರಜ್ಞರು, ಕೆಲವು ವಿಜ್ಞಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ವಾಟರ್ ಕ್ವೆಸ್ಟ್ ಎಂಬ ಸಂಸ್ಥೆಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ ಅವರು, ಯೋಜನೆ ತೀರಾ ಅವೈಜ್ಞಾನಿಕ ಎಂದು ಆರೋಪಿಸಿದರು ಎನ್ನಲಾಗಿದೆ.
ಸಭೆಗೆ ತಂತ್ರಜ್ಞಾನ ಒದಗಿಸುವ ಕಂಪೆನಿಯವರನ್ನೂ ಕರೆಸಬೇಕಿತ್ತು. ಸರ್ಕಾರ ಅವರ ಪರ ವಾದ ಮಂಡಿಸುವುದು ಎಷ್ಟು ಸರಿ. ಮೈಲಾಗಿ ವಾಟರ್ ಕ್ವೆಸ್ಟ್ ಎಂಬ ಕಂಪೆನಿ ಅಮೆರಿಕಾ ಮೂಲದ್ದಲ್ಲ, ಫ್ರಾನ್ಸ್ ಮೂಲದ್ದು. ದೇಶದಲ್ಲಿ ಸ್ಟಾರ್ಟ್ಅಪ್ ಕಂಪನಿ ಸ್ಥಾಪಿಸಿದ ಇಬ್ಬರು ಆ ಕಂಪೆನಿಯ ನೆರವಿನೊಂದಿಗೆ ಯೋಜನೆ ಜಾರಿಗೊಳಿಸಲು ಮುಂದಾಗಿದ್ದಾರೆ. ಆ ಕಂಪೆನಿಯಲ್ಲಿ ವಿಜ್ಞಾನಿಗಳೇ ಇಲ್ಲ. ಹೀಗಿರುವಾಗ ತಜ್ಞರ ಅಭಿಪ್ರಾಯವಿಲ್ಲದೆ ಹೇಗೆ ಯೋಜನೆ ಜಾರಿಗೊಳಿಸಲು ಒಪ್ಪಿಕೊಂಡಿರಿ ಎಂದು ಸಚಿವರನ್ನು ಪ್ರಶ್ನಿಸಿದರು ಎಂದು ತಿಳಿದುಬಂದಿದೆ.
ಈ ಕಾರಣದಿಂದಾಗಿ ನಿಮ್ಮ ಅಭಿಪ್ರಾಯವನ್ನು ಕಂಪೆನಿ ಅಧಿಕಾರಿಗಳ ಗಮನಕ್ಕೆ ತಂದು ಅವರಿಂದ ಸಮರ್ಪಕ ಉತ್ತರ ಪಡೆಯಲಾಗುವುದು. ಯೋಜನೆ ವೈಜ್ಞಾನಿಕವಾದರೆ ಮಾತ್ರ ಅದನ್ನು ಜಾರಿಗೊಳಿಸಲಾಗುವುದು ಎಂದು ಸಚಿವರು ಹೇಳಿದರು. ಆದರೆ, ಇದಕ್ಕೆ ಒಪ್ಪದ ಪರಿಸರವಾದಿಗಳು ಮತ್ತು ಭೂಗರ್ಭ ಶಾಸ್ತ್ರಜ್ಞರು, ಕಂಪೆನಿಯವರೊಂದಿಗೆ ಚರ್ಚಿಸುವಾಗ ನಮ್ಮನ್ನೂ ಕರೆಸಿ ಎಂದು ಒತ್ತಾಯಿಸಿದರು ಎಂದು ಹೇಳಲಾಗಿದೆ.
ಪಾತಾಳಗಂಗೆ ಯೋಜನೆ ಕೇಂದ್ರದ ಸಲಹೆ
ವಿಜ್ಞಾನಿ ಮಾಶಾಳ್ಕರ್ ಎಂಬುವರು ಭೂಗರ್ಭದಲ್ಲಿರುವ ಮ್ಯಾಗ್ನೆಟ್ ರೀಜನ್ನಲ್ಲಿರುವ ನೀರನ್ನು ಬಳಸಿಕೊಳ್ಳಲು ಪ್ರಯತ್ನ ಮಾಡಬಹುದು ಎಂದು ನೀಡಿದ್ದ ಸಲಹೆಯಂತೆ ಕೇಂದ್ರ ಸರ್ಕಾರ ಮತ್ತು ನೀತಿ ಆಯೋಗ 26 ರಾಜ್ಯಗಳಿಗೆ ಈ ಕುರಿತು ಮಾಹಿತಿ ನೀಡಿತ್ತು. ಅದರ ಆಧಾರದ ಮೇಲೆ ಪಾತಾಳಗಂಗೆ ಯೋಜನೆ ಜಾರಿಗೊಳಿಸಲು ತೀರ್ಮಾನಿಸಲಾಗಿತ್ತು ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಕೊಳವೆ ಬಾವಿ ಕೊರೆದು ಮ್ಯಾಗ್ನೆಟಿಕ್ ರೀಜನ್ನಲ್ಲಿರುವ ನೀರು ಮೇಲಕ್ಕೆತ್ತಿ ಬಳಸಿಕೊಳ್ಳಲು ಮೂರು ಕೊಳವೆಬಾವಿ ಕೊರೆಯುವ ಸಲುವಾಗಿ ಆರ್ಥಿಕ ನೆರವು ನೀಡುವ ಬಗ್ಗೆಯೂ ಕೇಂದ್ರ ಸರ್ಕಾರ ಮತ್ತು ನೀತಿ ಆಯೋಗ ಹೇಳಿತ್ತು ಎಂದು ಸಚಿವರು ತಿಳಿಸಿದರು.
26 ರಾಜ್ಯಗಳ ಪೈಕಿ ಇತರೆ ರಾಜ್ಯಗಳು ಒಪ್ಪದೇ ಇದ್ದರೂ ಕರ್ನಾಟಕ ಮಾತ್ರ ಒಪ್ಪಿಗೆ ನೀಡಿದ್ದೇಕೆ ಎಂಬ ಪ್ರಶ್ನೆಗೆ, ಇತರೆ ರಾಜ್ಯಗಳ ವಿಚಾರ ನಮಗೆ ಗೊತ್ತಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲದಿಂದ ನೀರಿಗೆ ತೀವ್ರ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಇಂಡಿ, ಕೋಲಾರ ಜಿಲ್ಲೆಯ ಶ್ರೀನಿವಾಸಪುರ, ಗದಗ ಜಿಲ್ಲೆಯ ಬೆಳವಡಿ, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ತುಮಕೂರು ಜಿಲ್ಲೆಯ ಪಾವಗಡ ಮತ್ತು ಕಲಬುರಗಿ ಜಿಲ್ಲೆಯ ಆಳಂದಗಳಲ್ಲಿ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿತ್ತು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್